ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿನ ಬಹಿರಂಗ ಕಿತ್ತಾಟದ ಮಧ್ಯೆಯೇ ನಾಳಿನ ಸಭೆ ಕುತೂಹಲ

| Published : Jan 12 2025, 07:57 AM IST

Congress flag

ಸಾರಾಂಶ

ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿನ ಬಹಿರಂಗ ಹೇಳಿಕೆಗಳ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸೋಮವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಅಧಿಕಾರ ಹಂಚಿಕೆ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಮುಖಂಡರಿಗೆ ಕಟ್ಟುನಿಟ್ಟಿನ ತಾಕೀತು ಮಾಡುವ ಸಾಧ್ಯತೆಯಿದೆ.

ಬೆಂಗಳೂರು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿನ ಬಹಿರಂಗ ಹೇಳಿಕೆಗಳ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಸೋಮವಾರ ಬೆಂಗಳೂರಿಗೆ ಆಗಮಿಸುತ್ತಿದ್ದು, ಅಧಿಕಾರ ಹಂಚಿಕೆ ಕುರಿತು ಬಹಿರಂಗ ಹೇಳಿಕೆ ನೀಡದಂತೆ ಮುಖಂಡರಿಗೆ ಕಟ್ಟುನಿಟ್ಟಿನ ತಾಕೀತು ಮಾಡುವ ಸಾಧ್ಯತೆಯಿದೆ.

ಬೆಳಗ್ಗೆ ನಡೆಯುವ ಕೆಪಿಸಿಸಿ ವಿಸ್ತ್ರತ ಸರ್ವ ಸದಸ್ಯರ ಸಭೆಯಲ್ಲಿ ಜ.21ರಂದು ಬೆಳಗಾವಿಯಲ್ಲಿ ನಡೆಯಲಿರುವ ಗಾಂಧಿ ಭಾರತ ಸಮಾವೇಶ ಯಶಸ್ವಿಗೊಳಿಸುವ ಸಲುವಾಗಿ ಜವಾಬ್ದಾರಿ ಹಂಚಿಕೆ ವಿಚಾರವಾಗಿ ಚರ್ಚೆ ನಡೆಯಲಿದೆ. ಕೆಪಿಸಿಸಿಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಶಾಸಕರು, ಸಚಿವರು, ಸಂಸದರು ಸೇರಿ ಎಲ್ಲರೂ ಸಭೇಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸಮಾವೇಶ ಯಶಸ್ಸುಗೊಳಿಸಲು ಸೂಚನೆ ನೀಡುವ ಜತೆಗೆ ಪಕ್ಷದ ನಾಯಕತ್ವ, ಅಧಿಕಾರ ಹಂಚಿಕೆ ಹಾಗೂ ಸರ್ಕಾರದ ಬಗ್ಗೆ ಬಹಿರಂಗ ಹೇಳಿಕೆನೀಡದಂತೆ ತಾಕೀತು ಮಾಡುವ ಸಂಭವವಿದೆ.

ಏನೇನು ಸೂಚನೆ?:

ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಜಾತಿವಾರು ಸಭೆಗಳ ಮೂಲಕ ಬಣ ರಾಜಕೀಯ ನಡೆಸಬಾರದು. ಜತೆಗೆ ಸರ್ಕಾರದ ಕಾರ್ಯಕ್ರಮ, ಅನುದಾನ ಕೊರತೆ ಮತ್ತಿತರ ವಿಚಾರಗಳ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಸರ್ವಸದಸ್ಯರ ಸಭೆ:

ಸೋಮವಾರ ಬೆಳಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸರ್ವ ಸದಸ್ಯರ ಸಭೆ ಹಮ್ಮಿಕೊಳ್ಳಲಾಗಿದ್ದು, ಸುರ್ಜೆವಾಲ ಅವರೂ ಭಾಗವಹಿಸಲಿದ್ದಾರೆ. ಬಳಿಕ 3.30ಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಶಾಸಕಾಂಗ ಪಕ್ಷದ ಸಭೆ:

ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ 6 ಗಂಟೆಗೆ ಅರಮನೆ ಹೋಟೆಲ್ ಯಾಡಿಸನ್ ಬ್ಲೂ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸುರ್ಜೆವಾಲ ಅವರೂ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಬೆಳಗಾವಿ ಸಮಾವೇಶದ ಸಿದ್ಧತೆ ಬಗ್ಗೆ ಚರ್ಚಿಸಲಿದ್ದು, ಉಸ್ತುವಾರಿ ಶಾಸಕರು ತಮ್ಮ ನಿಯೋಜಿತ ಕ್ಷೇತ್ರಗಳಿಗೆ ಭೇಟಿ ನೀಡಿ ಜ.15, ಜ.16 ರಂದು ಪೂರ್ವಭಾವಿ ಸಭೆಗಳನ್ನು ಆಯೋಜಿಸಬೇಕು ಎಂದು ಸೂಚಿಸುವ ಸಾಧ್ಯತೆಯಿದೆ. ಇದೇ ವೇಳೆ ಸಚಿವರು ಶಾಸಕರನ್ನು ಕಡೆಗಣಿಸುತ್ತಿದ್ದಾರೆ. ಅನುದಾನವನ್ನೇ ಬಿಡುಗಡೆ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸಗಳಲ್ಲಿ ಹಿನ್ನಡೆಯಾಗಿದೆ ಎಂಬ ಬಗ್ಗೆ ಸದಸ್ಯರು ಪ್ರಸ್ತಾಪಿಸುವ ಸಂಭವವಿದೆ ಎಂದು ತಿಳಿದು ಬಂದಿದೆ.

ನಮ್ಮ ಯತ್ನ ನಮ್ಮದು ಫಲ ದೇವರಿಗೆ ಬಿಟ್ಟಿದ್ದು

ಶೃಂಗೇರಿ: ನಾವು ಧರ್ಮ ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಪಕ್ಷದಲ್ಲಿನ ಒಳಬೇಗುದಿಯೇ ನಡುವೆ ಶನಿವಾರ ಶೃಂಗೇರಿಯಲ್ಲಿ ಈ ಮಾರ್ಮಿಕ ನುಡಿಗಳನ್ನು ಆಡಿದ್ದಾರೆ. ಮಠದ ಕಾರ್ಯಕ್ರಮಕ್ಕೆ ಆಗ ಮಿಸಿದ ವೇಳೆ ಕಾರ್ಯಕರ್ತರು ಮುಂದಿನ ಸಿಎಂ ಶಿವಕುಮಾರ್ ಎಂದು ಘೋಷಣೆ ಕೂಗಿದರು. ಈ ವೇಳೆ ಡಿಕೆಶಿ, ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ಪಕ್ಷ ಹೇಳಿದಂತೆ ಕೇಳುವೆ. ನಮ್ಮ ಪ್ರಯತ್ನ ನಾವು ಮಾಡೋಣ. ಫಲಾ ಫಲ ದೇವರಿಗೆ ಬಿಡೋಣ ಎಂದರು.