ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಡಿ.15ರ ಕೇಂದ್ರ ಸಚಿವ ಎಚ್ಡಿಕೆ ಅಭಿನಂದನಾ ಸಮಾರಂಭ ರದ್ದು

| Published : Dec 09 2024, 12:46 AM IST / Updated: Dec 09 2024, 05:45 AM IST

ಸಾರಾಂಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಡಿ.15ರಂದು ಆಯೋಜಿಸಿದ್ದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅಭಿನಂದನಾ ಸಮಾರಂಭವನ್ನು ರದ್ದುಪಡಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

 ಮದ್ದೂರು : ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಡಿ.15ರಂದು ಆಯೋಜಿಸಿದ್ದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅಭಿನಂದನಾ ಸಮಾರಂಭವನ್ನು ರದ್ದುಪಡಿಸಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಕ್ಷೇತ್ರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ವೇಳೆ ನನ್ನ ಅಭಿನಂದನಾ ಸಮಾರಂಭ ಮಾಡಿದರೆ ಗೊಂದಲ ಆಗುತ್ತದೆ. ಆದ್ದರಿಂದ ಕಾರ್ಯಕ್ರಮ ಮುಂದೂಡುವಂತೆ ಸೂಚಿಸಿದ್ದಾರೆ ಎಂದರು.

ಕಾರ್ಯಕ್ರಮ ಮಾಡುವ ಬಗ್ಗೆ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇವು. ಆದರೆ, ಎಚ್ಡಿಕೆ ಸೂಚನೆ ಮೇರೆಗೆ ಕಾರ್ಯಕ್ರಮ ಮುಂದೂಡಿದ್ದೇವೆ. ಇದಕ್ಕೆ ಇದಕೆ ಬೇರೆ ಯಾವುದೇ ಕಾರಣ ಇಲ್ಲ. ಸಮ್ಮೇಳನ ಮುಗಿದ ಮೇಲೆ ದಿನಾಂಕ ನಿಗದಿ ಮಾಡುತ್ತೇವೆ ಎಂದರು.

ಸಚಿವ ಚಲುವರಾಯಸ್ವಾಮಿಗೆ ತಿರುಗೇಟು:

ಮಗ ಸೋತಿದ್ದಕ್ಕೆ ಸಮಾರಂಭ ಮಾಡುತ್ತಿದ್ದಾರಾ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಪುಟ್ಟರಾಜು, ಚಲುವರಾಯಸ್ವಾಮಿ ಈ ಹಿಂದೆಯೂ ಚುನಾವಣೆ ಸೋತಿಲ್ವ. ಸಮ್ಮಿಶ್ರವಾಗಿ ಚುನಾವಣೆ ಮಾಡಿದ್ದಾಗ ಇವರು ಏನು ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ನಿಖಿಲ್ ಸೋಲು ಜನರ ತೀರ್ಮಾನ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

ಇಂತಹ ಜಿಲ್ಲಾ ಮಂತ್ರಿಗಳನ್ನು ಬಹಳ ನೋಡಿದ್ದೇವೆ. ನಮಗೂ ಮಾತನಾಡಲು ಬರುತ್ತದೆ. ಟೀಕೆ ಮಾಡುವುದನ್ನು ಬಿಟ್ಟು ಜಿಲ್ಲೆಯಲ್ಲಿ ಮೊದಲು ಹೊಸ ಡಾಂಬರು ಬೇಡ. ಗುಂಡಿ ಬಿದ್ದ ರಸ್ತೆಗಳನ್ನಾದರೂ ಮುಚ್ಚಲಿ ಎಂದು ಆಗ್ರಹಿಸಿದರು.

ಸಾಹಿತ್ಯ ಸಮ್ಮೇಳನದ ಸಭೆಗಳಲ್ಲಿ ಕುಮಾರಸ್ವಾಮಿ ಭಾಗವಹಿಸದೇ ಇರುವ ವಿಚಾರಕ್ಕೆ ಉತ್ತರಿಸಿದ ಪುಟ್ಟರಾಜು, ನಾವೆಲ್ಲ ಸಭೆಗಳಲ್ಲಿ ಭಾಗವಹಿಸಿದ್ದೇವೆ. ಕೇಂದ್ರ ಮಂತ್ರಿಗಳು ಸಂಸತ್ ಅಧಿವೇಶನ ಇರುವ ಹಿನ್ನೆಲೆಯಲ್ಲಿ ಭಾಗವಹಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

