ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೋಲಾರ ಲೋಕಸಭೆ ಚುನಾವಣೆಯ ಕಾಂಗ್ರೆಸ್ ಟಿಕೆಟ್ಗಾಗಿ ಎರಡು ಬಣಗಳ ನಡುವೆ ತಿಕ್ಕಾಟ ನಡೆಯುತ್ತಿರುವುದು ಸಮಂಜಸವಲ್ಲ, ನಾನು ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳುವುದಿಲ್ಲ. ಪಕ್ಷ ಯಾರಿಗಾದರೂ ಟಿಕೆಟ್ ಕೊಡಲಿ ಅವರ ಪರವಾಗಿ ಕೆಲಸ ಮಾಡುವೆ ಇದೇ ನನ್ನ ನಿಲುವಾಗಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.ಬಲಗೈಗೆ ಟಿಕೆಟ್ ನೀಡಲಿ
ಸುದ್ದಿಗಾರರೊಂದಿಗೆ ಮಾತನಾಡಿ ೧೯೫೨ರಿಂದ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಬಲಗೈ ಸಮುದಾಯದಕ್ಕೆ ಪ್ರಾತಿನಿಧ್ಯ ನೀಡಿಲ್ಲ, ಆದ್ದರಿಂದ ಈ ಬಾರಿ ಬಲಗೈ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬುದರಲ್ಲಿ ನನ್ನ ಧ್ವನಿ ಸಹ ಇದೆ. ಆದರೆ ಟಿಕೆಟ್ ವಿಚಾರವಾಗಿ ನಾನು ಯಾವುದೇ ಗುಂಪುಗಾರಿಕೆ ಮಾಡಲ್ಲ ಅಥವಾ ಬಣಗಳೊಂದಿಗೆ ಗುರುತಿಸಿಕೊಳ್ಳುವುದಿಲ್ಲ ಎಂದರು.
ಗುಂಪುಗಾರಿಕೆ ಸರಿಯಲ್ಲ: ಟಿಕೆಟ್ ವಿಚಾರದಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಮಾಡುವುದು ಸರಿಯಲ್ಲ, ಒಂದು ಬಣದವರು ಕೆ.ಹೆಚ್. ಮುನಿಯಪ್ಪ ಅಳಿಯನಿಗೆ ಟಿಕೆಟ್ ಕೊಟ್ಟರೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಹೇಳಿದ್ದರು, ಆದರೆ ಯಾರೂ ಕೊಡಲಿಲ್ಲ, ನಾನೇಕೆ ಬಲಗೈ ಸಮುದಾಯಕ್ಕೆ ಕೊಡದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ನನಗೆ ಹಲವು ಬಾರಿ ಅನ್ಯಾಯವಗಿದೆ. ಈ ಹಿಂದೆ ನಾನು ಘಟಬಂಧನ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದೆ. ಆಗಲೂ ನನಗಾದ ತೊಂದರೆ, ಅನ್ಯಾಯವಾದಾಗ ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ.
ಆದ್ದರಿಂದ ಗುಂಪುಗಾರಿಕೆಯಲ್ಲಿ ಗುರುತಿಸಿಕೊಳ್ಳದೆ ಪಕ್ಷಕ್ಕಾಗಿ ದುಡಿಯುವೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ. ಶಿವಕುಮಾರ್ರನ್ನು ನಂಬಿರುವೆ, ಪಕ್ಷ ಯಾರಿಗೆ ಟಿಕೆಟ್ ಕೊಡಲಿ ಅಭ್ಯರ್ಥಿ ಗೆಲುವುಗಾಗಿ ಶ್ರಮಿಸುವೆ ಇದೇ ನನ್ನ ನಿಲುವು ಎಂದು ಸ್ಪಷ್ಟಪಡಿಸಿದರು.