ಸಾರಾಂಶ
ಗೌಡರ ಗೌಡ ಪ್ರೀತಂ ಗೌಡ ಎಂಬ ಘೋಷಣೆ ಜೆಡಿಎಸ್ ಕಾರ್ಯಕರ್ತರ ಕಿವಿಗೆ ಬೀಳುತ್ತಿದ್ದಂತೆ ಕೆರಳಿದರು. ಈ ವೇಳೆ ಪ್ರೀತಂಗೌಡ ಬೆಂಬಲಿಗರಿಗೆ ಪ್ರೀತಂ ಪರ ಘೋಷಣೆ ಕೂಗದಂತೆ ಜೆಡಿಎಸ್ ಕಾರ್ಯಕರ್ತರು ತಾಕೀತು ಮಾಡಿದರು. ಆದರೂ ಅದನ್ನು ಲೆಕ್ಕಿಸದೆ ಪ್ರೀತಂ ಕಡೆಯವರು ಘೋಷಣೆ ಕೂಗಿದರು.
ಮಂಡ್ಯ : ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಯದಲ್ಲಿ ಪ್ರೀತಂಗೌಡ ಪರ ಬೆಂಬಲಿಗರು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದು ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಬುಧವಾರ ನಗರದಲ್ಲಿ ನಡೆಯಿತು.
ನಗರದ ಶಶಿಕಿರಣ ಕನ್ವೆನ್ಷನ್ ಹಾಲ್ನಿಂದ ಪಾದಯಾತ್ರೆ ಆರಂಭಗೊಂಡಿತು. ಇಂದಿನ ಪಾದಯಾತ್ರೆಗೆ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂಗೌಡ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮೈಷುಗರ್ ವೃತ್ತಕ್ಕೆ ಬರುವವರೆಗೂ ಮೈತ್ರಿ ಪಕ್ಷದ ಕಾರ್ಯಕರ್ತರು ಸಮಾಧಾನದಿಂದಲೇ ಇದ್ದರು.
ಮೈಷುಗರ್ ವೃತ್ತಕ್ಕೆ ಪಾದಯಾತ್ರೆ ಆಗಮಿಸಿದ ವೇಳೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜನರನ್ನುದ್ದೇಶಿಸಿ ಮಾತನಾಡಲಾರಂಭಿಸಿದರು. ಇದೇ ಸಮಯದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಕೂಡ ಅಲ್ಲಿಗೆ ಆಗಮಿಸಿದರು. ಈ ಸಮಯದಲ್ಲಿ ಪ್ರೀತಂ ಪರವಾಗಿ ಬೆಂಬಲಿಗರು ಘೋಷಣೆ ಕೂಗಲಾರಂಭಿಸಿದರು. ಗೌಡರ ಗೌಡ ಪ್ರೀತಂ ಗೌಡ ಎಂಬ ಘೋಷಣೆ ಜೆಡಿಎಸ್ ಕಾರ್ಯಕರ್ತರ ಕಿವಿಗೆ ಬೀಳುತ್ತಿದ್ದಂತೆ ಕೆರಳಿದರು. ಈ ವೇಳೆ ಪ್ರೀತಂಗೌಡ ಬೆಂಬಲಿಗರಿಗೆ ಪ್ರೀತಂ ಪರ ಘೋಷಣೆ ಕೂಗದಂತೆ ಜೆಡಿಎಸ್ ಕಾರ್ಯಕರ್ತರು ತಾಕೀತು ಮಾಡಿದರು. ಆದರೂ ಅದನ್ನು ಲೆಕ್ಕಿಸದೆ ಪ್ರೀತಂ ಕಡೆಯವರು ಘೋಷಣೆ ಕೂಗಿದರು. ಇದರಿಂದ ಮೈತ್ರಿ ಪಕ್ಷದ ಕಾರ್ಯಕರ್ತರು ಪರಸ್ಪರ ವಾಗ್ವಾದಕ್ಕಿಳಿದರು.
ಬಿಜೆಪಿ ಮತ್ತು ಪ್ರೀತಂಗೌಡ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ ನಡೆಯಿತು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಪರಸ್ಪರರು ಕೈ ಕೈ ಮಿಲಾಯಿಸುವ ಹಂತಕ್ಕೂ ಗಲಾಟೆ ತೀವ್ರತೆ ಪಡೆದುಕೊಂಡಿತ್ತು. ಕೂಡಲೇ ಎಚ್ಚೆತ್ತ ಸ್ಥಳದಲ್ಲಿದ್ದ ಉಭಯಪಕ್ಷಗಳ ನಾಯಕರು ಕಾರ್ಯಕರ್ತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಕೊನೆಗೆ ಯಾರೋ ಕಿಡಿಗೇಡಿಗಳ ಮಾತಿಗೆ ಬೆಲೆಕೊಡುವ ಅವಶ್ಯಕತೆ ಇಲ್ಲ. ತೀಟೆ ಮಾಡುವುದಕ್ಕಾಗಿಯೇ ಇಲ್ಲಿಗೆ ಬಂದಿದ್ದಾರೆ. ಹಾಗಾಗಿ ಕಿಡಿಗೇಡಿಗಳ ಮಾತಿಗೆ ಬೆಲೆ ಕೊಡದಂತೆ ಕಾರ್ಯಕರ್ತರಿಗೆ ನಿಖಿಲ್ ಸಲಹೆ ನೀಡಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಧ್ಯಪ್ರವೇಶಿಸಿ ಪ್ರೀತಂ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರನ್ನು ಸಮಾಧಾನಪಡಿಸಿದರು.