ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಎನ್‌. ರಾಜಣ್ಣ ಅವರನ್ನು ಎರಡು ದಿನದಲ್ಲಿ ಎರಡನೇ ಸಲ ಭೇಟಿಯಾಗಿದ್ದಾರೆ. ಇಬ್ಬರೂ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.

ಭಾನುವಾರವೂ ಇಬ್ಬರ ನಡುವೆ ಭೇಟಿ

ಡಿ.ಕೆ. ಶಿವಕುಮಾರ್‌ ವಿರುದ್ಧ ಬಹಿರಂಗ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್‌ ಮಾಡುತ್ತಿದ್ದ ಕೆ.ಎನ್‌. ರಾಜಣ್ಣ ಅವರು ಶನಿವಾರ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಬೆನ್ನಲ್ಲೇ ಭಾನುವಾರವೂ ಇಬ್ಬರ ನಡುವೆ ಭೇಟಿ ನಡೆದಿದೆ.

ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಮಾಡಿದ್ದೇ ನಾನು ಎಂದು ಹೇಳಿದ್ದರು ಡಿ.ಕೆ.ಶಿ

ಶನಿವಾರ ಕೆ.ಎನ್. ರಾಜಣ್ಣ ಭೇಟಿ ಕುರಿತು ಪ್ರತಿಕ್ರಿಯಿಸಿದ್ದ ಡಿ.ಕೆ.ಶಿವಕುಮಾರ್‌, ಕೆ.ಎನ್‌. ರಾಜಣ್ಣ ನನಗೂ ಆಪ್ತ. ಸಿದ್ದರಾಮಯ್ಯ ಅವರಿಗೂ ರಾಜಣ್ಣನಿಗೆ ಸಂಬಂಧವಿಲ್ಲ. ಅವರನ್ನು ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಮಾಡಿದ್ದೇ ನಾನು ಎಂದು ಹೇಳಿದ್ದರು.


ಇದಕ್ಕೆ ತಿರುಗೇಟು ನೀಡಿದ್ದ ಕೆ.ಎನ್. ರಾಜಣ್ಣ, ‘ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನು ಸಿದ್ದರಾಮಯ್ಯ ಪರ. ಶಿವಕುಮಾರ್‌ ಎಷ್ಟೇ ಪ್ರಯತ್ನಿಸಿದರೂ ನನ್ನ ನಿಲುವು ಬದಲಾಗಲ್ಲ’ ಎಂದು ಹೇಳಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು.