ದಲಿತರಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಕೆ

| Published : Jan 31 2024, 02:19 AM IST

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ರೀತಿ ಅನುದಾನದ ಕೊರತೆ ಇಲ್ಲ ಎಂದು ಪ್ರಚಾರ ಮಾಡುತ್ತಿದೆ, ಹೊರತಾಗಿ ಜಿಲ್ಲಾ ಕೇಂದ್ರದಲ್ಲಿ ಸುಮಾರು ೨.೫ ಲಕ್ಷ ಜನಸಂಖ್ಯೆ ಇದ್ದು ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ, ಗ್ಯಾರಂಟಿ ಯೋಜನೆಗಳ ಅಮಲಿನಲ್ಲಿ ತೇಲಾಡುತ್ತಿರುವ ಕಾಂಗ್ರೆಸ್ ಸರ್ಕಾರವು ದಲಿತರಿಗೆ ಮೀಸಲಿಟ್ಟಿದ್ದ ೧೧,೧೪೪ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಂಡು ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ ಆರೋಪಿಸಿದರು.

ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ದಲಿತ ಸಂಘಟನೆಗಳು ಹಲವಾರು ಭಾರಿ ಪ್ರತಿಭಟಿಸಿ ಸಾರ್ವಜನಿಕರ ಗಮನಕ್ಕೆ ತರಲಾಗಿದೆ, ಆದರೂ ಸರ್ಕಾರವು ದಲಿತ ಅಭಿವೃದ್ದಿಗೆ ಮೀಸಲಾಗಿದ್ದ ಅನುದಾನ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದರು.

ಯರಗೋಳ್‌ ನೀರು ಪೂರೈಸುತ್ತಿಲ್ಲ

ರಾಜ್ಯ ಸರ್ಕಾರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಯಾವುದೇ ರೀತಿ ಅನುದಾನದ ಕೊರತೆ ಇಲ್ಲ ಎಂದು ಪ್ರಚಾರ ಮಾಡುತ್ತಿದೆ, ಹೊರತಾಗಿ ಜಿಲ್ಲಾ ಕೇಂದ್ರದಲ್ಲಿ ಸುಮಾರು ೨.೫ ಲಕ್ಷ ಜನಸಂಖ್ಯೆ ಇದ್ದು ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಯರಗೋಳ್ ಯೋಜನೆಯನ್ನು ಲೋಕಾರ್ಪಣೆ ಮಾಡಿ ಹಲವಾರು ತಿಂಗಳು ಕಳೆದರೂ ಈವರೆಗೆ ಯರಗೋಳ್ ನೀರು ಜನತೆ ತಲುಪಿಲ್ಲ ಎಂಬುವುದಕ್ಕೆ ನಮ್ಮ ಪಿ.ಸಿ ಬಡಾವಣೆಯೇ ಉದಾಹರಣೆಯಾಗಿದೆ ಎಂದರು.

ಕೊತ್ತೂರು ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಕೋಲಾರ ವಿಧಾನ ಸಭಾ ಶಾಸಕ ಕೊತ್ತೂರು ಮಂಜುನಾಥ್ ೨೦೧೩ರಲ್ಲಿ ಮುಳಬಾಗಿಲು ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಸುಳ್ಳು ಜಾತಿ ಪ್ರಮಾಣ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ದುರ್‍ಬಳಿಸಿಕೊಂಡಿರುವ ವಿರುದ್ಧ ಸರ್ಕಾರವು ಹೈಕೋರ್ಟ್ ತೀರ್ಪಿನ ಪ್ರಕಾರ ಶೀಘ್ರವೇ ಕಾನೂನು ಕ್ರಮ ಜರುಗಿಸಬೇಕಾಗಿದೆ, ಆದರೆ ಶಾಸಕರಿಗೆ ಮೇಲ್ಮನವಿ ಸಲ್ಲಿಕೆಗೆ ಸರ್ಕಾರವು ಅವಕಾಶ ನೀಡಿದ ಹಿನ್ನಲೆಯಲ್ಲಿ ಕಾನೂನು ಕ್ರಮಕ್ಕೆ ತಡೆಯಾಜ್ಞೆ ತರಲಾಗಿದೆ ಇದನ್ನು ತೆರವು ಮಾಡಿಸಿ, ಅಟ್ರಾಸಿಟಿ ಪ್ರಕರಣ ದಾಖಲು ಮಾಡಿ ಸೂಕ್ತ ಕ್ರಮಜರುಗಿಸಬೇಕೆಂದು ಆಗ್ರಹಿಸಿದರು.ಸರ್ಕಾರಕ್ಕೆ ಸುಳ್ಳು ಪ್ರಮಾಣ ಪತ್ರ ನೀಡಿರುವ ಶಾಸಕ ಕೊತ್ತೂರು ಮಂಜುನಾಥ್‌ರಿಗೆ ಸಂವಿಧಾನದ ಮೇಲೆ ಕನಿಷ್ಠ ಗೌರವ ಇದ್ದಲ್ಲಿ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕರಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಕೋಲಾರವನ್ನು ಸಿಂಗಪುರ್ ಮಾಡುತ್ತೇನೆಂದು ಚುನಾವಣೆಗಳಲ್ಲಿ ಮತದಾರರಿಗೆ ಆಶ್ವಾಸನೇ ನೀಡಿದ ಕೊತ್ತೂರು ಈಗ ಪಾಳೇಗಾರರಂತೆ ಆಡಳಿತ ನಡೆಸಲು ಮುಂದಾಗಿದ್ದಾರೆ, ಹಾಳಾಗಿರುವ ರಸ್ತೆಗಳನ್ನು ದುರಸ್ಥಿ ಮಾಡಿಸಲು ಮೀನಮೇಷ ಎಣಿಸುತ್ತಿದ್ದಾರೆ. ರಸ್ತೆಯಲ್ಲಿ ಸ್ವಚ್ಚತೆ ಎಂಬುವುದು ಇಲ್ಲವಾಗಿದ್ದು ಎಲ್ಲಿ ನೋಡಿದರೂ ತ್ಯಾಜ್ಯದ ರಾಶಿಗಳಿಂದ ದುರ್ವಾಸನೆ ಬೀರುತ್ತಿದೆ, ಚರಂಡಿಗಳು ತಿಪ್ಪೆಗುಂಡಿಗಳಾಗಿ ಪರಿವರ್ತನೆಯಾಗಿದೆ, ಮತದಾರರು ಶಾಸಕರಾಗಿ ಆಯ್ಕೆ ಮಾಡಿದಕ್ಕೆ ಪಶ್ಚಾತಾಪಪಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಜೇಶ್ ಸಿಂಗ್ ಇದ್ದರು.