ಸಾರಾಂಶ
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿ ಹೋಬಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಭರ್ಜರಿ ಪ್ರಚಾರ ನಡೆಸಿದರು. ಐದು ಸಾವಿರಕ್ಕೂ ಅಧಿಕ ಕಾರ್ಯಕರ್ತರು, ಜನ ಸಾಮಾನ್ಯರು, ಮಹಿಳೆಯರು ನಡುವೆ ಅದ್ಧೂರಿ ರೋಡ್ ಶೋ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರ ಸಮಾವೇಶ ಮುಗಿಯುತ್ತಿದ್ದಂತೆ ರಕ್ಷಾ ರಾಮಯ್ಯ ಯಲಹಂಕದಿಂದ ಮಂಚೇನಹಳ್ಳಿ ಪ್ರವೇಶಿಸಿದರು.
ರಕ್ಷಾ ರಾಮಯ್ಯ ಅವರನ್ನು ಪಕ್ಷದ ಕಾರ್ಯಕರ್ತರು, ಮುಖಂಡರು, ಕ್ಷೇತ್ರದ ಜನತೆ ಜೈಕಾರ, ಘೋಷಣೆಗಳ ನಡುವೆ ಸ್ವಾಗತಿಸಿದರು. ಯುವ ನಾಯಕನ ಜೊತೆ ಮಾತನಾಡಲು, ಕೈಕುಲುಕಲು ಮುಗಿಬಿದ್ದರು. ಜನ ಅಪರಿಮಿತ ಉತ್ಸಾಹ ಮತ್ತು ಸಂಭ್ರಮದಿಂದ ಸ್ವಾಗತಿಸಿದರು.
ರೋಡ್ ಶೋ ಉದ್ದಕ್ಕೂ ರಕ್ಷಾ ರಾಮಯ್ಯ ಕೈ ಮುಗಿದು ಈ ಬಾರಿ ತಮ್ಮನ್ನು ಆಶೀರ್ವದಿಸುವಂತೆ ವಿನಮ್ರವಾಗಿ ಕೋರಿದರು. ನಂತರ ಮಾತನಾಡಿದ ರಕ್ಷಾ ರಾಮಯ್ಯ, ಈ ಬಾರಿ ನನ್ನನ್ನು ಗೆಲ್ಲಿಸಿದರೆ ನಾನು ಜನರ ಧ್ವನಿಯಾಗಿ, ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸವನ್ನು ಅತ್ಯಂತ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯಿಂದ ಮಾಡುತ್ತೇನೆ ಎಂದು ಹೇಳಿದರು.