ಸಾರಾಂಶ
ಕಲ್ಯಾಣ ಕರ್ನಾಟಕದ ಪ್ರದೇಶದ ಆರೋಗ್ಯ ಸುಧಾರಣೆಗೆ ₹411.88 ಕೋಟಿ ಕಾಮಗಾರಿಗೆ ಚಾಲನೆ ನೀಡಿರುವುದು ಈ ಪ್ರದೇಶದ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಯಾದಗಿರಿ : ಕಲ್ಯಾಣ ಕರ್ನಾಟಕದ ಪ್ರದೇಶದ ಆರೋಗ್ಯ ಸುಧಾರಣೆಗೆ ₹411.88 ಕೋಟಿ ಕಾಮಗಾರಿಗೆ ಚಾಲನೆ ನೀಡಿರುವುದು ಈ ಪ್ರದೇಶದ ಆರೋಗ್ಯ ಕ್ರಾಂತಿಗೆ ಮುನ್ನುಡಿ ಬರೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಆರೋಗ್ಯ ಅವಿಷ್ಕಾರ’ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಜನರ ಬದುಕು ಗಟ್ಟಿಗೊಳಿಸಿದೆ. ವಿರೋಧ ಪಕ್ಷಗಳು ಏನೇ ಹೇಳಿದರು ಬಡವರ ಹೊಟ್ಟೆ ತುಂಬಿಸುವ ಯೋಜನೆ ನಮ್ಮ ಸರ್ಕಾರದಿಂದ ಮುಂದುವರೆಯಲಿವೆ ಎಂದರು.
ಖರ್ಗೆ ಅವರ ನಾಯಕತ್ವದಲ್ಲಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ದಿಕ್ಕು ಬದಲಿಸಿ, ರಾಜ್ಯಕ್ಕೆ ಹೊಸ ಸಂದೇಶ ನೀಡಿದ್ದೇವೆ. ಬೆಂಗಳೂರು ನಗರ ಬಿಟ್ಟರೆ ಈ ಭಾಗ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿದೆ ಎನ್ನುವುದು ಹೆಮ್ಮೆಯ ವಿಚಾರ. ರಾಹುಲ್ ಗಾಂಧಿ ಅವರು ಹಿಂದೆ ಇಲ್ಲಿಗೆ ಭೇಟಿ ನೀಡಿದಾಗ ಕೊಟ್ಟ ಮಾತಿನಂತೆ ಖರ್ಗೆ ಅವರು ಹಾಗೂ ದಿ.ಧರ್ಮಸಿಂಗ್ ಅವರ ಮುಖಂಡತ್ವ, ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ 371ಜೆ ವಿಶೇಷಾಧಿಕಾರ ಪಡೆದಿರುವ ಈ ಭಾಗದ ಜನತೆ ಭಾಗ್ಯಶಾಲಿಗಳಾಗಿದ್ದಾರೆ.
ಕೇವಲ ಗ್ಯಾರಂಟಿಗಳ ಬಗ್ಗೆ ನಾವು ಮಾತನಾಡುತ್ತಿಲ್ಲ. ವಿರೋಧ ಪಕ್ಷದವರು ಎಷ್ಟೇ ಟೀಕೆ ಮಾಡಿದರೂ ಜನರ ಭಾವನೆಗಳ ಮೇಲೆ ನಾವು ರಾಜಕಾರಣ ಮಾಡದೆ ಅವರ ಬದುಕಿನ ಮೇಲೆ ರಾಜಕೀಯ ಮಾಡುತ್ತಾ ಕಲ್ಯಾಣದಲ್ಲಿ ಅಭಿವೃದ್ಧಿಯ ರಥ ಎಳೆಯುತ್ತಿದ್ದೇವೆ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಧ್ಯೇಯದೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಹಿಂದುಳಿದವರು, ಅಬಲರಿಗೆ ಸಾಮಾಜಿಕ ನ್ಯಾಯ ಕೊಡಬೇಕೆಂದು ಖರ್ಗೆ ಅವರು ಹೋರಾಡುತ್ತಿದ್ದಾರೆ. ಹಿಂದುಳಿದ ಜನಾಂಗಗಳ ಏಳ್ಗೆಗೆಂದು ಯಾವುದೇ ಕಾರ್ಯಕ್ರಮ ರೂಪಿಸಿದರೂ ಅದಕ್ಕೆ ಬಿಜೆಪಿಗರು ಅಪಸ್ವರ ಎತ್ತುತ್ತಾರೆ.
ಆದರೂ, ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಚಿಂತನೆ, ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಮತ್ತೆ ಶೈಕ್ಷಣಿಕ-ಸಾಮಾಜಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಇದು ಎಲ್ಲಾ ಸಮುದಾಯಕ್ಕೂ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೈಗೊಳ್ಳುತ್ತಿರುವ ಗಣತಿ ಎಂದರು.
ಆರೋಗ್ಯ ಸಚಿವರಾದ ದಿನೇಶ್ ಗೂಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಕ್ರಾಂತಿ ಮಾಡುತ್ತಿದ್ದಾರೆ. ಅವರ ಕಾರ್ಯ ಹೀಗೆ ಮುಂದುವರಿಯಲಿದೆ. ನಿಮ್ಮೆಲ್ಲರ ಆಶೀರ್ವಾದವೂ ನಮ್ಮ ಮೇಲೆ ಹೀಗೆಯೇ ಇರಲಿ ಎಂದರು.