ಶೆಟ್ಟರ್‌ ಮರಳಿ ಕರೆತರುವ ಯತ್ನ ಬಿಜೆಪಿಯಲ್ಲಿ ಆರಂಭ

| Published : Jan 24 2024, 02:00 AM IST / Updated: Jan 24 2024, 12:05 PM IST

Jagadesh Shettar

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ತಿನ ಹಾಲಿ ಕಾಂಗ್ರೆಸ್‌ ಸದಸ್ಯ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿ ಕರೆತರುವ ಪ್ರಯತ್ನ ಗಂಭೀರವಾಗಿ ಆರಂಭವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ತಿನ ಹಾಲಿ ಕಾಂಗ್ರೆಸ್‌ ಸದಸ್ಯ ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಬಿಜೆಪಿ ಕರೆತರುವ ಪ್ರಯತ್ನ ಗಂಭೀರವಾಗಿ ಆರಂಭವಾಗಿದೆ.

ಶೆಟ್ಟರ್ ಜತೆ ಮಾತುಕತೆ ನಡೆಸಬಹುದು ಎಂಬ ಹಸಿರು ನಿಶಾನೆಯನ್ನು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ನೀಡಿದ್ದು, ಶೀಘ್ರದಲ್ಲೇ ಮಾತುಕತೆ ಪ್ರಕ್ರಿಯೆಗೆ ಚಾಲನೆ ಸಿಗುವ ನಿರೀಕ್ಷೆಯಿದೆ.ಆದರೆ, ವಾಪಸ್ ಬರಲು ಶೆಟ್ಟರ್ ಅವರಿಗೆ ಯಾವ ಯಾವ ಸ್ಥಾನದ ಭರವಸೆ ನೀಡಲಾಗುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆ ನಿಂತಿದೆ. 

ಬೆಳಗಾವಿ ಅಥವಾ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮುಕ್ತ ನಿಲುವು ಹೊಂದಿದ್ದಾರೆ ಎನ್ನಲಾಗುತ್ತಿದ್ದರೂ ಅಲ್ಲಿಂದ ಸ್ಪರ್ಧಿಸಿ ಗೆದ್ದ ಬಳಿಕ ಕೇಂದ್ರ ಸಚಿವ ಸ್ಥಾನ ನೀಡುವ ಭರವಸೆ ನೀಡಿದರೆ ಮಾತ್ರ ಶೆಟ್ಟರ್ ಪಕ್ಷಕ್ಕೆ ವಾಪಸಾಗಲು ಒಪ್ಪಬಹುದು ಎಂಬ ಮಾತು ಕೇಳಿಬರುತ್ತಿದೆ. 

ಜತೆಗೆ ಲೋಕಸಭಾ ಚುನಾವಣೆ ಬಳಿಕ ಯಾವುದಾರೊಂದು ರಾಜ್ಯದ ರಾಜ್ಯಪಾಲ ಹುದ್ದೆಯನ್ನು ನೀಡುವ ಬಗ್ಗೆಯೂ ಬಿಜೆಪಿ ನಾಯಕರು ಪ್ರಸ್ತಾಪಿಸಬಹುದು ಎಂದು ತಿಳಿದು ಬಂದಿದೆ.

ಶೆಟ್ಟರ್‌ ಮನವೊಲಿಕೆ ಏಕೆ?:ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊನೆಯ ಕ್ಷಣದಲ್ಲಿ ಟಿಕೆಟ್ ತಪ್ಪಿಸಿದ್ದರಿಂದ ಕೋಪಗೊಂಡ ಶೆಟ್ಟರ್ ಅವರು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 

ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡರೂ ಅವರನ್ನು ಬಳಿಕ ವಿಧಾನಪರಿಷತ್ ಸದಸ್ಯರನ್ನಾಗಿಸಿತು.ಇದೀಗ ಲೋಕಸಭಾ ಚುನಾವಣೆ ಎದುರಾಗುತ್ತಿರುವುದರಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ. 

ಹೀಗಾಗಿ, ಜಗದೀಶ್ ಶೆಟ್ಟರ್ ಅವರನ್ನು ವಾಪಸ್ ಕರೆತಂದರೆ ಅದು ಅನುಕೂಲವಾಗಬಹುದು ಎಂಬ ಲೆಕ್ಕಾಚಾರವನ್ನು ಪಕ್ಷದ ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಾಕಿದ್ದಾರೆ. 

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ ಅವರು ತಮ್ಮ ಚುನಾವಣೆಯ ಹಿನ್ನೆಲೆಯಲ್ಲಿ ಶೆಟ್ಟರ್ ವಾಪಸ್ ಬರಲಿ ಎಂಬ ನಿರೀಕ್ಷೆ ಹೊಂದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಶೆಟ್ಟರ್ ಅವರ ಆಪ್ತರು ಹೇಳುವ ಪ್ರಕಾರ, ರಾಜ್ಯ ಬಿಜೆಪಿ ನಾಯಕರು ಮೊದಲ ಹಂತದಲ್ಲಿ ಅಧಿಕೃತವಾಗಿ ಮಾತುಕತೆ ನಡೆಸಿ ಪಕ್ಷದ ಹೈಕಮಾಂಡ್‌ ಜತೆಯೂ ಸಮಾಲೋಚನೆ ನಡೆಸಿ ಸೂಕ್ತ ಭರವಸೆ ನೀಡಿದಲ್ಲಿ ಮಾತ್ರ ಶೆಟ್ಟರ್ ಸೇರ್ಪಡೆ ಸಾಧ್ಯವಾಗಬಹುದು.