ಸಾರಾಂಶ
ಮುಡಾ ಕೇಸಲ್ಲಿ ರಾಜಾರೋಷವಾಗಿ ಮೈಸೂರು ಚಲೋ ಮಾಡಿದ್ದ ರಾಜ್ಯ ಬಿಜೆಪಿಯವರ ಯಾವ ಬಣ ಈಗ ಮಂಡ್ಯ ಚಲೋ ಮಾಡುತ್ತದೆ - ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಅಕ್ರಮ ಡಿನೋಟಿಫಿಕೇಷನ್ ಹಗರಣದ ವಿಚಾರಣೆಗೆ ತಡೆ ಕೋರಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅರ್ಜಿ ಸುಪ್ರೀಂಕೋರ್ಟ್ ತಳ್ಳಿ ಹಾಕಿರುವುದರಿಂದ ಈಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಭೂ ಹಗರಣಗಳಿಗೆ ಹೆಸರುವಾಸಿಯಾಗಿದ್ದಕ್ಕಾಗಿಯೇ ‘ಮಣ್ಣಿನ ಮಕ್ಕಳು’ ಎಂಬ ಬಿರುದು ಬಂದಿದೆಯೇ ಎಂದೂ ಅವರು ಟಾಂಗ್ ನೀಡಿ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ಕೇಸಲ್ಲಿ ರಾಜಾರೋಷವಾಗಿ ಮೈಸೂರು ಚಲೋ ಮಾಡಿದ್ದ ರಾಜ್ಯ ಬಿಜೆಪಿಯವರ ಯಾವ ಬಣ ಈಗ ಮಂಡ್ಯ ಚಲೋ ಮಾಡುತ್ತದೆ ವ್ಯಂಗ್ಯವಾಗಿ ಹೇಳಿದರು.
ಭೂ ಕಬಳಿಕೆಗೆ ಮುಖ್ಯಮಂತ್ರಿ ಕಚೇರಿಯನ್ನು ದುರುಪಯೋಗ ಮಾಡಿಕೊಂಡಿದ್ದರ ಬಗ್ಗೆ ಈಗ ಎಚ್.ಡಿ.ಕುಮಾರಸ್ವಾಮಿ ವಿಚಾರಣೆ ಎದುರಿಸಲೇಬೇಕಿದೆ. ಬಿಡಿಎಯ ತೀವ್ರ ಆಕ್ಷೇಪಣೆ ನಡುವೆಯೂ ಡಿನೋಟಿಫಿಕೇಶನ್ ಮಾಡಿದ್ದ ಕುಮಾರಸ್ವಾಮಿಯವರ ಹಿತಾಸಕ್ತಿ ಏನಿತ್ತು? ಇದರ ಬಗ್ಗೆ ವಿಚಾರಣೆಯಲ್ಲಿ ಹಿತಾಸಕ್ತಿಯ ಸಂಗತಿಗಳು ಅನಾವರಣವಾಗಲಿದೆ ಎಂದು ಹೇಳಿದರು.