ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸಂಸತ್ನಲ್ಲಿ ಅಸಭ್ಯ ವರ್ತನೆ ತೋರಿದ ವಿಪಕ್ಷದ ಸಂಸತ್ ಸದಸ್ಯರನ್ನು ಅಮಾನತು ಮಾಡಿದ ವಿಷಯದಲ್ಲಿ ಧರಣಿನಿರತ ವಿಪಕ್ಷಗಳ ನಾಯಕರು ಉಪ ರಾಷ್ಟ್ರಪತಿಗೆ ಅಗೌರವ ತರುವ ರೀತಿಯಲ್ಲಿ ಅಣಕ ಮಾಡಿರುವುದು ಹಾಗೂ ಈ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ಗಾಂಧಿ ನಡೆಯನ್ನು ಖಂಡಿಸಿ, ನಗರದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಹುಲ್ಗಾಂಧಿ ಭಾವಚಿತ್ರ ಹಿಡಿದು ಕಾಂಗ್ರೆಸ್ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿ, ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿ ನಡೆಸಿ ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಹುಲ್ ಗಾಂಧಿ ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ಭಾವಚಿತ್ರವನ್ನು ಕಸಿದುಕೊಂಡರು.ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ಮಾತನಾಡಿ, ಇತ್ತೀಚೆಗೆ ನಡೆದ ನಾಲ್ಕು ರಾಜ್ಯಗಳ ವಿಧಾನ ಸಭೆಯಲ್ಲಿ ಮತದಾರರು ಬಿಜೆಪಿ ಹೆಚ್ಚು ಒಲವು ತೋರಿರು ವುದರಿಂದ ಹತಾಶೆಗೊಂಡಿರುವ ವಿಪಕ್ಷದ ನಾಯಕರು ಬಿಜೆಪಿ ನೇತೃತ್ವದ ಸರ್ಕಾರಕ್ಕೆಕೆಟ್ಟ ಹೆಸರು ತರಲು ರೂಪಿಸಿರುವ ಷಡ್ಯಂತ್ರ ಎಂದರು.
ಸಂಸತ್ತಿನ ಒಳಗೆ ಪರಿಚಿತರು ಪ್ರವೇಶ ಮಾಡಿ ಹೊಗೆಬಾಂಬೆ ಸ್ಫೋಟಿಸಿರುವುದನ್ನು ನೆಪ ಮಾಡಿಕೊಂಡು, ಚರ್ಚೆಗೂ ಅವಕಾಶ ಕೊಡದೇ ಉಪ ಸಭಾಪತಿಗಳಿಗೆ ಅಗೌರವ ತೋರಿ ಸಂವಿಧಾನದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.ಅಮಾನತುಗೊಂಡು ಹೊರಗೆ ಬಂದ ನಂತರ ವಿಪಕ್ಷದ ಸಂಸತ್ ಸದಸ್ಯರು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸುವಂತೆ ವರ್ತಿಸಿದ ಟಿಎಂಸಿ ಸಂಸದ ಕಲ್ಯಾಣ್ ಚಟರ್ಜಿ ಅವರ ನಡೆಯನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ನಗುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರ ವರ್ತನೆ ತೀವ್ರ ಖಂಡನೀಯ ಇದು ಡಾ. ಬಿ.ಆರ್.ಅಂಬೇಡ್ಕರ್ಅವರ ಸಂವಿಧಾನಕ್ಕೆ ಮಾಡಿದ ಅವಮಾನ ಎಂದರು.
ಪ್ರತಿಭಟನೆಯಲ್ಲಿ ವಿರಾಟ್ ಶಿವು, ಸೂರ್ಯಕುಮಾರ್, ಆನಂದ್ ಭಗೀರಥ, ಮುಖಂಡರಾದ ನೂರೊಂದುಶೆಟ್ಟಿ, ಕುಲಗಾಣ ಶಾಂತಮೂರ್ತಿ, ಬಾಲಸುಬ್ರಹ್ಮಣ್ಯಂ, ಬಸವಣ್ಣ, ಮೂಡ್ನಾಕೂಡು ಪ್ರಕಾಶ್, ಶಿವಣ್ಣ, ಬುಲೆಟ್ಚಂದ್ರು, ಮಹದೇವಸ್ವಾಮಿ, ಮನ್. ಮಂಜುನಾಥ್, ಮಹೇಶ್, ಪರಶಿವಮೂರ್ತಿ, ರಾಘವೇಂದ್ರಇತರರು ಭಾಗವಹಿಸಿದ್ದರು.