ಸಾರಾಂಶ
ನವದೆಹಲಿ : ಕೇಂದ್ರದಲ್ಲಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ಬಡವರಿಗೆ ನೀಡುತ್ತಿರುವ ಉಚಿತ ಪಡಿತರ ಪ್ರಮಾಣವನ್ನು ದ್ವಿಗುಣಗೊಳಿಸುತ್ತೇವೆ. ಅರ್ಥಾತ್ 10 ಕೇಜಿ ಉಚಿತ ಪಡಿತರ ನೀಡುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಘೋಷಿಸಿದ್ದಾರೆ.
ಸಮಾಜವಾದಿ ಪಾರ್ಟಿ ನೇತಾರ ಅಖಿಲೇಶ್ ಯಾದವ್ ತಜೆಗೂಡಿ ಬುಧವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ‘ಕಾಂಗ್ರೆಸ್ ಆಹಾರ ಭದ್ರತಾ ಕಾಯ್ದೆಯನ್ನು ತಂದರೂ, ನೀವು (ಬಿಜೆಪಿ) ಏನೂ ಮಾಡಲಿಲ್ಲ. ನೀವು 5 ಕೆಜಿ ನೀಡುತ್ತಿದ್ದೀರಿ, ಇಂಡಿಯಾ ಕೂಟದ ಸರ್ಕಾರ ರಚನೆಯಾದರೆ, ನಾವು ಬಡವರಿಗೆ 10 ಕೆಜಿ ಉಚಿತ ಪಡಿತರ ನೀಡುತ್ತೇವೆ’ ಎಂದು ಹೇಳಿದರು.ತೆಲಂಗಾಣ ಮತ್ತು ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನಾವು ಈಗಾಗಲೇ ಇದನ್ನು ಮಾಡಿದ್ದೇವೆ. ಹೀಗಾಗಿ ನಾನು ಇದನ್ನು ಗ್ಯಾರಂಟಿಯಿಂದ ಹೇಳುತ್ತಿದ್ದೇನೆ ಎಂದು ಅವರು ಹೇಳಿದರು.
ಬಿಜೆಪಿ ತನ್ನ ಇತ್ತೀಚಿನ ಪ್ರಣಾಳಿಕೆಯಲ್ಲಿ 2029ರವರೆಗೆ 5 ಕೇಜಿ ಉಚಿತ ಪಡಿತರ ನೀಡುವ ಯೋಜನೆ ಮುಂದುವರಿಸುವುದಾಗಿ ಘೋಷಿಸಿತ್ತು.