ಸಾರಾಂಶ
ನವದೆಹಲಿ: ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೋಮವಾರ ಇಲ್ಲಿ ತಮ್ಮ ಪಕ್ಷದ ಚುನಾವಣಾ ಚಿಹ್ನೆಯಾದ ಕಮಲದ ಚಿತ್ರ ಹಾಗೂ ‘ಏಕ್ ಬಾರ್ ಫಿರ್ ಸೇ ಮೋದಿ ಸರ್ಕಾರ್’ ಎಂಬ ಘೋಷಣೆಯನ್ನು ಗೋಡೆ ಮೇಲೆ ಬರೆದು ‘ಮತ್ತೊಮ್ಮೆ ಮೋದಿ ಸರ್ಕಾರ’ ಗೋಡೆ ಬರಹ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.
ದಿಲ್ಲಿಯ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ನಡ್ಡಾ ಅವರು, ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ದೇಶಾದ್ಯಂತ ಪ್ರತಿ ಮತಗಟ್ಟೆಯಲ್ಲಿ ಇದೇ ರೀತಿಯ ಆಂದೋಲನ ಆಯೋಜಿಸಲಾಗುವುದು ಎಂದರು.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಜಯಕ್ಕೆ ಶ್ರಮಿಸಲು ಮತ್ತು ನರೇಂದ್ರ ಮೋದಿ ಅವರನ್ನು ಸತತ 3ನೇ ಅವಧಿಗೆ ಪ್ರಧಾನಿಯನ್ನಾಗಿ ಮಾಡಲು ಜನರಿಗೆ ಮನವಿ ಮಾಡಿದರು.‘ದೇಶದ ಅಭಿವೃದ್ಧಿ ಆಗುತ್ತಿದೆ. ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ.
ಜನರು ಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಮತ್ತು ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯ ಸಂಕಲ್ಪ ಸಾಕಾರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಬೂತ್ನಲ್ಲಿ 5 ಕಡೆ ಬರಹ : 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಅಪೇಕ್ಷೆ ಇಡೀ ದೇಶದ ಜನರಲ್ಲಿದೆ. ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುವ ಮೂಲಕ 2047ರಲ್ಲಿ ವಿಕಸಿತ ಭಾರತದ ಕನಸು ನನಸಾಗಬೇಕು.
ಈ ನಿಮಿತ್ತ ನಡ್ಡಾ ಅವರ ಸೂಚನೆ ಮೇರೆಗೆ ಗೋಡೆ ಬರಹ ಅಭಿಯಾನ ಆರಂಭಿಸಲಾಗಿದೆ. ಪ್ರತಿ ಬೂತ್ನಲ್ಲಿ 5 ಕಡೆ ಬರಹ ಬರೆಯಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.