ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಕಾರಣ : ವೈ.ಎ.ನಾರಾಯಣಸ್ವಾಮಿ

| Published : May 16 2024, 12:50 AM IST / Updated: May 16 2024, 04:13 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಕಾರಣ : ವೈ.ಎ.ನಾರಾಯಣಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ತಲೆಬುಡ ಇಲ್ಲ. ಫಲಿತಾಂಶ ಕುಸಿಯಲು ಶಿಕ್ಷಣ ಇಲಾಖೆಯ ಕಮಿಷನರ್ ಮತ್ತು ಕಾರ್ಯದರ್ಶಿ ಸಹ ಹೊಣೆಗಾರರಾಗಿದ್ದಾರೆ. ಶಿಕ್ಷಕರನ್ನು ಕಾರ್ಮಿಕರಿಗಿಂತ ಕೀಳಾಗಿ ನೋಡಲಾಗುತ್ತದೆ ಎಂಬುದು ನಾರಾಯಣಸ್ವಾಮಿ ಆರೋಪ

 ಮುಳಬಾಗಿಲು :  ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರ ಶಿಕ್ಷಣ ವಿರೋಧಿ ನೀತಿಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತ ಉಂಟಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಆರೋಪಿಸಿದರು. ತಾಲೂಕಿನ ಕುರುಡುಮಲೆ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆಸಲ್ಲಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯಲು ಸಚಿವ ಮಧು ಬಂಗಾರಪ್ಪ ನೇರ ಹೊಣೆಗಾರರು. ಶಿಕ್ಷಣ ಇಲಾಖೆ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಗೊಂದಲದ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ಫಲಿತಾಂಶ ಕಡಿಮೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರಿಗೆ ಕನ್ನಡ ಓದಲೂ ಬರೋದಿಲ್ಲ

ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ತಲೆಬುಡ ಇಲ್ಲ. ಫಲಿತಾಂಶ ಕುಸಿಯಲು ಶಿಕ್ಷಣ ಇಲಾಖೆಯ ಕಮಿಷನರ್ ಮತ್ತು ಕಾರ್ಯದರ್ಶಿ ಸಹ ಹೊಣೆಗಾರರಾಗಿದ್ದಾರೆಂದು ದೂರಿದರು, ವಿಧಾನಸೌಧದಲ್ಲಿ ಶಿಕ್ಷಣ ಸಚಿವರಿಗೆ ಕನ್ನಡದಲ್ಲಿ ಪತ್ರ ಓದಲೂ ಬರಲಿಲ್ಲ. ಶಿಕ್ಷಕರನ್ನು ಕಾರ್ಮಿಕರಿಗಿಂತ ಕೀಳಾಗಿ ನೋಡಲಾಗುತ್ತದೆ ಎಂದು ಆರೋಪ ಮಾಡಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ. ಬಿಜೆಪಿ ಐದು ಕ್ಷೇತ್ರದಿಂದ ಸ್ಪರ್ಧಿಸಲಿದ್ದು ಮಿತ್ರ ಪಕ್ಷ ಜೆಡಿಎಸ್ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲಿದೆ. ಈ ಆರು ಕ್ಷೇತ್ರಗಳಲ್ಲಿ ನಾವು ಜಯಭೇರಿ ಭಾರಿಸಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

ಪ್ರಾಮಾಣಿಕ ಸೇವೆ ಮಾಡಿರುವೆ

ದೇಶದಾದ್ಯಂತ ಪ್ರಧಾನಿ ಮೋದಿ ಅಲೆ ಬೀಸುತ್ತಿದ್ದು, ರಾಜ್ಯದ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ೫ ಜಿಲ್ಲೆಗಳು ಒಳಪಡಿಸಲಿದ್ದು ೨೪,೦೦೦ ಮತದಾರರಿದ್ದಾರೆ. ತಾವು ಸತತವಾಗಿ ೧೮ ವರ್ಷಗಳ ಕಾಲ ಮೂರು ಬಾರಿ ಎಂಎಲ್‌ಸಿ ಆಗಿ ಜಾತಿ ಭೇದ ಎಣಿಸದೆ ಭ್ರಷ್ಟಾಚಾರ ರಹಿತವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶಿಕ್ಷಣ ಸಂಸ್ಥೆಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇನೆ ಎಂದು ತಿಳಿಸಿದರು.

ನನ್ನ ಅವಧಿಯಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಯರಗೋಳ್ ಎತ್ತಿನಹೊಳೆ, ಕೆ.ಸಿ ವ್ಯಾಲಿ 2ನೇ ಹಂತ ಯೋಜನೆಗಳಿಗೆ ನನ್ನ ಶ್ರಮ ಇದೆ ಎಂದರಲ್ಲಿದೆ, ಕೋಲಾರ ಜಿಲ್ಲೆಯನ್ನು ಮಾದರಿ ಮಾಡುತ್ತೇನೆ. ಈಗಿನ ರಾಜ್ಯ ಸರ್ಕಾರದ ಸ್ಥಿತಿ ನೋಡಿದರೆ, ಶಿಕ್ಷಕರು ಸೇರಿದಂತೆ ಸರ್ಕಾರಿ ನೌಕರರಿಗೆ ಸಕಾಲದಲ್ಲಿ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಬರುವ ಸಾಧ್ಯತೆ ಇದೆ ಎಂದರು. 

ಶಿಕ್ಷಕರ ಬಳಕೆಗೆ ವಿರೋಧಶಿಕ್ಷಕರನ್ನು ಜನಗಣತಿ ಚುನಾವಣೆ ಮತ್ತಿತರ ಕಾರ್ಯಗಳಿಗೆ ಬಳಸಿಕೊಳ್ಳುತ್ತಿರುವುದು ಎಷ್ಟು ಮಾತ್ರ ಸರಿ ಎಂದು ಪ್ರಶ್ನಿಸಿದರು, ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ಮತ್ತು ಜೆಡಿಎಸ್‌ನಿಂದ ತಕ್ಕ ಪಾಠ ಕಲಿಸುತ್ತೇವೆಂದು ಎಚ್ಚರಿಸಿದರು.ರಾಜ್ಯ ಮಾವು ಮಂಡಳಿ ಮಾಜಿ ಅಧ್ಯಕ್ಷ ಮಲ್ಲನಾಯಕನಹಳ್ಳಿ ಎಂ.ಕೆ.ವಾಸುದೇವ್, ಮಾಜಿ ಶಾಸಕ ಬಂಗಾರಪೇಟೆ ಬಿ.ಪಿ.ವೆಂಕಟಮನೆಯಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಓಬಿಸಿ ಜಿಲ್ಲಾ ಮಾಜಿ ಅಧ್ಯಕ್ಷ ಕೋಳಿ ನಾಗರಾಜ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಮೈಸೂರು ಸುರೇಶ್‌ರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಇದ್ದರು.