ಸಾರಾಂಶ
ರಾಜ್ಯದಲ್ಲಿ ಪ್ರಧಾನಿ ಮೋದಿ ಅಲೆ ಇದೆ ಎಂಬ ತಾತ್ಸರ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರರಾಜ್ಯದಲ್ಲಿ ಪ್ರಧಾನಿ ಮೋದಿ ಅಲೆ ಇದೆ ಎಂಬ ತಾತ್ಸರ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಸಿದರು.ಗ್ರಾಮ ಚಲೋ ಅಭಿಯಾನ, ಬೂತ್ ಮಟ್ಟದ ಅಧ್ಯಕ್ಷ - ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 9 ತಿಂಗಳು ಕಳೆದಿದ್ದರೂ ಶಾಸಕರುಗಳಿಗೆ ಕ್ಷೇತ್ರಾಭಿವೃದ್ಧಿ ಅನುದಾನ ಬಿಡುಗಡೆ ಮಾಡಿಲ್ಲ. ಅಭಿವೃದ್ಧಿ ಶೂನ್ಯ ಆಡಳಿತಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಆರೋಪಿಸಿದರು.
ಸಿಎಂಗೆ ಆಡಳಿತ ಮತ್ತು ರಾಜಕೀಯ ಅನುಭವವಿದ್ದರೂ, ಶಾಸಕರಿಗೆ ಅನುದಾನ ಕೊಡುವಲ್ಲಿ ವಿಫಲರಾಗಿದ್ದಾರೆ. ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಈಗ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಶೇ.20ರಷ್ಟು ಜನರನ್ನೂ ತಲುಪಿಲ್ಲ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಅವಕಾಶ ನೀಡಿ, ಪುರುಷರಿಗೆ ಟಿಕೆಟ್ ದರ ಹೆಚ್ಚಿಸಿದ್ದಾರೆ ಎಂದರು. ಗ್ರಾಮ ಚಲೋ ಅಭಿಯಾನ ಉದ್ದೇಶವೇ ಕಳೆದ ಚುನಾವಣೆಗಿಂತ ಈ ಬಾರಿ ಪ್ರತಿ ಬೂತ್ಗಳಲ್ಲಿ ಕನಿಷ್ಟ 100 ಮತ ಹೆಚ್ಚಿಗೆ ಗಳಿಸುವುದೇ ಆಗಿದೆ. ಮಹಿಳೆಯರು, ರೈತರು, ಯುವಜನತೆಯನ್ನು ಕೇಂದ್ರೀಕರಿಸಿ ಮತಯಾಚನೆ ಮಾಡಬೇಕು ಎಂದರು.ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಅನಗತ್ಯವಾಗಿ ದೋಷಾರೋಪ ಮಾಡುತ್ತಿದೆ. ಬಡವರು, ರೈತರು, ಯುವಜನತೆ, ಮಹಿಳೆಯರು ಎಂಬ ನಾಲ್ಕು ವರ್ಗದ ಅಭ್ಯುದಯ ಕೇಂದ್ರದ ಆದ್ಯತೆಯಾಗಿದೆ. ಪಕ್ಷದ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಸಾರ್ವಜನಿಕರಿಗೆ ನೆನಪು ಮಾಡಬೇಕು. ಕಾಂಗ್ರೆಸ್ ಕೆಲವೊಮ್ಮೆ ಕೇಂದ್ರದ ಯೋಜನೆಗಳನ್ನು ನಮ್ಮದೇ ಎಂದು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಇದ್ದರು.