ಬೆಂಗಳೂರು : ಬೌದ್ಧ ಅಭಿವೃದ್ಧಿ ನಿಗಮದ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ 500 ಕೋಟಿ ರು. ಅನುದಾನ ನೀಡಬೇಕು ಎಂದು ಆರ್.ಪಿ.ಐ ಹಾಗೂ ನಾಗಸೇನಾ ವಿದ್ಯಾಲಯದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಸರ್ಕಾರಕ್ಕೆ ಮನವಿ ಮಾಡಿದರು.
ಸದಾಶಿವನಗರದ ನಾಗಸೇನಾ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ 888 ಅಡಿ ಎತ್ತರದ ಭಗವಾನ್ ಬುದ್ಧರ ಮೂರ್ತಿ ನಿರ್ಮಾಣ ಯೋಜನೆ ಮತ್ತು ಪಂಚಶೀಲ ಪಾದಯಾತ್ರೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು. ನಾಗಸೇನಾ ಬುದ್ಧ ವಿಹಾರದಲ್ಲಿ ನಿಗಮದ ಕಚೇರಿ ಪ್ರಾರಂಭಿಸಬೇಕು. ನಿಗಮದ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಸರ್ಕಾರ 500 ಕೋಟಿ ರು. ಅನುದಾನ ನೀಡಬೇಕು. ಬುದ್ಧ ಜಯಂತಿಗೆ ಸರ್ಕಾರಿ ರಜೆ ಘೋಷಿಸಬೇಕು. ಮೇ 1 ರಂದು ನಾಗಸೇನಾ ಬುದ್ಧ ವಿಹಾರದಲ್ಲಿ ಬುದ್ಧ ಜಯಂತಿ ಆಚರಣೆಗೆ ಸರ್ಕಾರ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು .
ಬುದ್ಧ ಜಯಂತಿಯ ದಿನವಾದ ಮೇ 1 ಪಾದಯಾತ್ರೆ
ಬುದ್ಧ ಜಯಂತಿಯ ದಿನವಾದ ಮೇ 1ರಂದು ನಾಗಸೇನಾ ಬುದ್ಧ ವಿಹಾರದಿಂದ ಲೋಕಕಲ್ಯಾಣಕ್ಕಾಗಿ ಪಂಚಶೀಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕನಕಪುರ, ಮಾಗಡಿ, ಕೊಳ್ಳೇಗಾಲ, ನಂಜನಗೂಡು ಮಾರ್ಗವಾಗಿ ಈ ಪಾದಯಾತ್ರೆ ತೆರಳಲಿದ್ದು ಅಕ್ಟೋಬರ್ಗೆ 1500 ಕಿ.ಮೀ. ಪಾದಯಾತ್ರೆ ಪೂರ್ಣಗೊಳಿಸಿ ಚಾಮರಾಜನಗರ ತಲುಪಲಿದೆ ಎಂದು ಮಾಹಿತಿ ನೀಡಿದರು.
888 ಅಡಿ ಬುದ್ಧನ ಪ್ರತಿಮೆ ಸ್ಥಾಪನೆ
ಬೋಧಿದತ್ತ ಬಂತೇಜಿ ಮಾತನಾಡಿ, ಚಾಮರಾಜನಗರದ ಉತ್ತವಳ್ಳಿಯಲ್ಲಿ 888 ಅಡಿಯ, ವಿಶ್ವದಲ್ಲೇ ಎತ್ತರದ ಬುದ್ಧನ ಪ್ರತಿಮೆ ಸ್ಥಾಪಿಸಲಾಗುವುದು. ಗುಜರಾತ್ನಲ್ಲಿ ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿದ ಸಂಸ್ಥೆಯೇ ಬುದ್ಧನ ಪ್ರತಿಮೆಯನ್ನು ನಿರ್ಮಾಣ ಮಾಡಲಿದೆ. 19 ದೇಶಗಳ ಬೌದ್ಧ ಸಮಾಜ ಸಹಕಾರ ನೀಡಿವೆ. 100 ಎಕರೆಯ ವಿಶಾಲವಾದ ಪ್ರದೇಶದ ನಡುವೆ ಪ್ರತಿಮೆ ಸ್ಥಾಪನೆಯಾಗಲಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ, ಮುಖಂಡ ಮಾವಳ್ಳಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
