ದೇಶದಲ್ಲೇ ಮೊದಲ ಉನ್ನತ ಕೌಶಲ್ಯ ಸಲಹಾ ಸಮಿತಿ ಸ್ಥಾಪನೆ

| Published : Jan 24 2024, 02:00 AM IST

ಸಾರಾಂಶ

ಇವತ್ತಿನ ಜಗತ್ತಿನಲ್ಲಿ ಹೆಜ್ಜೆ ಹೆಜ್ಜೆಗೂ ಸ್ಪರ್ಧೆ ಹೆಚ್ಚಿದೆ. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೊಣೆ ನಮ್ಮ ಶಿಕ್ಷಣ ಸಂಸ್ಥೆಗಳದ್ದಾಗಿದೆ. ಇದಕ್ಕೆ ಬೇಕಾದ ಸಹಕಾರ ನೀಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಚಿವ ಪ್ರಿಯಾಂಕ ಗಾಂಧಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಭವಿಷ್ಯದ ಸವಾಲುಗಳು ಮತ್ತು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ರಾಜ್ಯದ ವಿಶ್ವವಿದ್ಯಾಲಯ, ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ತರಬೇತಿಗೊಳಿಸಲು ರಾಜ್ಯ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಉನ್ನತ ಕೌಶಲ್ಯ ಸಲಹಾ ಸಮಿತಿ ಸ್ಥಾಪಿಸಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಪಾಂಚಜನ್ಯ ವಿದ್ಯಾಪೀಠ ವೆಲ್ ಪೇರ್ ಟ್ರಸ್ಟ್ ಹಾಗೂ ಡಾ.ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಡ್ವಾನ್ಸ್ಡ್ ಇನ್ ಇನ್ಪರ್ಮೇಶನ್ ಟೆಕ್ನಾಲಜಿ, ಕಮ್ಯುನಿಕೇಷನ್ ಆಂಡ್ ಎನರ್ಜಿ ಸಿಸ್ಟಂಮ್ಸ್’ (ಎಐಟಿಸಿಇಎಸ್-2024) ಕುರಿತ ಅಂತಾರಾಷ್ಟ್ರೀಯ ಬಹು ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇವತ್ತಿನ ಜಗತ್ತಿನಲ್ಲಿ ಹೆಜ್ಜೆ ಹೆಜ್ಜೆಗು ಸ್ಪರ್ಧೆ ಎನ್ನುವುದು ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ನಮ್ಮ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೊಣೆ ನಮ್ಮ ಶಿಕ್ಷಣ ಸಂಸ್ಥೆಗಳದ್ದಾಗಿದೆ. ಇದಕ್ಕೆ ಪೂರಕ ಸಹಕಾರ ನೀಡಲು ನಮ್ಮ ಸರ್ಕಾರ ಸಿದ್ಧವಿದೆ. ಇದನ್ನು ಯಶಸ್ವಿಯಾಗಿ ನಿಭಾಯಿಸಿದಾಗ ಮಾತ್ರ ರಾಜ್ಯ ಉನ್ನತ ಸ್ಥಾನದಲ್ಲಿರಲು ಸಾಧ್ಯ. ಹಾಗಾಗಿ ಮುಖ್ಯಮಂತ್ರಿ ಅವರು ಐಟಿಬಿಟಿ, ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಶೌಶಲ್ಯಾಭಿವೃದ್ಧಿ ಹೀಗೆ ವಿವಿಧ ಇಲಾಖಾ ಸಚಿವರನ್ನೊಳಗೊಂಡ ಉನ್ನತ ಶೌಶಲ್ಯ ಸಲಹಾ ಸಮಿತಿ ರಚಿಸಿದ್ದಾರೆ ಎಂದರು.

ದೇಶದ ಐಟಿ ವಲಯಕ್ಕೆ ಬೆಂಗಳೂರಿನ ಕೊಡುಗೆ ದೊಡ್ಡದಿದ್ದು, ಐಟಿ ರಫ್ತಿನಲ್ಲಿ ಶೇ.42ರಷ್ಟು ಕರ್ನಾಟಕ ಪಾಲಿದೆ. ಇದರ ಮೊತ್ತ ವಾರ್ಷಿಕ 3.25 ಲಕ್ಷ ಕೋಟಿ ರು.ನಷ್ಟಿದೆ. ಆತ್ಮನಿರ್ಭರ ಭಾರತಕ್ಕೆ ಕರ್ನಾಟಕವೂ ಸಾಕಷ್ಟು ಬೆಂಬಲ ಸೂಚಿಸಿದೆ. ರಾಜ್ಯವು ಹೊಸ ಐಟಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಪನೆಗೆ ಒತ್ತು ನೀಡುತ್ತಿದೆ. ಇದಕ್ಕಾಗಿ ಅಗತ್ಯಸಹಾಯ ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದನ್ನು ಮುಂದುವರೆಸಿದೆ. ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಂಪನಿಗಳು ತೊಡಗಿಸಿಕೊಂಡಿವೆ ಎಂದರು.

ಸಮ್ಮೇಳನದಲ್ಲಿ ಗಣ್ಯರನ್ನು ಸನ್ಮಾನಿಸುವಾಗ ಪುಸ್ತಕಗಳನ್ನು ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಬಸವಣ್ಣನವರ ತತ್ವದ ಆಧಾರದ ಮೇಲೆ ಅರಿವು ಯೋಜನೆ ಜಾರಿಗೊಳಿಸಲಾಯಿತು. ಸನ್ಮಾನ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ನೀಡಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ‌. ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳಿದ್ದು, ಅವುಗಳನ್ನು ಡಿಜಿಟಲ್ ವ್ಯವಸ್ಥೆಗೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಸಮ್ಮೇಳನದಲ್ಲಿ ಪಾಂಚಜನ್ಯ ವಿದ್ಯಾಪೀಠ ವೆಲ್ಫೇರ್‌ ಟ್ರಸ್ಟ್‌ನ ಅಧ್ಯಕ್ಷ ಎಸ್.ಮರಿಸ್ವಾಮಿ, ಕಾರ್ಯದರ್ಶಿ ಎಸ್. ಶಿವಮಲ್ಲು, ಶಾಸಕ ಕೃಷ್ಣಮೂರ್ತಿ, ಟ್ರಸ್ಟಿ ಬಿ.ಎನ್. ಉಮೇಶ್, ಸಂಶೋಧನಾ ಹಿರಿಯ ಸಲಹೆಗಾರ ಎಲ್.ಎಂ.ಪಟ್ನಾಯಕ್, ಡಾ.ಎನ್.ಶಿವಪ್ರಕಾಶ್, ಪ್ರಾಂಶುಪಾಲ ಸಿ.ನಂಜುಂಡಸ್ವಾಮಿ ಮತ್ತಿತರರಿದ್ದರು.