ಸಾರಾಂಶ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಿ.ವೈ. ವಿಜಯೇಂದ್ರ ಕಡತಗಳಿಗೆ ನಕಲಿ ಸಹಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು.
ಮೈಸೂರು : ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಿ.ವೈ. ವಿಜಯೇಂದ್ರ ಕಡತಗಳಿಗೆ ನಕಲಿ ಸಹಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸಬೇಕು ಎಂದು ರಾಜ್ಯ ಸರ್ಕಾರವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದರು.
ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಆಕ್ಟಿಂಗ್ ಸಿಎಂನಂತೆ ವರ್ತಿಸಿದರು. ಸಾವಿರಾರು ಕಡತಗಳಿಗೆ ಯಡಿಯೂರಪ್ಪ ಅವರ ನಕಲಿ ಸಹಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕಿದೆ. ಎಫ್ಎಸ್ಎಲ್ ಮೂಲಕ ತನಿಖೆ ಮಾಡಲು ನಾನು ಸಿಎಂ ಆಗ್ರಹಿಸುತ್ತೇನೆ ಎಂದರು.
ಬಿಜೆಪಿ- ಜೆಡಿಎಸ್ ಪಾದಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯುವ ಯತ್ನ. ಕಾಂಗ್ರೆಸ್ ಪಕ್ಷ ವರ್ಚಸ್ಸು ಕುಗ್ಗಿಸುವ ಯತ್ನ ಬಹಳ ಕಾಲದಿಂದಲೂ ನಡೆದಿದೆ. ಆದರೆ, ಸಾಧ್ಯವಾಗಲಿಲ್ಲ. ರಾಷ್ಟ್ರಭಕ್ತಿ ಹೆಸರಲ್ಲಿ ನಮಗೆ ಪಾಠ ಹೇಳಲು ಬರುತ್ತಿದ್ದಾರೆ. ಇವರು ಪ್ರಜಾಪ್ರಭುತ್ವ ವಿರೋಧಿಗಳು. ಅಪಪ್ರಚಾರ ಮಾಡುತ್ತಿದ್ದಾರೆ. ಗಾಂಧಿ ಕೊಂದವ ಆರ್.ಎಸ್.ಎಸ್ ಪ್ರೇರಿತ ವ್ಯಕ್ತಿ ಎಂದು ಅವರು ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ಆಪರೇಷನ್ ಕಮಲದ ರೂವಾರಿಗಳು. ಈಗ ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಯಡಿಯೂರಪ್ಪ, ಕುಮಾರಸ್ವಾಮಿ ವರ್ತಿಸುತ್ತಿದ್ದಾರೆ. ಈಗ ಮರಿ ಯಡಿಯೂರಪ್ಪ(ವಿಜಯೇಂದ್ರ) ಪಾದಯಾತ್ರೆ ಮಾಡುತ್ತಿದ್ದಾರೆ. ವಾಲ್ಮೀಕಿ ಹಗರಣ, ಎಂಡಿಎ ಹಗರಣ ಇದೆ ಎಂದು ಹಗರಣದ ಪಿತಾಮಹ ವಿಜಯೇಂದ್ರ ಹೇಳುತ್ತಿದ್ದಾರೆ. ಅವರು ಮಾಡಿರುವ ಹಗರಣಕ್ಕೆ ಲೆಕ್ಕವಿಲ್ಲ ಎಂದು ಅವರು ಆರೋಪಿಸಿದರು.