ದಲಿತರನ್ನು ಯಾಮಾರಿಸಲು ಐಕ್ಯತಾ ಸಮಾವೇಶ

| Published : Feb 26 2024, 01:38 AM IST / Updated: Feb 26 2024, 01:28 PM IST

news

ಸಾರಾಂಶ

ಪರಿಶಿಷ್ಟರ ೧೪೨೮೦ ಕೋಟಿ ಅನುದಾನ ಕಬಳಿಸಿ ೧೫ ಕೋಟಿ ಖರ್ಚು ಮಾಡಿ ದಲಿತರನ್ನು ಯಾಮಾರಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಐಕ್ಯತಾ ಸಮಾವೇಶ ಮಾಡುತ್ತಿದೆ. ಕಾಂಗ್ರೆಸ್‌ ಬಗ್ಗೆ ದಲಿತರು ಎಚ್ಚರ

ಕನ್ನಡಪ್ರಭ ವಾರ್ತೆ ಕೋಲಾರ

ಚುನಾವಣೆಯಲ್ಲಿ ದೀನದಲಿತರ ಆರಾಧ್ಯದೈವ ಅಂಬೇಡ್ಕರ್‌ರನ್ನು ಸೋಲಿಸಿದವರಿಗೆ ಪದ್ಮಭೂಷಣ ಕೊಟ್ಟವರು, ವಿಧಿವಶರಾದಾಗ ಅಂತ್ಯಸಂಸ್ಕಾರಕ್ಕೂ ಜಾಗ ನೀಡದೇ ಅಮಾನವೀಯವಾಗಿ ನಡೆದುಕೊಂಡವರು, ಈಗ ಪರಿಶಿಷ್ಟರ ೧೪೨೮೦ ಕೋಟಿ ಅನುದಾನ ಕಬಳಿಸಿ ೧೫ ಕೋಟಿ ಖರ್ಚು ಮಾಡಿ ದಲಿತರನ್ನು ಯಾಮಾರಿಸಲು ಐಕ್ಯತಾ ಸಮಾವೇಶ ಮಾಡುತ್ತಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ಶಿಳ್ಳೆಂಗೆರೆ ಗ್ರಾಮದಲ್ಲಿ ಅಂಬೇಡ್ಕರ್ ಪ್ರಜ್ಞಾವಂತ ಯುವಕರ ಸಂಘದ ಆಶ್ರಯದಲ್ಲಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ವ್ಯಕ್ತಿಗೆ ಪದ್ಮಭೂಷಣ ನೀಡಲಾಗಿದೆ. ಅವರ ವಿಧಿವಶರಾದಾಗ ಶಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡಲಿಲ್ಲ, ಅಂತಹವರು ಈಗ ಓಟಿಗಾಗಿ ಅಂಬೇಡ್ಕರ್ ಪರ ಅಂತ ಮಾತನಾಡುತ್ತಿದ್ದಾರೆ. 

ಇವರ ಬಗ್ಗೆ ದಲಿತರ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.ಶೋಷಿತರಿಗೂ ಸಿಕ್ಕ ಸಮಾನತೆ: ಎಸ್ಪಿಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಪ್ರಪಂಚದಲ್ಲೇ ಅತಿ ಹೆಚ್ಚು ಪುತ್ಥಳಿಗಳು ಅಂಬೇಡ್ಕರ್ ಅವರದು, ರಾಜಕೀಯ, ಆರ್ಥಿಕ,ಸಾಮಾಜಿಕ ಸಮಾನತೆ ಅಂಬೇಡ್ಕರ್ ನೀಡಿದ ಭಿಕ್ಷೆ. ಗ್ರಾಮದಲ್ಲಿ ಜಾತಿ, ಮತ ಮರೆತು ಇಡೀ ಊರಿನ ಜನತೆ ಅಂಬೇಡ್ಕ ಅವರ ಸುಂದರ ಪುತ್ಥಳಿ ನಿರ್ಮಾಣ ಮಾಡಿರುವುದು ಆದರ್ಶವಾಗಿದೆ ಎಂದರು.

ಎಲ್ಲ ಜಾತಿಗಳ ನಡುವೆ ಏಕತೆ: ಸಾಹಿತಿ ಶ್ರೀನಿವಾಸ್ ಮಾತನಾಡಿ, ೬ ಸಾವಿರ ಜಾತಿಗಳು, ೩ ಸಾವಿರ ಭಾಷೆಗಳಿರುವ ಭಾರತದಲ್ಲಿ ಅಂಬೇಡ್ಕರ್ ನೀಡಿರುವ ಸಂವಿಧಾನ ಏಕತೆಯನ್ನು ಮೂಡಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಪ್ರಜ್ಞಾವಂತ ಯುವಕರ ಸಂಘದ ಅಧ್ಯಕ್ಷ ಅರುಣ್‌ಕುಮಾರ್ ವಹಿಸಿದ್ದು, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಗ್ರಾ.ಪ೦ ಅಧ್ಯಕ್ಷ ಆರ್.ವೆಂಕಟೇಶಪ್ಪ, ಸದಸ್ಯರಾದ ವೇಣುಗೋಪಾಲ್, ಲಕ್ಷ್ಮಮ್ಮನಾರಾಯಣಪ್ಪ, ಸುರೇಶ್, ಮಾಜಿ ಸದಸ್ಯೆ ದೀಪಾ ಬಾಲಕೃಷ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.