ಸಾರಾಂಶ
ಚಿಕ್ಕಬಳ್ಳಾಪುರ : ವಕ್ಫ್ ಆಸ್ತಿ ವಿವಾದಿತ ಸ್ಥಳವಾದ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರಕ್ಕೆ ಭಾನುವಾರ ಮಾಜಿ ಸಂಸದ ಎಸ್ ಮುನಿಸ್ವಾಮಿ, ಬಿಜೆಪಿ ಮುಖಂಡರಾದ ವೇಣುಗೋಪಾಲ್, ಮುನಿರಾಜು ಸೇರಿದಂತೆ ಬಿಜೆಪಿ ಕಾರ್ಯಕರ್ತರು, ರೈತರು ಚಿಂತಮಣಿ ನಗರದ ಕನ್ನಂಪಲ್ಲಿ ಬಳಿ ಜಮಾವಣೆಗೊಂಡು ರೈತರೊಂದಿಗೆ ಸಭೆ ನಡೆಸಿದರು.
ನಂತರ ಮಾಜಿ ಸಂಸದ ಮುನಿಸ್ವಾಮಿ ಹಾಗೂ ತಂಡ ತಿಮ್ಮಸಂದ್ರದ ವಕ್ಫ್ ಆಸ್ತಿ ವಿವಾದಿತಾ ಸ್ಥಳಕ್ಕೆ ಭೇಟಿ ನೀಡಲು ಮುಂದಾದಾಗ ಪೊಲೀಸರು ತಡೆಯಲು ಮುಂದಾದರು ಆ ವೇಳೆ ಪೊಲೀಸರ ಹಾಗೂ ಮಾಜಿ ಸಂಸದ ಮುನಿಸ್ವಾಮಿ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.ವಿವಾದಿತ ಸ್ಥಳ ಪರಿಶೀಲನೆ
ನಂತರ ವಿವಾದಿತ ಸ್ಥಳಕ್ಕೆ 10 ಜನರನ್ನು ಮಾತ್ರ ಹೋಗಲು ಪೊಲೀಸರು ಅವಕಾಶ ಕಲ್ಪಿಸಿ ಕೊಟ್ಟ ನಂತರ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಕಾರ್ಯಕರ್ತರು ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇನ್ನು ವಿವಾದಿತ ಸ್ಥಳಕ್ಕೆ ಬಂದಿದ್ದ ಉಪವಿಭಾಗಾಧಿಕಾರಿ ಅಶ್ವಿನ್, ತಹಸೀಲ್ದಾರ್ ಸುದರ್ಶನ್ ಯಾದವ್ ರವರಿಗೆ, ಮಾಜಿ ಸಂಸದ ಮುನಿಸ್ವಾಮಿ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಏಜೆಂಟುಗಳಾಗಿ ಕೆಲಸ ಮಾಡಿ ರಾತೋರಾತ್ರಿ ರೈತರ ಜಮೀನುಗಳು ವಕ್ಫ್ ಆಸ್ತಿ ಎಂದು ನಮೂದನೆ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.ವಿವಾದಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ರಕ್ಷಣಾಧಿಕಾರಿ ಕುಶಾಲ್ ಚೌಕ್ಸೆ,ಕೋಲಾರ ಎಸ್ಪಿ ನಿಖಿಲ್,ಎಎಸ್ಪಿ ಆರ್.ಐ.ಕಾಸಿಂ,ಡಿವೈಎಸ್ಪಿ ಮುರಳಿಧರ್,ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಎರ್ಪಡಿಸಲಾಗಿತ್ತು.