ಗೆದ್ದರೆ ರೈತರ ಸಾಲ ಮನ್ನಾ: ರಾಹುಲ್‌ ಹೊಸ ಗ್ಯಾರಂಟಿ

| Published : Mar 15 2024, 01:19 AM IST / Updated: Mar 15 2024, 07:28 AM IST

ಸಾರಾಂಶ

‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ರಕ್ಷಣೆಗೆ ಕಾಯ್ದೆ ರೂಪಿಸಲಾಗುವುದು ಹಾಗೂ ಜಿಎಸ್‌ಟಿ ವ್ಯಾಪ್ತಿಯಿಂದ ಕೃಷಿಯನ್ನು ಹೊರತರಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ.

ಪಿಟಿಐ ನಾಸಿಕ್‌‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ರಕ್ಷಣೆಗೆ ಕಾಯ್ದೆ ರೂಪಿಸಲಾಗುವುದು ಹಾಗೂ ಜಿಎಸ್‌ಟಿ ವ್ಯಾಪ್ತಿಯಿಂದ ಕೃಷಿಯನ್ನು ಹೊರತರಲಾಗುವುದು ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಘೋಷಿಸಿದ್ದಾರೆ. 

ಸ್ತ್ರೀಯರಿಗೆ ವರ್ಷಕ್ಕೆ 1 ಲಕ್ಷ ರು. ನೀಡುವುದೂ ಸೇರಿದಂತೆ 5 ಗ್ಯಾರಂಟಿಗಳನ್ನು ಘೋಷಿಸಿದ ಮರುದಿನವೇ ಬೃಹತ್‌ ರೈತ ಸಮುದಾಯಕ್ಕೆ ಮತ್ತಷ್ಟು ಗ್ಯಾರಂಟಿ ರೂಪದ ಭರವಸೆಗಳನ್ನು ಅವರು ನೀಡಿದ್ದಾರೆ.

ಭಾರತ್‌ ಜೋಡೋ ನ್ಯಾಯ ಯಾತ್ರೆಯ ಅಂಗವಾಗಿ ಗುರುವಾರ ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಚಂದವಾಡದಲ್ಲಿ ರೈತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,‘ಇಂಡಿಯಾ ಮೈತ್ರಿಕೂಟದ ಸರ್ಕಾರವು ರೈತ ಸಮುದಾಯದ ಧ್ವನಿಯಾಗಲಿದೆ. 

ರೈತರ ರಕ್ಷಣೆಗಾಗಿ ನಾವು ಕಾಯ್ದೆಗಳನ್ನು ಜಾರಿಗೊಳಿಸುತ್ತೇವೆ ಮತ್ತು ಕೃಷಿಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸುತ್ತೇವೆ. 

ಹಾಗೆಯೇ, ಬೆಳೆ ವಿಮೆ ಯೋಜನೆಯ ಸ್ವರೂಪವನ್ನು ಬದಲಾಯಿಸುತ್ತೇವೆ’ ಎಂದರು.‘ರೈತರಿಗಾಗಿ ನಮ್ಮ ಸರ್ಕಾರದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅವರ ಸಾಲವನ್ನು ಮನ್ನಾ ಮಾಡುತ್ತೇವೆ. 

ರಫ್ತು ಮತ್ತು ಆಮದು ನೀತಿ ವಿನ್ಯಾಸಗೊಳಿಸುವಾಗ ರೈತರಿಗೆ ಬೆಲೆಯ ರಕ್ಷಣೆ ಸಿಗುವಂತೆ ನೋಡಿಕೊಳ್ಳುತ್ತೇವೆ. ಕೃಷಿಯನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಿ, ದೇಶದಲ್ಲಿ ಕೇವಲ ಒಂದೇ ತೆರಿಗೆ ಅಸ್ತಿತ್ವದಲ್ಲಿರುವಂತೆ ಮಾಡುತ್ತೇವೆ. 

ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡಲು ಸ್ವಾಮಿನಾಥನ್‌ ಸಮಿತಿಯ ವರದಿ ಜಾರಿಗೊಳಿಸುತ್ತೇವೆ’ ಎಂದು ಹೇಳಿದರು. ಈ ವೇಳೆ ರಾಹುಲ್‌ ಜೊತೆ ವೇದಿಕೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹಾಗೂ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ಸಂಜಯ್‌ ರಾವುತ್‌ ಇದ್ದರು.

ಎಷ್ಟು ಸಾಲ ಮನ್ನಾ?
ರಾಹುಲ್‌ ಭಾಷಣದ ಬಳಿಕ ಈ ಕುರಿತು ಸುದ್ದಿಗಾರರಿಗೆ ವಿವರ ನೀಡಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದ ಮೇಲೆ ರೈತರ ಎಷ್ಟು ಸಾಲ ಮನ್ನಾ ಮಾಡಬೇಕು ಎಂಬುದನ್ನು ನಿರ್ಧರಿಸಲು ಪ್ರತ್ಯೇಕ ಆಯೋಗ ರಚಿಸಲಾಗುವುದು. ರೈತರ ಉತ್ಪನ್ನಗಳನ್ನು ಜಿಎಸ್‌ಟಿಯಿಂದ ಹೊರಗಿಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು’ ಎಂದು ತಿಳಿಸಿದರು.