ಸಾರಾಂಶ
ಗಿರೀಶ್ ಗರಗ
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮಾರ್ಗದಲ್ಲಿನ ಪಟ್ಟಣಗಳಿಗೆ ತೆರಳಲು ಉದ್ದದ ಮಾರ್ಗ ಕ್ರಮಿಸುವ ಸಮಸ್ಯೆಗೆ ಪರಿಹಾರ ನೀಡಲು ಹೆದ್ದಾರಿಯುದ್ದಕ್ಕೂ ಪೂರ್ಣ ಪ್ರಮಾಣದಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮುಂದಾಗಿದೆ.
ಬೆಂಗಳೂರು-ಮೈಸೂರು ನಡುವಿನ ಸಂಚಾರ ಸಮಯ ಕಡಿಮೆ ಮಾಡುವುದು ಹಾಗೂ ಅಡೆತಡೆಯಿಲ್ಲ ಸಂಚಾರಕ್ಕಾಗಿ 119 ಕಿ.ಮೀ ಉದ್ದದ ಹೆದ್ದಾರಿ ನಿರ್ಮಿಸಲಾಗಿದೆ. ಆದರೆ, ಹೆದ್ದಾರಿ ಮಾರ್ಗದಲ್ಲಿ ರೈಲ್ವೆ ಮಾರ್ಗ ಸೇರಿ ಇನ್ನಿತರ ಅಡೆತಡೆಗಳಿರುವುದರಿಂದಾಗಿ ಪೂರ್ಣ ಪ್ರಮಾಣದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲಾಗಿಲ್ಲ. ಅಲ್ಲದೆ, 119 ಕಿ.ಮೀ ಹೆದ್ದಾರಿಯು ಸರ್ವೀಸ್ ರಸ್ತೆಯಿಂದ ಹೆದ್ದಾರಿಗೆ ಪ್ರವೇಶ ನಿಯಂತ್ರಿತ (ಆ್ಯಕ್ಸೆಸ್ ಕಂಟ್ರೋಲ್) ಹೆದ್ದಾರಿಯಾಗಿದೆ. ಈ ಕಾರಣದಿಂದಾಗಿ ಹೆದ್ದಾರಿ ಸಾಗುವ ಉದ್ದಕ್ಕೂ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶಿಸಲು ಕೆಲವೆಡೆ ಮಾತ್ರ ಅವಕಾಶ ನೀಡಲಾಗಿದೆ.ಇದು ಹೆದ್ದಾರಿ ಸಾಗುವ ಮಾರ್ಗದಲ್ಲಿನ ಪಟ್ಟಣಗಳಿಂದ ಬರುವ ವಾಹನಗಳು ಹೆದ್ದಾರಿ ಪ್ರವೇಶಿಸಲು ಹಾಗೂ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಪಟ್ಟಣಗಳಿಗೆ ತೆರಳಲು ದೂರದ ಮಾರ್ಗ ಕ್ರಮಿಸಬೇಕಿದೆ. ಹೀಗಾಗಿಯೇ, ಬೆಂಗಳೂರು-ಮೈಸೂರು ಹೆದ್ದಾರಿಯ ಒಂದು ಭಾಗದಲ್ಲಿ ಪೂರ್ಣಪ್ರಮಾಣದ ಸರ್ವೀಸ್ ರಸ್ತೆ ನಿರ್ಮಿಸಲು ಎನ್ಎಚ್ಎಐ ಮುಂದಾಗಿದೆ.
ಕೆಳ-ಮೇಲ್ಸೇತುವೆಗಳ ನಿರ್ಮಾಣ: ಎನ್ಎಚ್ಎಐ ರೂಪಿಸಿರುವ ಯೋಜನೆಯಂತೆ ಬೆಂಗಳೂರು-ಮೈಸೂರು ಹೆದ್ದಾರಿಯ1 ಬದಿಯಲ್ಲಿ ಮಾತ್ರ ಪೂರ್ಣ ಪ್ರಮಾಣದ ಸರ್ವೀಸ್ ರಸ್ತೆ ನಿರ್ಮಿಸಲಾಗುತ್ತದೆ. ಅದರಂತೆ ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುವ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಸರ್ವೀಸ್ ರಸ್ತೆ ನಿರ್ಮಿಸುವ ಸಾಧ್ಯತೆಗಳಿವೆ. ಸದ್ಯ ಬಿಡದಿ, ಚನ್ನಪಟ್ಟಣ, ಮದ್ದೂರು ಸೇರಿ ಮತ್ತಿತರ ಪಟ್ಟಣಗಳಿಗೆ ತೆರಳಬೇಕೆಂದರೆ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ತೆರಳಿ ವಾಪಾಸು (ಯೂ-ಟರ್ನ್) ಬರಬೇಕಿದೆ.