ಸಾರಾಂಶ
ವಸತಿ ಹಂಚಿಕೆ ವಿಚಾರದಲ್ಲಿ ನನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿದ್ದೇನೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಬೆಂಗಳೂರು : ವಸತಿ ಹಂಚಿಕೆ ವಿಚಾರದಲ್ಲಿ ನನ್ನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿದ್ದೇನೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮೇಲೆ ಎಲ್ಲೂ ನೇರ ಆರೋಪಗಳಿಲ್ಲ. ಅವೆಲ್ಲವೂ ಮಾಧ್ಯಮಗಳ ಸೃಷ್ಟಿಯಷ್ಟೆ. ಬಿ.ಆರ್. ಪಾಟೀಲ್ ಅವರೂ ನನ್ನ ಮೇಲೆ ಆರೋಪ ಮಾಡಿಲ್ಲ. ಈ ಕುರಿತು ಈಗಾಗಲೇ ಹೇಳಿದ್ದೇನೆ. ಗ್ರಾಪಂ ಅಧ್ಯಕ್ಷನ ಪತ್ರದ ಮೇಲೆ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲಾಗಿದೆ. ಆದರೂ, ಭ್ರಷ್ಟಾಚಾರ ನಡೆದಿದೆ ಎಂದು ನನ್ನ ಹೆಸರು ತರಲಾಯತು. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರು ದೆಹಲಿಯಿಂದ ಹಿಂದುರಿಗಿದ ಕೂಡಲೇ ಭೇಟಿಯಾಗಿ ವರದಿ ನೀಡಿದ್ದೇನೆ ಎಂದರು.
ಬಿ.ಆರ್.ಪಾಟೀಲ್ ಅವರು 2 ವರ್ಷಗಳಲ್ಲಿ 6 ಸಾವಿರ ಮನೆಗಳನ್ನು ಕೇಳಿದ್ದರು. ಅದರಲ್ಲಿ ನಾವು 900 ಮನೆಗಳನ್ನು ನೀಡಿದ್ದೇವೆ. ಆ ಬಗ್ಗೆ ಮುಕ್ಯಮಂತ್ರಿಗಳಿಗೆ ತಿಳಿಸಿದ್ದೇನೆ. ಬಿ,.ಆರ್. ಪಾಟೀಲ್ ಅವರನ್ನೂ ಭೇಟಿ ಮಾಡುತ್ತೇನೆ. ಅವರ ಬಳಿಯೂ ಮಾತನಾಡುತ್ತೇನೆ ಎಂದು ಹೇಳಿದರು.
ಹೈಕಮಾಂಡ್ ನಿರ್ಧಾರವೇ ಅಂತಿಮ:
ಅಧಿಕಾರ ಬದಲಾವಣೆ ಕುರಿತಂತೆ ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್ ಅಹಮದ್ ಖಾನ್, ನಮ್ಮದು ಹೈಕಮಾಂಡ್ ಇರುವ ಪಕ್ಷ. ಅವರು ನಾಳೆಯೇ ನಿರ್ಧಾರ ತೆಗೆದುಕೊಳ್ಳಬಹುದು. ಹೈಕಮಾಂಡ್ ಏನು ನಿರ್ಧರಿಸುತ್ತದೋ ಅದಕ್ಕೆ ನಾವೆಲ್ ಬದ್ಧರಾಗಿರಬೇಕು. ಅದು ನಾನಾಗಲೀ, ರಾಜಣ್ಣ ಆಗಲಿ ಬೇರೊಬ್ಬರೇ ಆಗಲಿ. ಹೈಕಮಾಂಡ್ ನಿರ್ಧಾರವೇ ನಮಗೆ ಅಂತಿಮ ಎಂದರು.