‘ಸು’ಎಂಬ ಅನಂತ ಯಾತ್ರಿಕ: ಕಾದಂಬರಿ ಕುರಿತ ಅನಿಸಿಕೆಗಳ ಸಂಕಲನ

| Published : Jul 22 2025, 01:16 AM IST

‘ಸು’ಎಂಬ ಅನಂತ ಯಾತ್ರಿಕ: ಕಾದಂಬರಿ ಕುರಿತ ಅನಿಸಿಕೆಗಳ ಸಂಕಲನ
Share this Article
  • FB
  • TW
  • Linkdin
  • Email

ಸಾರಾಂಶ

ಜೆಎಸ್ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಪ್ರಸನ್ನ ಸಂತೇಕಡೂರು ಮೂಲತಃ ವಿಜ್ಞಾನಿ. ಅಮೆರಿಕೆಯಲ್ಲಿ ಕೂಡ ಹತ್ತು ವರ್ಷಗಳು ಕೆಲಸ ಮಾಡಿ ನಂತರ ಸ್ವದೇಶಕ್ಕೆ ವಾಪಸ್‌ ಆದವರು. ಕ್ಯಾನ್ಸರ್‌ ಕುರಿತ ‘ಸು’ ಕಾದಂಬರಿಯನ್ನು ಐದು ವರ್ಷಗಳ ಹಿಂದೆ ಬರೆದಿದ್ದು, ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

‘ಸು’ ಎಂಬ ಅನಂತ ಯಾತ್ರಿಕ ಕೃತಿಯು ಡಾ.ಪ್ರಸನ್ನ ಸಂತೇಕಡೂರು ಅವರ ‘ಸು’ ಕಾದಂಬರಿ ಕುರಿತ ಓದುಗರ ಅನಿಸಿಕೆಗಳ ಸಂಕಲನವಾಗಿದೆ. 74 ಮಂದಿ ಇಲ್ಲಿ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಮೂರು ಇಂಗ್ಲಿಷ್‌ನಲ್ಲಿವೆ.

ಜೆಎಸ್ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಪ್ರಸನ್ನ ಸಂತೇಕಡೂರು ಮೂಲತಃ ವಿಜ್ಞಾನಿ. ಅಮೆರಿಕೆಯಲ್ಲಿ ಕೂಡ ಹತ್ತು ವರ್ಷಗಳು ಕೆಲಸ ಮಾಡಿ ನಂತರ ಸ್ವದೇಶಕ್ಕೆ ವಾಪಸ್‌ ಆದವರು. ಕ್ಯಾನ್ಸರ್‌ ಕುರಿತ ‘ಸು’ ಕಾದಂಬರಿಯನ್ನು ಐದು ವರ್ಷಗಳ ಹಿಂದೆ ಬರೆದಿದ್ದು, ಇದು ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಮಲೆಯಾಳಂಗೂ ಕೂಡ ಭಾಷಾಂತರವಾಗಿದೆ. ಇಂಗ್ಲಿಷ್‌ಗೂ ಕೂಡ ಅನುವಾದವಾಗುತ್ತಿದೆ.

