ಸಂಸದ ಡಾ.ಕೆ.ಸುಧಾಕರ್ ಮುಂದಿವೆ ಸಾಲು ಸಾಲು ಸವಾಲು

| Published : Jun 12 2024, 12:35 AM IST / Updated: Jun 12 2024, 08:28 AM IST

ಸಾರಾಂಶ

ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿರುವ ಕಾರಣ ಡಾ.ಕೆ.ಸುಧಾಕರ್  ಜಿಲ್ಲೆಗೆ ಕೈಗಾರಿಕೆಗಳನ್ನು ತರುವುದರಲ್ಲಿ ಸಂಶಯವಿಲ್ಲಾ ಎನ್ನುತ್ತಾರೆ ಅವರ ಅಭಿಮಾನಿಗಳು ಮತ್ತು ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರು.

 ಚಿಕ್ಕಬಳ್ಳಾಪುರ :  ನೂತನ ಸಂಸದ ಡಾ.ಕೆ.ಸುಧಾಕರ್ ಮುಂದೆ ಸಾಲು ಸಾಲು ಸವಾಲುಗಳು ಇದ್ದು, ಅವುಗಳನ್ನು ಅವರು ಎದುರಿಸುವಲ್ಲಿ ಸಫಲರಾಗುತ್ತಾರೆಯೇ ಎಂಬುದು ಕ್ಷೇತ್ರದಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.

ಡಾ.ಕೆ.ಸುಧಾಕರ್ ಕಳೆದ ವಿಧಾನ ಸಭಾ ಸೋಲಿನ ನಂತರ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಮೈತ್ರಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿ ಗೆದ್ದು ಸಂಸದರಾಗಿ ಆಯ್ಕೆಯಾಗಿರುವುದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಎಲ್ಲಿಲ್ಲದ್ದ ಸಂತಸ ತಂದಿದೆ.

ಡಾ.ಕೆ.ಸುಧಾಕರ್ ನುರಿತ ರಾಜಕಾರಣಿಯಾಗಿದ್ದು ಶಾಸಕರಾಗಿ, ಸಚಿವರಾಗಿ ಎರಡು ಕ್ಯಾಬಿನೆಟ್ ದರ್ಜೆಯ ಖಾತೆಗಳನ್ನು ನಿಭಾಯಿಸಿದ ಅನುಭವವಿದೆ. ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿ ಸಹಾ ಕಾರ್ಯನಿರ್ವಹಿಸಿದ್ದು ಅಲ್ಲದೇ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ವಿರೋಧಿಗಳಿಂದಲೂ ಪ್ರಶಂಸೆ

ಕೋವಿಡ್-19 ರ ಮಹಾ ಮಾರಿ ವಕ್ಕರಿಸಿದಾಗ ರಾಜ್ಯಾಂದ್ಯಂತ ಕೋವಿಡ್-19 ನ್ನು ತಹಬದಿಗೆ ತರುವಲ್ಲಿ ಮತ್ತು ಉಚಿತ ಲಸಿಕೆ ನೀಡುವಲ್ಲಿ ಅವರು ಕೈಗೊಂಡ ನಿರ್ವಹಣೆಯಲ್ಲಿ ಅ‍ವರ ವಿರೋಧಿಗಳೂ ಮೆಚ್ಚಿದ್ದಾರೆ. ಇದನ್ನೆಲ್ಲ ಕಂಡಿರುವ ಕ್ಷೇತ್ರದ ಜನತೆ ಅವರು ಎಂತಹ ಪರಿಸ್ಥಿತಿಯನ್ನಾದರೂ ನಿಭಾಯಿಸಬಲ್ಲರು ಎಂಬುದು ಕಾರ್ಯಕರ್ತರ ಮತ್ತು ಬೆಂಬಲಿಗರ ಭಾವನೆಯಾಗಿದೆ.

