ರವಿ-ಲಕ್ಷ್ಮಿ ಅವಾಚ್ಯ ಶಬ್ದ ಪ್ರಕರಣ - ಸಿಐಡಿಗೆ ಸ್ಥಳ ಮಹಜರಿಗೆ ಅನುಮತಿ ನೀಡಲ್ಲ : ಹೊರಟ್ಟಿ

| Published : Jan 05 2025, 08:58 AM IST

Basavaraj Horatti

ಸಾರಾಂಶ

  ಲಕ್ಷ್ಮೀ ಹೆಬ್ಬಾಳಕರ್‌ ಅವರಿಗೆ   ಸಿ.ಟಿ. ರವಿ ಅವರು ಅವಾಚ್ಯ ಬಳಸಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ’ ಎಂದು ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಇದೇ ಮೊದಲ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ.

ಬೆಳಗಾವಿ : ‘ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ವೇಳೆ ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಅವಾಚ್ಯ ಬಳಸಿ ನಿಂದಿಸಿದ್ದಾರೆ ಎನ್ನಲಾದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ’ ಎಂದು ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಇದೇ ಮೊದಲ ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ.

ನಗರದಲ್ಲಿ ಶನಿವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿ ಪರಿಷತ್ತಿನಲ್ಲಿ ಸಿಐಡಿ ಅಧಿಕಾರಿಗಳಿಗೆ ಸ್ಥಳ ಮಹಜರಿಗೆ ಅನುಮತಿ ಕೊಡುತ್ತೀರಾ ಎಂಬ ಪ್ರಶ್ನೆಗೆ, ‘ಸದನ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸದನ ಲಾಕ್ ಆಗಿದೆ. ಸದನದ ಒಳಗಡೆ ಬಡಿದಾಟ ಹೊಡೆದಾಟ ಆಗಿಲ್ಲ. ಪಂಚನಾಮೆ ಮಾಡಬೇಕು ಅಂದರೆ ಯಾವ ರೀತಿ ಮಾಡುತ್ತಾರೆ ಎನ್ನುವುದನ್ನು ಸಿಐಡಿ ಹೇಳಲಿ. ಸದ್ಯಕ್ಕೆ ಸಿಐಡಿ ಅಧಿಕಾರಿಗಳಿಗೆ ಸದನದಲ್ಲಿ ಸ್ಥಳ ಮಹಜರಿಗೆ ಅನುಮತಿ ಕೊಡುವುದಿಲ್ಲ’ ಎಂದು ಸ್ಪಷ್ಪಪಡಿಸಿದರು.

ವಿಡಿಯೋ ಸಾಕ್ಷಿ ಕೊಡಿ ಎಂದು ಸಿಐಡಿ ನೀಡಿರುವ ಪತ್ರದ ಕುರಿತು ಮಾತನಾಡಿದ ಅವರು, ‘ನಿನ್ನೆ ವಿಡಿಯೋ ಸಾಕ್ಷಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಕೊಟ್ಟಿದ್ದಾರೆ. ಮೊದಲು ರವಿ ಕೊಟ್ಟಿದ್ದರು. ನಮ್ಮದೇ ತಂಡಕ್ಕೆ ಈ ವಿಡಿಯೋ ಕೊಟ್ಟಿದ್ದೇನೆ. ಸೋಮವಾರ ಮತ್ತು ಮಂಗಳವಾರ ಮತ್ತೊಮ್ಮೆ ವಿಡಿಯೋ - ಆಡಿಯೋ ನೋಡುತ್ತೇವೆ ಅವರ ವರದಿ ನೋಡಿ ಎಫ್ಎಸ್‌ಎಲ್‌ಗೆ ಕಳುಹಿಸುತ್ತೇವೆ. ಸತ್ಯಾಂಶ ನೋಡಿ ನಮ್ಮದೆ ತೀರ್ಮಾನ ಮಾಡುತ್ತೇವೆ’ ಎಂದು ತಿಳಿಸಿದರು.

‘ನಾಳೆ ಅಥವಾ ನಾಡಿದ್ದು ಇಬ್ಬರಿಗೂ ಪತ್ರ ಬರೆಯಲು ನಿರ್ಧಾರ ಮಾಡಿದ್ದೇನೆ. ಈಗ ಸಂಧಾನ ಆಗುವ ರೀತಿ ಕಾಣಿಸುತ್ತಿಲ್ಲ. ಪ್ರಕರಣ ರಾಜಕೀಯ ತಿರುವು ಪಡೆದಿದೆ. ಆದರೂ ಇಬ್ಬರಿಗೂ ಫೋನ್ ಮಾಡಿ ಸಂಧಾನ ಮಾಡಲು ಪ್ರಯತ್ನಿಸುವೆ’ ಎಂದರು.