ಸಾರಾಂಶ
ಬಂಗಾರಪೇಟೆ : ಭಾರತ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಬೇಕು ಹಾಗೂ ಸಮಾನತೆಯಿಂದ ಎಲ್ಲರೂ ಬದುಕಬೇಕೆಂದು ಅಂದಿನ ಮಾಜಿ ಪ್ರಧಾನಿ ಇಂದಿರಾಗಾಂಧಿರವರು ಅನೇಕ ಯೋಜನೆಗಳನ್ನು ತಂದಿದ್ದರು ಎಂದು ಶಾಸಕರಾದ ಎಸ್ಎನ್ ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಜೂನಿಯರ್ ಕಾಲೇಜ್ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಇವತ್ತು ದೇಶವನ್ನು ಅಭಿವೃದ್ಧಿ ಮಾಡಿದ್ದೀವಿ ಎಂದು ಹೇಳುವವರು ಸಹ ಅಂದಿನ ಸರ್ಕಾರದ ಸರ್ಕಾರಿ ಶಾಲೆಗಳಲ್ಲಿ ಓದಿದ್ದಾರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ಅನೇಕ ಅಣೆಕಟ್ಟುಗಳು, ಡ್ಯಾಮ್ ಗಳು, ಸರ್ಕಾರಿ ಶಾಲೆಗಳು, ಸರ್ಕಾರಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲಾಗಿದೆ. ಹಾಗೂ ನಮ್ಮ ದೇಶದಲ್ಲಿ ಐಟಿಬಿಟಿ ಕಂಪನಿಗಳು ,ಕಂಪ್ಯೂಟರ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ಇವೆಲ್ಲವೂ ಸಹ ಭಾರತಕ್ಕೆ ಬರಲು ಮಾಜಿ ಪ್ರಧಾನಿಗಳಾದಂತಹ ರಾಜೀವ್ ಗಾಂದಿ ಕಾರಣಕರ್ತರು ಎಂದರು.
ಕೃತಜ್ಞತೆ ಸಲ್ಲಿಸುವ ದಿನ
ಧ್ವಜಾರೋಹಣೆ ಮಾಡಿ ಮಾತನಾಡಿದ ತಹಸೀಲ್ದಾರ್ ವೆಂಕಟೇಶಪ್ಪ, ಭಾರತೀಯ ಸ್ವಾತಂತ್ರ್ಯ ದಿನಾಚರಣೆ ಕೇವಲ ರಾಷ್ಟ್ರೀಯ ರಜಾದಿನವಲ್ಲ, ಇದು ಪ್ರತಿಬಿಂಬ, ಕೃತಜ್ಞತೆ ಮತ್ತು ಆಚರಣೆಯ ದಿನವಾಗಿದೆ. ಇದು ದಬ್ಬಾಳಿಕೆ ಮತ್ತು ದೌರ್ಜನ್ಯದ ಮೇಲೆ ಮಾನವ ಆತ್ಮದ ವಿಜಯವನ್ನು ಸಂಕೇತಿಸುತ್ತದೆ. ಇದು ನಮ್ಮ ಪೂರ್ವಜರು ಮಾಡಿದ ತ್ಯಾಗವನ್ನು ನೆನಪಿಸುತ್ತದೆ ಮತ್ತು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯವನ್ನು ಪಾಲಿಸಲು ಮತ್ತು ರಕ್ಷಿಸಲು ನಮ್ಮನ್ನು ಪ್ರೋತ್ಸಾಹಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಕೆಯುಡಿಎ ಅಧ್ಯಕ್ಷ ಗೋಪಾಲ ರೆಡ್ಡಿ, ಪುರಸಭೆ ಸದಸ್ಯರಾದ ಸಂಶುದ್ದೀನ್ ಬಾಬು,ಗೋವಿಂದ, ಎಸ್ ವೆಂಕಟೇಶ್,ಶಫಿ, ಶಾರದಮ್ಮ, ಪರ್ಜಾನ ಸುಹೇಲ್, ಗಂಗಮ್ಮ,ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್,ಪುರಸಭೆಯ ಮುಖ್ಯ ಅಧಿಕಾರಿ ಸತ್ಯನಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಪಿಡಬ್ಲ್ಯೂಡಿ ಅಧಿಕಾರಿ ರವಿ,ಸಿ ಡಿ ಪಿ ಓ ಮುನಿರಾಜು,ಪೊಲೀಸ್ ಇನ್ಸ್ಪೆಕ್ಟ್ ನಂಜಪ್ಪ ಇತರರು ಇದ್ದರು.