ಲೋಕಸಭೆ, ರಾಜ್ಯಸಭೆ ಕಲಾಪ ಅನಿರ್ದಿಷ್ಟ ಅವಧಿಗೆ ಮುಂದೂಡಿಕೆ : ಒಂದು ದಿನ ಮೊದಲೇ ಮುಕ್ತಾಯ

| Published : Aug 10 2024, 01:34 AM IST / Updated: Aug 10 2024, 04:29 AM IST

ಸಾರಾಂಶ

ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಾಸ್ತವವಾಗಿ ಅಧಿವೇಶನ ಸೋಮವಾರ ಮುಕ್ತಾಯವಾಗಬೇಕಿತ್ತಾದರೂ ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಗಿದೆ.

ನವದೆಹಲಿ: ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪವನ್ನು ಶುಕ್ರವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಾಸ್ತವವಾಗಿ ಅಧಿವೇಶನ ಸೋಮವಾರ ಮುಕ್ತಾಯವಾಗಬೇಕಿತ್ತಾದರೂ ಒಂದು ದಿನ ಮೊದಲೇ ಮುಕ್ತಾಯಗೊಳಿಸಲಾಗಿದೆ.

15 ದಿನಗಳ ಕಾಲ ನಡೆದ ಅಧಿವೇಶನದ ಅವಧಿಯಲ್ಲಿ ಲೋಕಸಭೆಯಲ್ಲಿ 115 ಗಂಟೆಗಳ ಕಾಲ ಕಲಾಪ ನಡೆದಿದೆ. ಈ ವೇಳೆ ಬಜೆಟ್‌ ಮಂಡನೆ, ಹಣಕಾಸು ಮಸೂದೆ ಅಂಗೀಕಾರ, ಹಲವು ಮಹತ್ವದ ಮಸೂದೆ ಮಂಡನೆ, ಅಂಗೀಕಾರ ನಡೆದಿದೆ. ಲೋಕಸಭೆಯ ಉತ್ಪಾದಕತೆ ಶೇ.130ಕ್ಕಿಂತ ಅಧಿಕವಿತ್ತು ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಮಾಹಿತಿ ನೀಡಿದ್ದಾರೆ.

ಪಕ್ಷಗಳಿಗೆ ಸರ್ಕಾರದಿಂದ ಧನಸಹಾಯ ಪ್ರಸ್ತಾವ ಇಲ್ಲ: ಕೇಂದ್ರದ ಸ್ಪಷ್ಟನೆ

ನವದೆಹಲಿ: ಚುನಾವಣಾ ಆಯೋಗದ ಮೂಲಕ ರಾಜಕೀಯ ಪಕ್ಷಗಳಿಗೆ ಧನಸಹಾಯ ನೀಡುವ ಯಾವುದೇ ಪ್ರಸ್ತಾವನೆಯು ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ. ಇತ್ತೀಚೆಗೆ ಚುನಾವಣಾ ಆಯೋಗದ ಮುಖಾಂತರ ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಅನುದಾನದ ರೂಪದಲ್ಲಿ ಹಣ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೆ ಈ ನಿಟ್ಟಿನಲ್ಲಿ ಇದರ ಬಗ್ಗೆ ಕಾನೂನು ರೂಪಿಸುವ ಯಾವುದೇ ಯೋಜನೆ ಇಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಈ ಬಗ್ಗೆ ಕಾನೂನು ಮಂತ್ರಿ ಅರ್ಜುನ್ ರಾಮ್ ಮೇಘಾವಾಲ್‌ ಅವರು ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.