ಸಂಸದ ಮುಂದಿರುವ ಸವಾಲು

ಮೊದಲು ಜಿಲ್ಲೆಗೆ ಮತ್ತು ಕ್ಷೇತ್ರಕ್ಕೆ ಶಾಶ್ವತವಾಗಿ ನೀರಾವರಿ ಯೋಜನೆ ರೂಪಿಸಬೇಕು, ದಶಕಗಳಿಂದ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಮರು ಜೀವ ತುಂಬಬೇಕು, ನಿರುದ್ಯೂಗಿ ಯುವಕರಿಗೆ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಖಾನೆಗಳನ್ನು ಅಳವಡಿಸಿ, ಉದ್ಯೋಗ ನೀಡುವ ಭರವಸೆ ನೀಡಿದ್ದರು. ತಮ್ಮ ಶಾಸಕ ಸ್ಥಾನ ಪಣಕ್ಕಿಟ್ಟು ಚನ್ನಪಟ್ಟಣಕ್ಕೆ ಹೋಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ತಂದು ಸುಮಾರು 900 ಕೋಟಿ ವೆಚ್ಚದಲ್ಲಿ ಕಟ್ಟಡದ ಕಾಮಗಾರಿಯನ್ನು ಶೇ 90 ರಷ್ಟು ಮುಗಿಸಿದ್ದರು. ಆದರೆ ಕಾಲೇಜಿಗೆ 550 ಕೋಟಿಗೆ ಮಾತ್ರ ಕ್ಯಾಬಿನೆಟ್ ಅನುಮೋದನೆ ಪಡೆದಿದ್ದರು. ಉಳಿದ 350 ಕೋಟಿಗೆ ಕ್ಯಾಬಿನೆಟ್ ಅನುಮೋದನೆ ಪಡೆದಿಲ್ಲಾ ಎಂಬ ಆರೋಪವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿತ್ತು. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಲೇಜಿನ ಕಟ್ಟಡದಲ್ಲಿ ತರಗತಿಗಳನ್ನು ಆರಂಭ ಮಾಡಿದ್ದು ಈ ಮೂರನೆ ವರ್ಷದ ಎಂಬಿಬಿಎಸ್ ತರಗತಿಗಳು ನಡೆಯುತ್ತಿವೆ. ಈಗ ಸಂಸದ ಡಾ.ಕೆ.ಸುಧಾಕರ್ ಕಾಲೇಜು ಕಟ್ಟಡದ ಉಳಿಕೆ ಭಾಗವಾದ ಶೇ10ನ್ನು ಪೂರ್ಣಗೋಳಿಸಿ ತಮ್ಮ ಮೆಡಿಕಲ್ ಕಾಲೇಜಿನ ಕನಸನ್ನು ಪೂರ್ಣಗೊಳಿಸುವ ಹೊಣೆ ಈಗಿನ ಸಂಸದರ ಮೇಲಿದೆ.

ರೈಲ್ವೆ ಯೋಜನೆಗಳಿಗೆ ಮರುಜೀವ

ಈಗ ಆಂದ್ರ ಪ್ರದೇಶದ ಪುಟ್ಟಪರ್ತಿ,ತಿರುಪತಿ, ಜಿಲ್ಲೆಯ ಗೌರಿ ಬಿದನೂರು-ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ-ಬಾಗೇಪಲ್ಲಿ-ಪುಟ್ಟಪರ್ತಿ ರೈಲ್ವೆ ಯೋಜನೆಗಳಿಗೆ ಮರು ಜೀವ ತುಂಬಬೇಕು.ನಗರದದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೇಗೇರಿಸುವ ಕಾಮಗಾರಿ ಆರಂಭಿಸಬೇಕಿದೆ. ಈಗ ಡಾ.ಕೆ.ಸುಧಾಕರ್ ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಸಂಸದರು ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸಮನ್ವಯ ಸಾಧಿಸಿಕೊಂಡು ಸಾಗಬೇಕಿದೆ. ಇದು ಡಾ.ಕೆ.ಸುಧಾಕರ್ ರವರಿಗೆ ಕಾರ್ಯಗತವಾದ ಕೆಲಸ.

ಇದಲ್ಲದೆ ಮುಂಬರುವ ಜಿ.ಪಂ,ಹಾಗೂ ಚುನಾವಣೆಯಲ್ಲಿಯೂ ತಾ.ಪಂ. ಮೈತ್ರಿ ಮುಂದುವರೆಯಲಿದ್ದು ಕಾಂಗ್ರೆಸ್ ಆಡಳಿತದಲ್ಲಿರುವ ಎರಡೂ ಆಡಳಿತ ಮಂಡಳಿಗಳನ್ನು ಕಸಿದುಕೊಳ್ಳುವುದು ಸಂಸದರ ಮುಂದಿರುವ ದೊಡ್ಡ ಸವಾಲು. ಜೆಡಿಎಸ್‌ ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿರುವುದರಿಂದ ಸಂಸದ ಡಾ.ಕೆ.ಸುಧಾಕರ್ ಅವರ ನೆರವು ಪಡೆದು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುವುದರಲ್ಲಿ ಸಂಶಯವಿಲ್ಲಾ.

ಏಕೆಂದರೆ ಚಿಕ್ಕಬಳ್ಳಾಪುರವನ್ನು ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇರ್ಪಡಿಸಿ ಜಿಲ್ಲೆಯನ್ನಾಗಿಸಿದ್ದು ಸಹ ಹೆಚ್.ಡಿ.ಕುಮಾರಸ್ವಾಮಿಯವರೇ ಆಗಿರುವುದರಿಂದ ಡಾ.ಕೆ.ಸುಧಾಕರ್ ನಿರುದ್ಯೋಗ ನಿವಾರಣೆಗೆ ಕೈಗಾರಿಕೆಗಳನ್ನು ತರುವುದರಲ್ಲಿ ಸಂಶಯವಿಲ್ಲಾ ಎನ್ನುತ್ತಾರೆ ಅವರ ಅಭಿಮಾನಿಗಳು ಮತ್ತು ಬಿಜೆಪಿ-ಜೆಡಿಎಸ್ ಪಕ್ಷದ ಕಾರ್ಯಕರ್ತರು.