ಸಾರಾಂಶ
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಲ್ಲ ಸಂತ್ರಸ್ತೆಯರು ಧೈರ್ಯವಾಗಿ ಹೊರಬಂದು ತಮಗಾದ ಅನ್ಯಾಯದ ವಿರುದ್ಧ ನಿಲ್ಲಬೇಕು. ಅವರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಅವರಿಗೆ ದನಿಯಾಗಿ ಇಡೀ ಸಮಾಜ ಭಾಗಿಯಾಗಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಮನವಿ ಮಾಡಿದೆ.
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಅತ್ಯಂತ ಹೇಯ ಕೃತ್ಯ. ಹಿಟ್ಲರ್ ಸಂಸ್ಕೃತಿಯಾಗಿದೆ. ಇದರ ವಿರುದ್ಧ ಎಲ್ಲ ಸಂತ್ರಸ್ತೆಯರು ಧೈರ್ಯವಾಗಿ ಹೊರಬಂದು ತಮಗಾದ ಅನ್ಯಾಯದ ವಿರುದ್ಧ ನಿಲ್ಲಬೇಕು. ಅವರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಅವರಿಗೆ ದನಿಯಾಗಿ ಇಡೀ ಸಮಾಜ ಭಾಗಿಯಾಗಬೇಕು ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಮನವಿ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಕವಿತಾ ರೆಡ್ಡಿ, ಮಂಜುಳಾ ನಾಯ್ಡು, ಸ್ವಾತಿ ಚಂದ್ರಶೇಖರ್ ಅವರು, ಈ ಹೀನ ಕೃತ್ಯ ಹೊರಬರುತ್ತಿದ್ದಂತೆ ಜರ್ಮನಿಗೆ ಹಾರಿರುವ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕರೆತರಲು ರಾಜ್ಯ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಇದಕ್ಕೆ ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಕವಿತಾ ರೆಡ್ಡಿ ಮಾತನಾಡಿ, ನೊಂದ ಮಹಿಳೆರನ್ನು ಹೆದರಿಸಿ ಬೆದರಿಸಿ ದೂರು ಕೊಡದಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದು ರಾಜಕೀಯ ವಿಚಾರ ಅಲ್ಲ. ದೇಶದ, ಮಹಿಳೆಯರ ಮರ್ಯಾದೆ ವಿಚಾರ. ಬಿಜೆಪಿ, ಜೆಡಿಎಸ್ನ ನಾಯಕರೂ ಮಾತನಾಡಬೇಕು. ಆದರೆ, ಮಾತನಾಡುತ್ತಿಲ್ಲ. ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು ಎನಿಸುತ್ತದೆ. ಈ ಕೃತ್ಯದ ಬಗ್ಗೆ ಬಿಜೆಪಿಯವರು ಸಹ ಉತ್ತರ ನೀಡಬೇಕು ಎಂದರು.
ಮಂಜುಳಾ ನಾಯ್ಡು ಮಾತನಾಡಿ, ಶೋಷಣೆಗೆ ಒಳಗಾದ ಮಹಿಳೆಯರು ಹೊರಬಂದು ಪ್ರಜ್ವಲ್ ರೇವಣ್ಣ ವಿರುದ್ಧ ನಿಲ್ಲಬೇಕಾಗಿದೆ. ಎಸ್ಐಟಿ ಮತ್ತು ಕೋರ್ಟ್ ಮಾನಿಟರಿಂಗ್ ಎಲ್ಲವು ಒಟ್ಟಾಗಿ ನಡೆಯಬೇಕಿದೆ ಎಂದು ಆಗ್ರಹಿಸಿದರು.
‘ಬಿಜೆಪಿಗರು ತುಟಿ ಬಿಚ್ಚಿ ಮಾತಾಡಲಿ’
ಭವ್ಯ ನರಸಿಂಹಮೂರ್ತಿ, ನಾವು ಹೆಣ್ಣುಮಕ್ಕಳ ಪರವಾಗಿ ಮಾತನಾಡುತ್ತೇವೆ. ಬಿಜೆಪಿಯಂತೆ ಕೇವಲ ಪಕ್ಷಪಾತಿಗಳಾಗಿ ಮಾತನಾಡುವುದಿಲ್ಲ. ಹತ್ರಾಸ್, ಕತುವ ಘಟನೆ ನಡೆದಾಗ ಅತ್ಯಾಚಾರಿಗಳ ಪರವಾಗಿ ಬಿಜೆಪಿಯ ಕೆಲ ಶಾಸಕರು ಮೆರವಣಿಗೆ ನಡೆಸಿದರು. ಕುಸ್ತಿಪಟುಗಳ ಮೇಲೆ ನಡೆದ ಕೃತ್ಯಕ್ಕೆ ಬಿಜೆಪಿಯವರೇ ಕುಮ್ಮಕ್ಕು ನೀಡಿದರು. ಪ್ರಜ್ವಲ್ ರೇವಣ್ಣ ಪ್ರಕರಣಲ್ಲಿ ಈಗಲಾದರೂ ಬಿಜೆಪಿ ನಾಯಕರು ತುಟಿ ಬಿಚ್ಚಿ ಮಾತನಾಡಲಿ ಎಂದು ಒತ್ತಾಯಿಸಿದರು.