ಸಾರಾಂಶ
ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಬಂಧನವಾಗಿರುವ ಆಪ್ ಸಂಸದ ಸಂಜಯ್ ಸಿಂಗ್ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಸ್ವಾತಿ ಮಲಿವಾಲ್ ಹಾಗೂ ಎನ್ಡಿ ಗುಪ್ತಾ ಆಯ್ಕೆಯಾಗಿದ್ದಾರೆ.
ನವದೆಹಲಿ: ರಾಜ್ಯಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮೂರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹಾಗೂ ಎನ್.ಡಿ. ಗುಪ್ತಾ, ಇ.ಡಿ.ಯಿಂದ ಬಂಧಿಸಲ್ಪಟ್ಟಿರುವ ಆಪ್ ನಾಯಕ ಸಂಜಯ್ ಸಿಂಗ್ ಆಯ್ಕೆಯಾದವರು.
ಈ ಮೂವರ ವಿರುದ್ಧ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಸಂಜಯ್ ಸಿಂಗ್ ಅವರು ಪೊಲೀಸ್ ವ್ಯಾನಿನಲ್ಲಿ ಬಂದಿದ್ದರು. ಈ ಹಿಂದೆ ಇದ್ದ ಸುಶೀಲ್ ಗುಪ್ತ ಅವರ ಸ್ಥಾನಕ್ಕೆ ಸ್ವಾತಿ ನಾಮಪತ್ರ ಸಲ್ಲಿಸಿದ್ದರು. ಜೊತೆಗೆ ಎನ್.ಡಿ.ಗುಪ್ತಾ ಪುನರಾಯ್ಕೆಯಾಗಿದ್ದಾರೆ.