ಅಲ್ಲದೆ, ಸದ್ಯ ಪೂರ್ಣಪ್ರಮಾಣದ ಸರ್ವೀಸ್ ರಸ್ತೆ ನಿರ್ಮಿಸುವ ಸಂಬಂಧ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸರ್ವೇ ನಡೆಸಲಾಗಿದೆ. ಈ ಸರ್ವೇಯಂತೆ ಮಾರ್ಗದಲ್ಲಿನ ರೈಲ್ವೆ ಮಾರ್ಗಗಳು, ಗುಡ್ಡಗಳಲ್ಲಿ ಕೆಳ ಸೇತುವೆ ನಿರ್ಮಿಸುವುದು ಎನ್ಎಚ್ಎಐ ಯೋಜನೆಯಾಗಿದೆ. ಅಲ್ಲದೆ, ಅಗತ್ಯವಿರುವಲ್ಲಿ ಮೇಲ್ಸೇತುವೆಯನ್ನೂ ನಿರ್ಮಿಸಲಾಗುವುದು. ಅದಕ್ಕಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆನ್ನು ನಡೆಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಎನ್ಎಚ್ಎಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಯಾಟಲೈಟ್ ಬೇಸ್ ಟೋಲ್ ಸಂಗ್ರಹ ಯಂತ್ರ ಅಳವಡಿಕೆ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸಂಚಾರದ ತಡೆಯನ್ನು ನಿವಾರಿಸಲು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅದರಂತೆ ಹೆದ್ದಾರಿಯಲ್ಲಿನ 2 ಟೋಲ್ ಸಂಗ್ರಹ ಕೇಂದ್ರಗಳಿಗೆ ಜಾಗತಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆ (ಜಿಎನ್ಎಸ್ಎಸ್) ಅಡಿಯಲ್ಲಿ ಟೋಲ್ ಸಂಗ್ರಹಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ದೇಶದಲ್ಲಿ ದ್ವಾರಕಾ ಎಕ್ಸ್ಪ್ರೆಸ್ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಜಿಎನ್ಎಸ್ಎಸ್ ಅಳವಡಿಕೆಗೆ ನಿರ್ಧರಿಸಲಾಗಿದ್ದು, ಎನ್ಎಚ್ಎಐನ ಅಂಗಸಂಸ್ಥೆ ಭಾರತೀಯ ಹೆದ್ದಾರಿ ನಿರ್ವಹಣಾ ಸಂಸ್ಥೆ (ಐಎಚ್ಎಂಸಿಎಲ್) ಜಿಎನ್ಎಸ್ಎಸ್ ವ್ಯವಸ್ಥೆ ಅಳವಡಿಸುವ ಕಾರ್ಯ ಮಾಡುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಐಎಚ್ಎಂಸಿಎಲ್ ಈಗಾಗಲೇ ಹೆದ್ದಾರಿಯಲ್ಲಿ ಸರ್ವೇ ಸೇರಿ ಮತ್ತಿತರ ಅಧ್ಯಯನ ನಡೆಸಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಅನುಷ್ಠಾನ ಗೊಳಿಸಲಾಗುತ್ತದೆ. ಒಮ್ಮೆ ಜಿಎನ್ಎಸ್ಎಸ್ ಅಳವಡಿಸಿದರೆ ವಾಹನಗಳು ಟೋಲ್ ಪಾವತಿಗೆ ನಿಲ್ಲಿಸುವ ಅವಶ್ಯಕತೆಯಿಲ್ಲ. ಉಪಗ್ರಹ ಆಧಾರಿತವಾಗಿ ಟೋಲ್ ಸಂಗ್ರಹವಾಗಲಿದೆ.ಬೆಂಗಳೂರು-ಮೈಸೂರು ಹೆದ್ದಾರಿಯು ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿದೆ. ಅಲ್ಲದೆ, ರೈಲ್ವೆ ಮಾರ್ಗ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಹೆದ್ದಾರಿಯಲ್ಲಿ ಪೂರ್ಣ ಪ್ರಮಾಣದ ಸರ್ವೀಸ್ ರಸ್ತೆಯಿಲ್ಲ. ಹೀಗಾಗಿ ಕೆಲ ಪಟ್ಟಣಗಳಿಗೆ ಬರಲು ಸಾಕಷ್ಟು ದೂರ ಕ್ರಮಿಸಬೇಕಾಗಿದೆ. ಅದನ್ನು ತಪ್ಪಿಸಲು ಹೆದ್ದಾರಿಯಲ್ಲಿ ಪೂರ್ಣ ಪ್ರಮಾಣದ ಸರ್ವೀಸ್ ರಸ್ತೆ ನಿರ್ಮಿಸಲು ಯೋಜಿಸಲಾಗಿದೆ. ಅದಕ್ಕಾಗಿ ಅಗತ್ಯವಿರುವಲ್ಲ ಕೆಳ ಮತ್ತು ಮೇಲ್ಸೇತುವೆ ನಿರ್ಮಿಸಲಾಗುವುದು.
- ವಿಲಾಸ್ ಪಿ.ಬ್ರಹ್ಮಂಕರ್, ಪ್ರಾದೇಶಿಕ ಅಧಿಕಾರಿ, ಎನ್ಎಚ್ಎಐ