ಸಾರಾಂಶ
ಜಲಂಧರ್ : ಇಂಡಿಯಾ ಕೂಟದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಜನರು ಮತ್ತೆ ಮೋದಿ ಸರ್ಕಾರವನ್ನು ಬಯಸುತ್ತಿದ್ದಾರೆ. ವಿಪಕ್ಷಗಳ ಬಲೂನು ಒಡೆದಿದೆ ಮತ್ತು ಯಾರು ಅವರಿಗೆ ಮತ ಹಾಕಲು ಬಯಸುವುದಿಲ್ಲ’ ಎಂದು ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.
ಜಲಂಧರ್ನಲ್ಲಿ ಲೋಕಸಭಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,‘ಜಲಂಧರ್ನ ಚೌಕ್ನಲ್ಲಿ ನಿಂತು 100 ಜನರಲ್ಲಿ ಈ ಬಾರಿ ಯಾರು ಸರ್ಕಾರ ರಚಿಸುತ್ತಾರೆ ಎಂದು ಕೇಳಿದರೆ, 90 ಜನರು ಮೋದಿ ಸರ್ಕಾರ ಮರಳುತ್ತದೆ ಎನ್ನುತ್ತಾರೆ. ಜನರು ಮತ್ತೆ ಮೋದಿ ಸರ್ಕಾರವನ್ನು ರಚಿಸುವ ಮನಸ್ಸು ಮಾಡಿರುವಾಗ ಬೇರೆಯವರಿಗೆ ಮತ ಹಾಕುವ ತಪ್ಪು ಯಾಕೆ ಮಾಡುತ್ತಾರೆ. 10 ವರ್ಷಗಳಲ್ಲಿ ದೇಶ ಹೊಸ ಯುಗವನ್ನು ಕಂಡಿದೆ’ ಎಂದು ಇಂಡಿಯಾ ಕೂಟದ ವಿರುದ್ಧ ವ್ಯಂಗವಾಡಿದರು.
ಇದೇ ಸಂದರ್ಭದಲ್ಲಿ, ತಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ ‘ಕಾಂಗ್ರೆಸ್ ಆಡಳಿತದಲ್ಲಿದ್ದ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ನಾವು ಪರಿಹರಿಸಿದ್ದೇವೆ .ಭಾರತದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಿದ್ದ ಕಾಲವೊಂದಿತ್ತು. ಆದರೆ ಅವರ ಬೆನ್ನನ್ನು ಬಿಜೆಪಿ ಸರ್ಕಾರ ಮುರಿದಿದೆ. ಕಾಂಗ್ರೆಸ್ ಇರುವಲ್ಲಿ ಸಮಸ್ಯೆಗಳು ಉಳಿಯುತ್ತವೆ ಎಂದು ದೇಶ ಅರ್ಥ ಮಾಡಿಕೊಂಡಿದೆ. ಬಿಜೆಪಿಯೇ ಅದಕ್ಕೆ ಪರಿಹಾರವಾಗಿದೆ.ಅದಕ್ಕಾಗಿ ಇಡೀ ದೇಶದ ಜನರು 400 ಪಾರ್ (ಚಾರ್ ಸೌ ಪಾರ್) ಎಂದು ಹೇಳುತ್ತಿದ್ದಾರೆ’ ಎಂದರು.
‘ಪ್ರಸ್ತುತ ಬಿಜೆಪಿ 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಿದೆ.ಕಾಂಗ್ರೆಸ್ ಕಾಲದಲ್ಲಿ ದೇಶದ ಆರ್ಥಿಕತೆ ಬಿಕ್ಕಟ್ಟಿನಲ್ಲಿತ್ತು, ಆದರೆ ಇದೀಗ ದೇಶ ಭಾರತ ಐದನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ.’ ಎಂದರು.