ಸಾರಾಂಶ
180 ಕೋಟಿ ದುರ್ಬಳಿಕೆ, ಅಕ್ರಮ ವರ್ಗಾವಣೆ ಆಗಿದೆ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಬೆನ್ನಿಗೆ ಕಾಂಗ್ರೆಸ್ ಸರ್ಕಾರ ನಿಂತಿದೆ. ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ
ಕೋಲಾರ :ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ, ಚನ್ನಗಿರಿಯ ಲಾಕಪ್ ಡೆತ್ ಸಹ ಹಲವು ರೀತಿಯ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ, ಲಾಕಪ್ ಡೆತ್ ಮೃತನ ಪತ್ನಿ ಹೇಳಿರುವುದನ್ನು ಗಮನಿಸಿದ್ದೇನೆ, ಇಲಾಖೆಗೆ ನಾಲ್ಕುವರೆ ಲಕ್ಷ ಪ್ರತಿ ತಿಂಗಳು ಹಫ್ತಾ ಕೊಡುತ್ತಿದ್ದರು, ಈ ತಿಂಗಳು ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಲಾಕಪ್ ಡೆತ್ ಆಗಿದೆ, ಸರ್ಕಾರದ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಹೊರವಲಯದ ನಾರಾಯಣಿ ಕಲ್ಯಾಣ ಮಂದಿರದಲ್ಲಿ ಬಿಜೆಪಿ-ಜೆ.ಡಿ.ಎಸ್ ಪಕ್ಷದಿಂದ ಆಗ್ನೇಯ ಶಿಕ್ಷಕರ ಸಮ್ಮೇಳನ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 180ಕೋಟಿ ದುರ್ಬಳಿಕೆ, ಅಕ್ರಮ ವರ್ಗಾವಣೆ ಆಗಿದೆ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಬೆನ್ನಿಗೆ ಕಾಂಗ್ರೆಸ್ ಸರ್ಕಾರ ನಿಂತಿದೆ ಎಂದು ಆರೋಪಿಸಿದರು.ಸರ್ಕಾರ ಗ್ಯಾರಂಟಿಗೆ ಸೀಮಿತ
ಕಾಂಗ್ರೆಸ್ ಸರ್ಕಾರವು ನೀಡಿರುವ ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ದಿಕ್ಕುತಪ್ಪಿಸುವ ಕೆಲಸ ನಡೆಯುತ್ತಿದೆ, ವಿರೋಧ ಪಕ್ಷಗಳು ಸೈಲಾಂಟಗಿಲ್ಲ, ಆಡಳಿತ ಪಕ್ಷವು ಏನೂ ಮಾಡಿಲ್ಲ ಆಡಳಿತ ಯಂತ್ರ ಕುಸಿದಿದೆ, ಈ ಸರ್ಕಾರ ೫ ಗ್ಯಾರಂಟಿಗಳಿಗೆ ಮಾತ್ರ ಸೀಮಿತ ವಾಗಿದೆ ಎಂದರು. ಸಂಸದ ಪ್ರಜ್ವಲ್ ರೇವಣ್ಣಗೆ ವಾಪಸ್ ಬರುವಂತೆ ಎಚ್ಚರಿಕೆ ಕೊಟ್ಟಿದ್ದೇನೆ, ಪ್ರಜ್ವಲ್ರನ್ನು ದೇವೇಗೌಡರೆ ಕಳಿಸಿದ್ದಾರೆ ಎನ್ನುತ್ತಾರಲ್ಲ ಅದಕ್ಕೆ ಸಿಎಂಗೆ ಉತ್ತರ ಕೊಟ್ಟಿದ್ದೇನೆ. ಆದರೆ ಸಿಎಂ ಸಿದ್ದರಾಮಯ್ಯ ಅವರು ನೀವೆ ಕಳುಹಿಸಿದ್ದೀರಿ ಎನ್ನುತ್ತಾರೆ, ವಿದೇಶಕ್ಕೆ ನಿಮ್ಮ ಮಗ ಹೋದಾಗ ಏನಾಯ್ತು ಅಂತ ಹೇಳ್ದೆ ಅಷ್ಟೇ, ನೀವು ದೇವೆಗೌಡರ ಬಗ್ಗೆ ಮಾತನಾಡಿದ್ದಕ್ಕೆ ಹಾಗೆ ಹೇಳಿದೆ ಎಂದು ಸಿದ್ದರಾಮಯ್ಯರಿಗೆ ಟಾಂಗ್ ನೀಡಿದರು.
ಸಾಧುಗಳ ಜತೆ ವಿದೇಶಕ್ಕೆ ಹೋಗಿದ್ದರಾ
ಪ್ರಜ್ಬಲ್ ಅತ್ಯಾಚಾರ ಮಾಡಿ ಹೋಗಿದ್ದಾನೆ ಎನ್ನುತ್ತಾರೆ ಅಲ್ಲ, ಸಿದ್ದರಾಮಯ್ಯ ಮಗ ಸಾಧುಗಳ ಜೊತೆ ವಿದೇಶಕ್ಕೆ ಹೋಗಿದ್ರಾ, ಹಾಗಾದ್ರೆ ಸಿದ್ದರಾಮಯ್ಯ ಪುತ್ರನ ಜೊತೆಗೆ ಹೋಗಿದ್ದವರೆಲ್ಲಾ ಸಾಧುಗಳಾ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.