ರೈಲ್ವೆ, ಕೈಗಾರಿಕಾ ಕಾರಿಡಾರ್, ಅಪ್ಪರ್ ಭದ್ರಾ ಯೋಜನೆ ಶೀಘ್ರ ಪೂರ್ಣ: ಸಚಿವ

| Published : Jul 02 2024, 01:32 AM IST / Updated: Jul 02 2024, 04:21 AM IST

ರೈಲ್ವೆ, ಕೈಗಾರಿಕಾ ಕಾರಿಡಾರ್, ಅಪ್ಪರ್ ಭದ್ರಾ ಯೋಜನೆ ಶೀಘ್ರ ಪೂರ್ಣ: ಸಚಿವ
Share this Article
  • FB
  • TW
  • Linkdin
  • Email

ಸಾರಾಂಶ

ಅಪ್ಪರ್ ಭದ್ರಾ, ರೈಲ್ವೆ, ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

  ಹಿರಿಯೂರು: ಅಪ್ಪರ್ ಭದ್ರಾ, ರೈಲ್ವೆ, ಮೇಟಿಕುರ್ಕೆ ಕೈಗಾರಿಕಾ ಕಾರಿಡಾರ್ ಯೋಜನೆ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಪ್ಪರ್ ಭದ್ರಾ, ರೈಲ್ವೆ ಹಾಗೂ ಕೆ.ಐ.ಡಿ.ಬಿ ಇಲಾಖೆಗಳ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬೋರನಕಣಿವೆ ಜಲಾಶಯದ ವಿವರ ಪರಿಶೀಲಿಸಿ ಹೆಚ್ಚಿನ ನೀರಿನ ಅಲೋಕೇಶನ್ ತಂದು ಅಲ್ಲಿಂದ ಗಾಯಿತ್ರಿ ಜಲಾಷಯಕ್ಕೆ ತರಲು ಪ್ರಯತ್ನಿಸಲಾಗುವುದು. ಹೊಸಹಳ್ಳಿ ಬ್ಯಾರೇಜ್ ನ ವಿದ್ಯುತ್ ಸಮಸ್ಯೆಯನ್ನು ಆ ಭಾಗದ ರೈತರೊಂದಿಗೆ ಚರ್ಚಿಸಿ ಬಗೆಹರಿಸಿ. ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕಿದೆ ಎಂದರು.

ಕೆಐಡಿಬಿ ಅಧಿಕಾರಿ ಲಕ್ಷ್ಮೀಶ್ ಮಾತನಾಡಿ, ಮೆಟಿಕುರ್ಕೆ ಕೈಗಾರಿಕಾ ಕಾರಿಡಾರ್ ಯೋಜನೆಯ 1156 ಎಕರೆ ಪ್ರದೇಶದಲ್ಲಿ 920 ಎಕರೆ ಪ್ರದೇಶದ ರೈತರಿಗೆ ಪರಿಹಾರ ನೀಡಲಾಗಿದೆ. ಇನ್ನೂ 336 ಎಕರೆಗೆ ಪರಿಹಾರ ಕೊಡಬೇಕು. ಇಲ್ಲಿಯವರೆಗೆ ರೂ.380ಕೋಟಿ ಬಿಡುಗಡೆ ಮಾಡಿದೆ. ಅದರಲ್ಲಿ ರೂ.312 ಕೋಟಿ ಪರಿಹಾರ ನೀಡಲಾಗಿದೆ. ಮೇಟಿಕುರ್ಕೆ ಕರಿಯೋಬನಹಳ್ಳಿಯಲ್ಲಿ ಲೇಔಟ್ ಅನುಮೋದನೆ ಆಗಿದೆ. ನಾಲ್ಕರಲ್ಲಿ ಮೂರು ಪ್ಯಾಕೇಜ್ ವರ್ಕ್ ಅವಾರ್ಡ್ ಆಗಿದ್ದು ಕೆಲಸ ನಡೆಯುತ್ತಿದೆ.ಒಂದರಲ್ಲಿ ಕೆಲಸ ಶುರುವಾಗಬೇಕಿದೆ. 1156 ಎಕರೆ ಪ್ರದೇಶದಲ್ಲಿ 764 ಎಕರೆ ಕೈಗಾರಿಕಾ ಪ್ರದೇಶವಾಗಿದ್ದು ಉಳಿದ ಪ್ರದೇಶದಲ್ಲಿ ಉದ್ಯಾನವನ, ಆಸ್ಪತ್ರೆ, ವಸತಿ ಗೃಹಗಳಿಗೆ ಮೀಸಲಿರಿಸಲಾಗಿದೆ ಎಂದರು.

