‘ಸೆಕ್ಯುಲರ್’ ಪದ ಬಳಸುವ ನೈತಿಕತೆ ಜೆಡಿಎಸ್‌ಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

| Published : Feb 19 2024, 01:33 AM IST / Updated: Feb 19 2024, 09:01 AM IST

Siddaramaiah

ಸಾರಾಂಶ

ಜೆಡಿಎಸ್ ಪಕ್ಷಕ್ಕೆ ಸೆಕ್ಯುಲರ್ ಪದವನ್ನು ಬಳಸುವ ಅರ್ಹತೆಯನ್ನೇ ಕಳೆದುಕೊಂಡಿದೆ. ಪಕ್ಷದಿಂದ ಆ ಪದವನ್ನು ಕೈಬಿಡಬೇಕು. ಜಾತ್ಯತೀತ ಎಂಬ ಪದವನ್ನು ಬಳಸುವ ನೈತಿಕತೆಯೇ ಜೆಡಿಎಸ್‌ಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜೆಡಿಎಸ್ ಪಕ್ಷಕ್ಕೆ ಸೆಕ್ಯುಲರ್ ಪದವನ್ನು ಬಳಸುವ ಅರ್ಹತೆಯನ್ನೇ ಕಳೆದುಕೊಂಡಿದೆ. ಪಕ್ಷದಿಂದ ಆ ಪದವನ್ನು ಕೈಬಿಡಬೇಕು. ಜಾತ್ಯತೀತ ಎಂಬ ಪದವನ್ನು ಬಳಸುವ ನೈತಿಕತೆಯೇ ಜೆಡಿಎಸ್‌ಗೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಮೈದಾನದಲ್ಲಿ ಭಾನುವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಜೆಡಿಎಸ್, ಬಿಜೆಪಿ ಈಗ ಒಂದಾಗಿವೆ. ಮುಂದಿನ ಜನ್ಮದಲ್ಲಿ ಹುಟ್ಟಿದರೆ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆಂದು ದೇವೇಗೌಡರು ಹೇಳಿದ್ದರು. ಈಗ ಕೋಮುವಾದಿ ಪಕ್ಷ ಬಿಜೆಪಿ ಜೊತೆ ಸೇರಿದ್ದಾರೆ. ಮಿಸ್ಟರ್ ದೇವೇಗೌಡರೇ ನೀವೇ ನಿಮ್ಮ ಮಗನನ್ನು ಬಿಜೆಪಿ ಜೊತೆ ಕಳಿಸಿದ್ದೇನೆ ಅಂತೀರಾ. ನೀವು ಜಾತ್ಯತೀತ ಎಂಬ ಪದ ಇಟ್ಟುಕೊಳ್ಳುವುದಕ್ಕೆ ಯಾವ ನೈತಿಕತೆ ಇದೆ. ಈಗಲೇ ಸೆಕ್ಯೂಲರ್ ಪದ ಕೈಬಿಟ್ಟು ಬಿಡಿ ಎಂದು ಆಗ್ರಹಿಸಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸೋಲಿಸಲು ಶ್ರಮಿಸಿದ್ದೆವು. ಅದಕ್ಕೆ 136 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ಈಗ ಬಿಜೆಪಿ ಮತ್ತು ಜೆಡಿಎಸ್ ಡೋಂಗಿಗಳ ರೀತಿ ಹೇಳಿಕೆ ನೀಡುತ್ತಿವೆ. 

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಈ ಬಾರಿ ಕನಿಷ್ಠ 20 ಸ್ಥಾನ ಗೆದ್ದು ಲೋಕಸಭೆಗೆ ಕಳಿಸುತ್ತೇವೆ. ಉಪಕಾರ ಮಾಡಿದವರನ್ನು ಎಂದಿಗೂ ಜನರು ಮರೆಯುವುದಿಲ್ಲ. 

