ವಯೋವೃದ್ಧರು, ನಿರಾಶ್ರಿತರು, ಅನಾಥರಿಗೆ ಸರ್ಕಾರಿ ಸೌಲಭ್ಯ

| Published : Jul 01 2024, 01:51 AM IST / Updated: Jul 01 2024, 04:57 AM IST

ಸಾರಾಂಶ

 ಯಾವುದೇ ಆದಾಯವಿಲ್ಲದೆ, ಸಂಧ್ಯಾಕಾಲದಲ್ಲಿ ಆಶ್ರಯವಿಲ್ಲದೆ ಪರಿತಪಿಸುವವರ ನೆರವಿಗೆ ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ನೀಡುತ್ತಿದ್ದು, ಇದನ್ನು ಆರ್ಹರಿಗೆ ತಲುಪಿಸುವ ಜವಾಬ್ದಾರಿಯನ್ನು ತಾಲೂಕು ಆಡಳಿತ ಮಾಡಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

 ಚಳ್ಳಕೆರೆ:  ಕಡು ಬಡವರು, ನಿರಾಶ್ರಿತರು, ಅನಾಥರು ಹಾಗೂ ಕೂಲಿ ಕಾರ್ಮಿಕರು ಯಾವುದೇ ಆದಾಯವಿಲ್ಲದೆ, ಸಂಧ್ಯಾಕಾಲದಲ್ಲಿ ಆಶ್ರಯವಿಲ್ಲದೆ ಪರಿತಪಿಸುವವರ ನೆರವಿಗೆ ರಾಜ್ಯ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ನೀಡುತ್ತಿದ್ದು, ಇದನ್ನು ಆರ್ಹರಿಗೆ ತಲುಪಿಸುವ ಜವಾಬ್ದಾರಿಯನ್ನು ತಾಲೂಕು ಆಡಳಿತ ಮಾಡಬೇಕೆಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಪಿಂಚಣಿ ಆದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಈ ಯೋಜನೆ ಆರ್ಹರನ್ನು ಹುಡುಕಿಕೊಡುವ ಕೆಲಸವನ್ನು ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ಮಾಡಬೇಕಿದೆ. ಗ್ರಾಮೀಣ ಭಾಗದಲ್ಲೂ ಸಹ ನಿರಾಶ್ರಿತರಿದ್ದರೆ ಅವರ ಬಗ್ಗೆ ಮಾಹಿತಿ ಪಡೆದು ಅವರೂ ಈ ಯೋಜನೆ ವ್ಯಾಪ್ತಿಯಲ್ಲಿ ಸಹಾಯ ಪಡೆಯುವಂತೆ ಮಾಡಬೇಕೆಂದು ಸಾರ್ವಜನಿಕ ಮನವಿ ಮಾಡಿದರು.

ಮುಖ್ಯ ಅತಿಥಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾದ್ಯಂತ ಪಿಂಚಣಿ ಆದಾಲತ್ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ. ವಯೋವೃದ್ದರು, ನಿರ್ಗತಿಕರೂ ಸರ್ಕಾರದ ಸಹಾಯ ಪಡೆದು ತಮ್ಮ ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಬೇಕಾಗಿದೆ ಎಂದರು.

ತಹಸೀಲ್ದಾರ್ ರೇಹಾನ್‌ ಪಾಷ, ಸರ್ಕಾರದ ನಿಯಮದಂತೆ ಎಲ್ಲರಿಗೂ ಪ್ರತಿ ತಿಂಗಳು ತಪ್ಪದೆ ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ನೀಡಲಾಗುತ್ತಿದೆ. ಸಂಬಂಧಪಟ್ಟ ಕಂದಾಯಾಧಿಕಾರಿ, ಗ್ರಾಮ ಲೆಕ್ಕಿಗರು ಸಮೀಕ್ಷೆ ನಡೆಸಿ ಆರ್ಹರನ್ನು ಗುರುತಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್‌ಗೌಡ, ನಾಮಿನಿ ಸದಸ್ಯ ನೇತಾಜಿ ಪ್ರಸನ್ನ, ಡಿವೈಎಸ್ಪಿ ಟಿ.ಬಿ.ರಾಜಣ್ಣ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮಲೆಕ್ಕಾಧಿಕಾರಿ ಪ್ರಕಾಶ್, ಡಿ.ಶ್ರೀನಿವಾಸ್ ಇದ್ದರು.