ಸಂಘಟನೆ ಸಭೇಲಿ ವಿಜಯೇಂದ್ರ ಶಕ್ತಿ ಪ್ರದರ್ಶನ: ನಾಯಕತ್ವ ಪ್ರಶ್ನಿಸಿದ್ದ ಭಿನ್ನಮತೀಯರಿಗೆ ಸಂದೇಶ

| Published : Jan 11 2025, 08:11 AM IST

BY vijayendraa

ಸಾರಾಂಶ

ಪಕ್ಷದ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳ ಸಭೆ ನಡೆ ಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪರೋಕ್ಷವಾಗಿ ಪಕ್ಷದ ಭಿನ್ನಮತೀಯರಿಗೆ ಮತ್ತು ವರಿಷ್ಠರಿಗೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು : ಪಕ್ಷದ ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳ ಸಭೆ ನಡೆ ಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪರೋಕ್ಷವಾಗಿ ಪಕ್ಷದ ಭಿನ್ನಮತೀಯರಿಗೆ ಮತ್ತು ವರಿಷ್ಠರಿಗೆ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ನಗರದ ಹೋಟೆಲ್‌ವೊಂದರಲ್ಲಿ ಕರೆದ ಸಭೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಾಜಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಪಕ್ಷದ ಸಂಘಟನೆ ಬಲಪಡಿಸುವ ಹಾಗೂ ಮುಂದೆ ಮುಂದೆ ಬರಬಹುದಾದ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಗಳನ್ನು ಎದುರಿಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ ಎಂಬಂತೆ ಬಿಂಬಿತವಾದರೂ ಪರೋಕ್ಷವಾಗಿ ಇದು ಶಕ್ತಿ ಪ್ರದರ್ಶನಕ್ಕೂ ವೇದಿಕೆಯಾಗಿ ಪರಿವರ್ತನೆಗೊಂಡಿತು. ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊರತುಪಡಿಸಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಭಾಗವಹಿಸಿದರು.

ಜೊತೆಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಸುಮಾರು 2.5 ಗಂಟೆ ನಡೆದ ಸಭೆಯಲ್ಲಿ ಪ್ರಮುಖ ನಾಯಕರು ಭಾಷಣ ಮಾಡಿದ್ದೇ ಹೆಚ್ಚು. ಬಳಿಕ ಕೆಲ ಮಾಜಿ ಶಾಸಕರು ಮಾತನಾಡಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪಕ್ಷದಲ್ಲಿನ ಭಿನ್ನಮತ ಚಟುವಟಿಕೆ ಕುರಿತು ಕಳವಳ ವ್ಯಕ್ತಪಡಿಸಿದ ಹಲವರು ಹೈಕಮಾಂಡ್ ಇದಕ್ಕೆ ಕಡಿವಾಣ ಹಾಕಬೇಕು, ಭಿನ್ನಮತೀಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪಕ್ಷದಲ್ಲಿನ ಭಿನ್ನಮತ ಚಟುವಟಿಕೆಗಳಿಗೆ ಕಡಿವಾಣ ಹಾಕ ಬೇಕು. ಶಾಸಕ ಯತ್ನಾಳ ನೇತೃತ್ವದಲ್ಲಿ ಹಲವರು ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ. ಇಂಥವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳದಿದ್ದರೆ ಪಕ್ಷ ಸಂಘಟನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.

ಮಾಜಿ ಶಾಸಕರ ಅಭಿಪ್ರಾಯಗಳಿಗೆ ಸ್ಪಂದಿಸಿದ ಯಡಿಯೂರಪ್ಪ, ಪಕ್ಷದಲ್ಲಿನ ಕೆಲವರ ಚಟುವಟಿಕೆಗಳ ಬಗ್ಗೆ ವರಿಷ್ಠರು ಗಮನಿಸುತ್ತಿದ್ದಾರೆ. ನಾವೆಲ್ಲರೂ ಮುಂಬರುವ ಸ್ಥಳೀಯಸಂಸ್ಥೆಗಳ ಚುನಾವಣೆಗೆ ಸಜ್ಜಾಗೋಣ ಎಂದು ಕರೆ ನೀಡಿದರು.

ಇದು ಬಲಪ್ರದರ್ಶನ ಅಲ್ಲ- ವಿಜಯೇಂದ್ರ:

ಈ ಸಭೆ ಯಾವುದೇ ರೀತಿಯ ಬಲ ಪ್ರದರ್ಶನಕ್ಕೆ ಅಥವಾ ಯಾರನ್ನೋ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂಬ ಉದ್ದೇಶದಿಂದ ನಡೆಸಿಲ್ಲ ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.