ಸಮ್ಮೇಳನದ ಸಭೆಗೆ 1.30 ಕ್ಕೆ ಬರಲು ಹೇಳಿ 4 ಗಂಟೆಗೆ ಸಚಿವರು ಬರುತ್ತಾರೆ. ಇದಾ ಉಸ್ತುವಾರಿ ಸಚಿವರ ಉಟ್ಟಾ?, ನಮಗೆ ವಹಿಸಿರುವ ಜವಾಬ್ದಾರಿ ಮಾಡುತ್ತಿದ್ದೇವೆ. ಜಿಲ್ಲಾಡಳಿತ ಕರೆದಿದ್ದಾರೆ ನಾವು ಹೋಗಿದ್ದೇವೆ. ನಾವು ನಾಡು-ನುಡಿಯ ಕೆಲಸ ಮಾಡಿದ್ದೇವೆ. ಸಾಹಿತ್ಯ ಸಮ್ಮೇಳನ ಚೆನ್ನಾಗಿ ಮಾಡಲಿ ಎಂದರು.

ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ವರಿಷ್ಠರ ತೀರ್ಮಾನ: 

ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ವಿಚಾರವಾಗಿ ಉತ್ತರಿಸಿ, ಈ ಬಗ್ಗೆ ಪಕ್ಷದ ವರಿಷ್ಠರಾದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಪಕ್ಷ ತೀರ್ಮಾನ ಮಾಡುತ್ತದೆ. ಕಾಂಗ್ರೆಸ್‌ನಲ್ಲೂ ವಂಶ ರಾಜಕಾರಣ ಇದೆ. ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಕುಟುಂಬ ಕೂಡ ‘ಕುಟುಂಬ ರಾಜಕಾರಣ’ ಮಾಡುತ್ತಿದೆ. ದೇವೇಗೌಡರ ಕುಟುಂಬ ರಾಜಕಾರಣ ಮಾಡಿದರೆ ತಪ್ಪೇನು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿ ಈಗ ಏನು ಆಗುತ್ತಿದೆ ನೋಡುತ್ತಿದ್ದೇವೆ. ಈ ಬಗ್ಗೆ ಚಲುವರಾಯಸ್ವಾಮಿ ಹೇಳಬೇಕು. ಇದು ಬಹಳ ದಿನ ನಡೆಯುವುದಿಲ್ಲ. ನಮ್ಮ ಬಗ್ಗೆ ಲಘುವಾಗಿ ಮಾತನಾಡಬೇಡಿ ಗೌರವ ಇಟ್ಟುಕೊಂಡು ಮಾತನಾಡಬೇಕು. ಇದು ಕೊನೆಯಾಗದೇ ಇದ್ದರೇ ನಾವು ಮಾತನಾಡುತ್ತೇವೆ ಎಂದು ಕಿಡಿಕಾರಿದರು.

ನಮ್ಮದು ಇರೋದು ದೇವೇಗೌಡರ ಮನೆ ಮಾತ್ರ:

ನಾವು ನಮ್ಮ ನಾಯಕನ ಹತ್ತಿರ ಸೈ ಅನ್ನಿಸಿಕೊಳ್ಳಲು ಕೆಲಸ ಮಾಡುತ್ತೇವೆ. ಅದರಲ್ಲಿ ತಪ್ಪೇನೂ ಇದೆ?. ನಮ್ಮದು ಇರೋದು ದೇವೇಗೌಡರ ಮನೆ ಮಾತ್ರ. ಅವರ ರೀತಿ ಸಿದ್ದರಾಮಯ್ಯ ಜೊತೆ ಇರಬೇಕಾ, ಶಿವಕುಮಾರ್ ಜೊತೆ ಇರಬೇಕಾ ಎಂಬ ಗೊಂದಲದಲ್ಲಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ದೇವೆಗೌಡರು, ಕುಮಾರಸ್ವಾಮಿ ಹೆಚ್ಚು ಕೆಲಸ ಮಾಡಿದ್ದಾರೆ. ಹೀಗಾಗಿ ಮಂಡ್ಯದ ಜನ ಮತ ಹಾಕಿದ್ದಾರೆ. ನಮ್ಮ ಪಕ್ಷದ ಬಗ್ಗೆ ಇವರು ಯಾಕೆ ಮಾತನಾಡುತ್ತಾರೆ. ಅವರು ವಿಧಾನಸಭೆ ಚುನಾವಣೆಯಲ್ಲಿ ಜಸ್ಟ್ ಪಾಸಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರ ಸಾಧನೆ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಜೆಡಿಎಸ್ ಮುಖಂಡ ಕೆಸ್ತೂರು ಕೆ.ಟಿ.ರಾಜಣ್ಣ ಇದ್ದರು.