ರೈಲ್ವೆ ಅಧಿಕಾರಿ ವಿವೇಕ್, ರೈಲ್ವೆ ಯೋಜನೆಗೆ 1210 ಎಕರೆ ಬೇಕಾಗಿದ್ದು ಹಿರಿಯೂರಿನಲ್ಲಿ 55 ಕಿಮೀ ಹಾದು ಹೋಗಲಿದೆ. ತಾಲೂಕಿನಲ್ಲಿ 113 ಎಕರೆ ಭೂ ಸ್ವಾಧೀನ ಬಾಕಿಯಿದೆ. ಎರಡು ತಿಂಗಳಲ್ಲಿ 70 ಎಕರೆ ಭೂ ಸ್ವಾಧೀನ ಪಡಿಸಿಕೊಂಡು ಕೆಲಸ ಪ್ರಾರಂಭ ಮಾಡುತ್ತೇವೆ ಎಂದರು.

ಅಪ್ಪರ್ ಭದ್ರಾ ಯೋಜನೆ ಚೀಫ್ ಇಂಜಿನಿಯರ್ ಎಸ್. ಎಚ್.ಲಮಾಣಿ, ಜೆಜೆಹಳ್ಳಿ ವ್ಯಾಪ್ತಿಗೆ ವಿವಿ ಸಾಗರ ನೀರು ಹರಿಸುವಂತೆ ಜನರು ಮನವಿ ಮಾಡಿದ್ದು ಅದು ತುಂಬಾ ಕಷ್ಟ. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯಿಂದ ಅನುಮೋದನೆ ಆದ ಕೆರೆಗಳಿಗೆ ನೀರು ಬರಲಿದೆ. ಗಾಯಿತ್ರಿ ಜಲಾಶಯಕ್ಕೆ ನೀರಿಲ್ಲ. ಕಳೆದ ವರ್ಷ ಬೋರನ ಕಣಿವೆಯಿಂದ ಮೂರು ಅಡಿ ಬಿಡಿಸಲಾಗಿದೆ. ಅಲೋಕೇಷನ್ ಆಗಬೇಕು. ಬಲನಾಲೆಯಿಂದ ಅಲ್ಲಿನ ಕೆರೆಗಳು ಎತ್ತರದ ಪ್ರದೇಶದಲ್ಲಿವೆ. ಹಾಗಾಗಿ ಬೇರೆ ಮೂಲಗಳಿಂದ ಆ ಭಾಗಕ್ಕೆ ನೀರು ತರುವ ಪ್ರಯತ್ನ ಮಾಡಬೇಕಿದೆ ಎಂದರು.

ಕರಿಯಾಲ ಗ್ರಾ.ಪಂ.ಅಧ್ಯಕ್ಷ ರಮೇಶ್, ಜೆಜೆಹಳ್ಳಿ, ಕರಿಯಾಲ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ.

ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಟಿ ವೆಂಕಟೇಶ್ ಸೇರಿದಂತೆ ರೈಲ್ವೆ, ಕೆಐಡಿಬಿ, ಅಪ್ಪರ್ ಭದ್ರಾ ಯೋಜನೆಗಳ ಇಂಜಿನಿಯರ್ ಇದ್ದರು.