ಶ್ರೀರಾಮನಿಗೆ ಬಿಜೆಪಿಯವರ ಮೇಲೆ ವಿಶ್ವಾಸವಿಲ್ಲ: ವೀರಪ್ಪ ಮೊಯ್ಲಿ

| Published : Dec 26 2023, 01:30 AM IST / Updated: Dec 26 2023, 12:56 PM IST

ಸಾರಾಂಶ

ಶ್ರೀರಾಮ ಎಂದೂ ಸಾಮಾಜ್ಯ ವಿಸ್ತರಣೆಗೆ ಕೈ ಹಾಕಲಿಲ್ಲ. ಅಯೋಧ್ಯೆಯ ಸಂಸ್ಕೃತಿಯನ್ನು ಕಿಷ್ಕಿಂದಾ ಮತ್ತು ಲಂಕಾ ಮೇಲೆ ಹೇರಲಿಲ್ಲ. ಸಾಮ್ರಾಜ್ಯ ವಿಸ್ತರಣಾ ಷಾಹಿ ಧೋರಣೆ ಅವರಿಗಿರಲಿಲ್ಲ. ಆದರೆ, ಬಿಜೆಪಿಯವರು ತಮ್ಮ ಸಂಸ್ಕೃತಿಯನ್ನು ಭಾರತ ದೇಶದ ಹೇರುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ: ಶ್ರೀರಾಮನಿಗೆ ನನ್ನ ಮೇಲೆ ವಿಶ್ವಾಸವಿದೆ ಬಿಜೆಪಿಯವರ ಮೇಲೆ ವಿಶ್ವಾಸ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಅಭಿಪ್ರಾಯಪಟ್ಟರು.

ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅ‍ವರು, ವಾಲ್ಮಿಕಿ ಮಹರ್ಷಿ ಸೇರಿದಂತೆ ಇಂದಿನ ಕುವೆಂಪು ಮತ್ತು ತಾವು ಸೇರಿ ಎಲ್ಲ ಲೇಖಕರೂ ಬರೆದ ರಾಮಾಯಣದಲ್ಲಿರುವಂತೆ, ಶ್ರೀರಾಮಚಂದ್ರನಂತ ನಾಯಕರು ಈ ದೇಶದಲ್ಲಿ ಯಾರು ಇಲ್ಲ. ಅಂದಿನ ಕಾಲದಲ್ಲೇ ಅವರು ಜಾತ್ಯತೀತ ಸಿದ್ಧಾತವನ್ನು ಇಡೀ ಜಗತ್ತಿಗೆ ಸಾರಿದ್ದರು ಎಂದರು.

ಶ್ರೀ ರಾಮ ಅಧಿಕಾರ ಷಾಹಿ ಆಗಿರಲಿಲ್ಲ:

ಶ್ರೀರಾಮ ಎಂದೂ ಸಾಮಾಜ್ಯ ವಿಸ್ತರಣೆಗೆ ಕೈ ಹಾಕಲಿಲ್ಲ. ಅಯೋಧ್ಯೆಯ ಸಂಸ್ಕೃತಿಯನ್ನು ಕಿಷ್ಕಿಂದಾ ಮತ್ತು ಲಂಕಾ ಮೇಲೆ ಹೇರಲಿಲ್ಲ. ಸಾಮ್ರಾಜ್ಯ ವಿಸ್ತರಣಾ ಷಾಹಿ ಧೋರಣೆ ಅವರಿಗಿರಲಿಲ್ಲ. ಆದರೆ ಬಿಜೆಪಿಯವರು ತಮ್ಮ ಸಂಸ್ಕೃತಿಯನ್ನು ಭಾರತ ದೇಶದ ಹೇರುತ್ತಿದ್ದಾರೆ. ಸಾಮ್ರಾಜ್ಯ ಷಾಹಿ, ಅಧಿಕಾರ ಷಾಹಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ ಎಂದೂ ಶ್ರೀರಾಮನನ್ನು ಚುನಾವಣೆಯಲ್ಲಿ ಮತಕ್ಕಾಗಿ ಬಳಸಿಕೊಂಡಿಲ್ಲ. ಶ್ರೀರಾಮಚಂದ್ರ ನಮ್ಮ ಹೃದಯದಲ್ಲಿದ್ದಾನೆ. ಆದರೆ ಬಿಜೆಪಿಯವರು ಶ್ರೀರಾಮನನ್ನು ಚುನಾವಣೆಯಲ್ಲಿ ಮತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಹೃದಯದಲ್ಲಿ ಶ್ರೀರಾಮ ಇಲ್ಲ. ಅವರು ಚುನಾವಣೆ ಬಂದಾಗ ಮಾತ್ರ ನೆನಪಿಸಿಕೊಳ್ಳುತ್ತಾರೆ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧೆ:

ಬರುವ ಲೋಕ ಸಭಾ ಚುನಾವಣೆಯಲ್ಲಿ ಚುನಾವಣೆಗೆ ನಿಂತರೆ ಚಿಕ್ಕಬಳ್ಳಾಪುರದಲ್ಲಿ ನಿಲ್ಲುವೆ, ಇಲ್ಲದಿದ್ದರೆ ಬೇರೆ ಎಲ್ಲೂ ನಿಲ್ಲುವುದಿಲ್ಲ. ಎಕೆಂದರೆ ರಾಜಕೀಯವಾಗಿ ನನಗೆ ಚಿಕ್ಕಬಳ್ಳಾಪುರ ಜನತೆ ಜೀವನ ಮತ್ತು ಜೀವ ದಾನ ಮಾಡಿದ್ದು ಚಿಕ್ಕಬಳ್ಳಾಪುರ. ಈ ಲೋಕಸಭಾ ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ. ಅವರ ಋಣ ತೀರಿಸಲು ಕ್ಷೇತ್ರ ಬಿಟ್ಟು ಹೋಗುವುದಿಲ್ಲ, ನನಗೆ ಅಧಿಕಾರ ದುರಾಸೆ ಇಲ್ಲ. ಕಳೆದ ಐದು ವರ್ಷದಿಂದ ಅಧಿಕಾರ ಇಲ್ಲದೇ ಇದ್ದರೂ ಕ್ಷೇತ್ರದಲ್ಲಿ ಜನರ ನಡುವೆ ಓಡಾಡಿಕೊಂಡು ಅವರ ಕಷ್ಟ-ಸುಖಗಳಲ್ಲಿ ಬಾಗಿಯಾಗಿದ್ದೇನೆ ಎಂದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್‌, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಮಾಜಿ ಶಾಸಕ ಎಂ.ಶಿವಾನಂದ್, ಬಾಗೇಪಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ. ಕೆಪಿಸಿಸಿ ಸದಸ್ಯ ಲಾಯರ್ ನಾರಾಯಣಸ್ವಾಮಿ. ನಗರಸಭಾಸದಸ್ಯ ಎಂ.ಲಕ್ಷ್ಮಣ್, ಖಾದಿಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ, ಎನ್‌.ರಮೇಶ್, ಕಿಸಾನ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಮತಾಮೂರ್ತಿ ಇದ್ದರು.