ವಿಜ್ಞಾನದೊಂದಿಗೆ ಆಧ್ಯಾತ್ಮವೂ ಮಿಳಿತವಾಗುವ ಹೊತ್ತು, ನಿಗೂಢ ರಹಸ್ಯಗಳ ಕಥೆ, ವಿಜ್ಞಾನದ ವಿಸ್ಮಯಕಾರಿ, ದೇಹಭಾವದ ಹಂಗಿಲ್ಲದ ಕುತುಹೂಲದ ಪಯಣ, ಹೊಸ ಅನುಭವ ಲೋಕದ ಸೃಷ್ಟಿ, ವಾಸ್ತವ ಘಟನೆಗಳ ನೀಳ್ಗತೆ, ವಸ್ತುನಿಷ್ಠತೆಯ ವಿಶಿಷ್ಟ ಕಾದಂಬರಿ, ಕ್ಯಾನ್ಸರ್‌ ವಿರುದ್ಧ ಹೋರಾಟದ ಅಪೂರ್ವ ಕಥನ, ಅದ್ಭುತವಾದ ಕಥಾ ವಸ್ತು, ವಿದೇಶ ಪ್ರವಾಸ ಮಾಡಿಸಿದ ಕಾದಂಬರಿ, ಬದುಕಿನ ಫಿಲಾಸಫಿಯಾಗಿ ಸು, ಮನದಲ್ಲೇ ಕಾಡುವ, ಮನಮುಟ್ಟುವ, ವಿಚಾರಭರಿತ, ವೈಜ್ಞಾನಿಕ ಮನೋಧೋರಣೆಯ ಕುತೂಹಲಕಾರಿ ಕಾದಂಬರಿ, ಹೊಸತನ, ವೈಜ್ಞಾನಿಕ ನೋಟಗಳ ಆಗರ, ಹೃದಯಸ್ಪರ್ಶಿ ಚಿತ್ರಣ, ಮನುಷ್ಯ ಸಂಬಂಧಗಳ ಹುಡುಕಾಟ, ಜೀವನೋತ್ಕರ್ಷಗಳ ಮಿಶ್ರಣ ಇವೇ ಮೊದಲಾದ ವಿಶೇಷಣೆಗಳೊಂದಿಗೆ ಪ್ರತಿಯೊಬ್ಬರೂ ಕೂಡ ತಮ್ಮದೇ ಆದ ರೀತಿಯಲ್ಲಿ ಕಾದಂಬರಿಯನ್ನು ವಿಮರ್ಶಿಸಿದ್ದಾರೆ. ಪ್ರೊ.ಸಂಪಿಗೆ ತೋಂಟದಾರ್ಯ, ಕೆ. ವೆಂಕಟರಾಜು, ಪ್ರೊ.ಎಚ್.ಎಸ್. ಈಶ್ವರ್‌, ಸಂಧ್ಯಾ ಹೊನಗುಂಟಿಕರ್‌, ಡಾ.ಆನಂದ್‌ ಗೋಪಾಲ್‌ ಮೊದಲಾದವರ ಅಭಿಪ್ರಾಯಗಳಿವೆ.

ಕನ್ನಡ ಸಾಹಿತ್ಯ ಲೋಕದಲ್ಲಿ ವಿಭಿನ್ನವೆನಿಸಿದ ಈ ವೈಜ್ಞಾನಿಕ ಕಿರು ಕಾದಂಬರಿ ಸಾಕಷ್ಟು ಸದ್ದು ಮಾಡಿದೆ. ಇದೇ ಕಾರಣಕ್ಕಾಗಿ ಮಲೆಯಾಳಂಗೆ ಅನುವಾದವಾಗಿದೆ. ಇದೀಗ ಇಂಗ್ಲಿಷ್‌ಗೂ ಅನುವಾದವಾಗುತ್ತಿದೆ. ಈ ಕಾದಂಬರಿ ಕುರಿತು ಕಳೆದೈದು ವರ್ಷಗಳಲ್ಲಿ ಬಂದಿರುವ ಅನಿಸಿಕೆ, ವಿಮರ್ಶೆ, ಟಿಪ್ಪಣಿಗಳನ್ನು ಒಂದೆಡೆ ಸೇರಿಸಿರುವುದು ಉತ್ತಮ ಕಾರ್ಯ, ಜೆಎಸ್ಎಸ್‌ ಮಹಿಳಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಮಹೇಂದ್ರಮೂರ್ತಿ ದೇವನೂರು ಈ ಅನಿಸಿಕಗಳನ್ನು ಸಂಪಾದಿಸಿದ್ದಾರೆ.

ಸಂವಹನ ಪ್ರಕಾಶನ ಪ್ರಕಟಿಸಿದೆ. ಆಸಕ್ತರು ಲೇಖಕ ಡಾ.ಪ್ರಸನ್ನ ಸಂತೇಕಡೂರು, ಮೊ.91086 55013 ಅಥವಾ ಪ್ರಕಾಶಕ ಡಿ.ಎನ್‌. ಲೋಕಪ್ಪ, ಮೊ.99026 39593 ಸಂಪರ್ಕಿಸಬಹುದು.