ಇದುವರೆಗೂ 155 ಕೋಟಿ ಹೆಣ್ಣು ಮಕ್ಕಳು ಉಚಿತವಾಗಿ ಬಸ್ಸಿನಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ದೇವೇಗೌಡರು, ಕುಮಾರಸ್ವಾಮಿ ಈ ಅವಕಾಶ ಮಾಡಿಕೊಟ್ಟಿದ್ದರಾ. ಅದನ್ನು ಮಾಡಿಕೊಟ್ಟಿದ್ದು ಸಿದ್ದರಾಮಯ್ಯ ಸರ್ಕಾರ ಎನ್ನುವುದನ್ನು ಮರೆಯಬೇಡಿ ಎಂದರು.

2018ರ ಚುನಾವಣೆಯಲ್ಲಿ ಜೆಡಿಎಸ್‌ನವರು 39 ಸ್ಥಾನಗಳಲ್ಲಿ ಗೆದ್ದಿದ್ದರು. 2023ರಲ್ಲಿ 19 ಸ್ಥಾನ ಗೆದ್ದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅದು ಶೂನ್ಯ ಆಗಲಿದೆ. 

ಜೆಡಿಎಸ್ ಶಾಸಕರು ಎಲ್ಲಿ ಪಕ್ಷ ಬಿಟ್ಟು ಹೋಗುವರೋ ಎಂಬ ಭಯದಿಂದ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಿಂದೆ ನಮ್ಮ ಜೊತೆ ಇದ್ದವರು ಇಂದು ಕೋಮುವಾದಿಗಳ ಜೊತೆ ಸೇರಿದ್ದಾರೆ. ಇಂತರಹವರನ್ನು ನಂಬಿ ಓಟು ಕೊಡುವಿರಾ ಎಂದು ಪ್ರಶ್ನಿಸಿದರು.

2013ರ ಚುನಾವಣೆ ವೇಳೆ ನಾವು 165ರಲ್ಲಿ 158 ಭರವಸೆ ಈಡೇಸಿದ್ದೆವು. ನಾವು ಮಾಡಿದ ಕೆಲಸವನ್ನು ಜನರಿಗೆ ಸರಿಯಾಗಿ ತಲುಪಿಸಲಿಲ್ಲ. ಹೀಗಾಗಿ 2018ರ ಚುನಾವಣೆಯಲ್ಲಿ ಸೋಲಬೇಕಾಯಿತು. 

ನಾವು ಮಾಡದಿರೋದನ್ನು ಎಂದೂ ಹೇಳಲಿಲ್ಲ. ಈಗ ಅದೇ ತಪ್ಪನ್ನು ಮಾಡದೆ ಪಕ್ಷದ ಕಾರ್ಯಕರ್ತರು ನಾವು ಮಾಡಿರುವ ಸತ್ಯವನ್ನು ಹೇಳಿ.

ಬಿಜೆಪಿ, ಜೆಡಿಎಸ್‌ನವರ ರೀತಿ ಸುಳ್ಳು ಹೇಳಬೇಡಿ. ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ, ದೇವೇಗೌಡರು ಸಹ ಮುಖ್ಯಮಂತ್ರಿ ಆಗಿದ್ದರು. ಮಳವಳ್ಳಿಗೆ ನಿಮ್ಮ ಕೊಡುಗೆ ಏನು ಹೇಳಿ. 

ಬಿಜೆಪಿಯ ಕೊಡುಗೆ ಏನು ಹೇಳಲಿ ನೋಡೋಣ. ಶಾಸಕ ನರೇಂದ್ರಸ್ವಾಮಿ ಹೇಳಿದ್ದನ್ನೆಲ್ಲಾ ನಾವು ಮಾಡಿಕೊಟ್ಟಿದ್ದೇವೆ. ಏನೂ ಮಾಡದವರಿಗೆ ಮತ ಏಕೆ ಕೊಡಬೇಕು. ಅವರನ್ನು ಸೋಲಿಸಿ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.