ಮಂಡ್ಯ ಜಿಲ್ಲೆಗೆ ‘ನೆಂಟರ’ ಅವಶ್ಯಕತೆ ಇಲ್ಲ, ‘ಮಗನ’ ಅವಶ್ಯಕತೆ ಇದೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

| Published : Feb 20 2024, 01:51 AM IST / Updated: Feb 20 2024, 09:11 AM IST

N Chaluvarayaswamy
ಮಂಡ್ಯ ಜಿಲ್ಲೆಗೆ ‘ನೆಂಟರ’ ಅವಶ್ಯಕತೆ ಇಲ್ಲ, ‘ಮಗನ’ ಅವಶ್ಯಕತೆ ಇದೆ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವ ಅಥವಾ ಸಂಸದರಾಗಲು ಹೊರಗಿನಿಂದ ಬರುವವರು ನಮ್ಮ ಜಿಲ್ಲೆಗೆ ನೆಂಟರಾಗುತ್ತಾರೆ ವಿನಹಃ ಮಗನಾಗುವುದಿಲ್ಲ. ಜಿಲ್ಲೆಯ ಜನರು ಸ್ವಾಭಿಮಾನಿಗಳು ಹೊರಗಿನವರನ್ನು ಒಪ್ಪುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸಚಿವ ಅಥವಾ ಸಂಸದರಾಗಲು ಹೊರಗಿನಿಂದ ಬರುವವರು ನಮ್ಮ ಜಿಲ್ಲೆಗೆ ನೆಂಟರಾಗುತ್ತಾರೆ ವಿನಹಃ ಮಗನಾಗುವುದಿಲ್ಲ. ಜಿಲ್ಲೆಯ ಜನರು ಸ್ವಾಭಿಮಾನಿಗಳು ಹೊರಗಿನವರನ್ನು ಒಪ್ಪುವುದಿಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಕುಂಟಾನುಕೊಪ್ಪಲು ಗ್ರಾಮದ ಮದ್ದೇನಟ್ಟಮ್ಮ ದೇವಿ ನೂತನ ದೇವಸ್ಥಾನ ಮತ್ತು ವಿಮಾನ ಗೋಪುರ ಪ್ರಧಾನ ಕಳಸ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಸಭೆ ಚುನಾವಣೆಗೆ ದೇಶದ ಯಾವ ರಾಜ್ಯದವರಾದರೂ ಮಂಡ್ಯ ಸೇರಿದಂತೆ ರಾಷ್ಟ್ರದ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು. ಆದರೆ, ಜಿಲ್ಲೆಯ ಜನರು ಇಷ್ಟ ಪಡುವಂತಹ ವ್ಯಕ್ತಿ ನಮ್ಮ ಜಿಲ್ಲೆಯವರೇ ಆಗಬೇಕು ಅನ್ನುವುದು ಸಹಜ ಎಂದರು.

ಈ ಹಿಂದೆ ಕೆ.ಗೋಪಾಲಯ್ಯ, ಆರ್.ಅಶೋಕ್, ರಾಮಚಂದ್ರೇಗೌಡ ಹೊರಗಿನವರು ಮಂತ್ರಿಯಾಗಿ ಎಷ್ಟು ಬಾರಿ ಜಿಲ್ಲೆಗೆ ಬರುತ್ತಿದ್ದರೆಂಬುದು ಜನತೆಗೆ ಗೊತ್ತಿದೆ. ಅವರು ನೆಂಟರ ರೀತಿ ಜಿಲ್ಲೆಗೆ ಬಂದು ಹೋಗುತ್ತಿದ್ದರು. ಇಲ್ಲಿ ಶಾಸಕನಾದರೂ ಅಷ್ಟೇ, ಸಂಸದನಾದರೂ ಅಷ್ಟೆ. ಜಿಲ್ಲೆಗೆ ನೆಂಟರ ಅವಶ್ಯಕತೆ ಇಲ್ಲ. ಜಿಲ್ಲೆಯ ಮಗನ ಅವಶ್ಯಕತೆಯಿದೆ ಎಂದರು.

ಚುನಾವಣೆ ವೇಳೆ ಕೊಟ್ಟಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ. 

ನಮ್ಮ ತಾಲೂಕಿನ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ಅಂತಿಮವಾಗಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ಪಕ್ಷ ತೀರ್ಮಾನಿಸಲಿದೆ ಎಂದರು.

ಅಪ್ಪಾಜಿಗೌಡ ಕಾಂಗ್ರೆಸ್ ಸೇರ್ಪಡೆ ಸಚಿವರ ಸುಳಿವು: ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಈ ಹಿಂದೆ ನನ್ನ ಜತೆಗಿದ್ದವರು. ಈಗಲೂ ನನ್ನ ಅವರ ವಿಶ್ವಾಸ ಕೆಟ್ಟಿಲ್ಲ. 

ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವುದು ಸದ್ಯದಲ್ಲಿಯೇ ಎಲ್ಲರಿಗೂ ಗೊತ್ತಾಗಲಿದೆ. ಶೀಘ್ರವೇ ಅದು ಫಲ ನೀಡಲಿದೆ ಎಂದು ಎನ್.ಅಪ್ಪಾಜಿಗೌಡ ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಸಚಿವರು ಸುಳಿವು ನೀಡಿದರು.

ಅಪ್ಪಾಜಿಗೌಡರು ಮನ್ಮುಲ್ ಅಧ್ಯಕ್ಷ ಸ್ಥಾನ ಕೊಡಿ ಎಂದು ಎಲ್ಲಿಯೂ ನಮ್ಮನ್ನು ಕೇಳಿಲ್ಲ. ನಾವು ಕೂಡ ಎಲ್ಲಿಯೂ ಘೋಷಣೆ ಮಾಡಿಲ್ಲ. ಆದರೆ, ಅವರು ನಮ್ಮ ಹಿತೈಷಿಗಳು, ಮೊದಲಿನಿಂದಲೂ ನಮ್ಮ ಜತೆಗಿದ್ದವರು. 

ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡೆ. ಆದರೆ, ಅವರು ಜೆಡಿಎಸ್ ಪಕ್ಷದಲ್ಲಿಯೇ ಉಳಿದುಕೊಂಡಿದ್ದರು. ಅವರು ಈಗ ನಮ್ಮ ಪಕ್ಷಕ್ಕೆ ಬರುವುದರಲ್ಲಿ ತಪ್ಪೇನಿಲ್ಲ. ನಮ್ಮ ಜೊತೆ ಬರುವುದರಲ್ಲಿ ತಪ್ಪೇನಿದೆ ಎಂದರು.

ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಸುನಿಲ್‌ಲಕ್ಷ್ಮೀಕಾಂತ್, ಉದಯಕಿರಣ್, ಮಾವಿನಕೆರೆ ಸುರೇಶ್, ಸಂಪತ್‌ಕುಮಾರ್ ಸೇರಿದಂತೆ ಹಲವರಿದ್ದರು.