ಅ.25ರಿಂದ ಏಕಕಾಲಕ್ಕೆ ಕಬ್ಬು ಅರೆಯುವಿಕೆ

| Published : Oct 18 2023, 01:02 AM IST

ಸಾರಾಂಶ

ಪ್ರತಿ ಬಾರಿ ತಮಗೆ ಇಷ್ಟ ಬಂದಂತೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸುತ್ತಿರುವುದಕ್ಕೆ ಕಡಿವಾಣ ಹಾಕಲಾಗಿದ್ದು, ರಾಜ್ಯಾದ್ಯಂತ ಏಕಕಾಲಕ್ಕೆ ಈ ಬಾರಿ ಆರಂಭವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರತಿ ಬಾರಿ ತಮಗೆ ಇಷ್ಟ ಬಂದಂತೆ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆಯನ್ನು ಪ್ರಾರಂಭಿಸುತ್ತಿರುವುದಕ್ಕೆ ಕಡಿವಾಣ ಹಾಕಲಾಗಿದ್ದು, ರಾಜ್ಯಾದ್ಯಂತ ಏಕಕಾಲಕ್ಕೆ ಈ ಬಾರಿ ಆರಂಭವಾಗಲಿದೆ. ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿ ಕಬ್ಬು ಅರೆಯುವಿಕೆ ಪ್ರಾರಂಭವಾಗಲಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ್‌ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 1ರಿಂದ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆ ಆರಂಭವಾಗಬೇಕಿತ್ತು. ಆದರೆ, ಬರದ ಹಿನ್ನೆಲೆಯಲ್ಲಿ ಇದೇ ತಿಂಗಳ 25ರಿಂದ ಕಬ್ಬು ಅರೆಯುವಿಕೆ ಆರಂಭವಾಗಲಿದೆ. ಮುಖ್ಯಮಂತ್ರಿಗಳ ಆದೇಶದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

----- ರಾಜ್ಯದಲ್ಲಿ ಬರಗಾಲ ಎದುರಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬಹಳಷ್ಟು ಕಡೆ ಕಬ್ಬು ಒಣಗುತ್ತಿದೆ. ಹಂಗಾಮಿಗೆ ಬೇಗನೆ ಕಬ್ಬು ಅರೆಯುವಿಕೆ ಶುರು ಮಾಡುವಂತೆ ಬೆಳೆಗಾರರು ಮನವಿ ಮಾಡಿದ್ದಾರೆ. ಹೀಗಾಗಿ ಒಂದು ವಾರಕ್ಕೆ ಮುನ್ನ ಕಬ್ಬು ಅರೆಯುವಿಕೆಯನ್ನು ಆರಂಭಿಸುವಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಕಬ್ಬು ಎಂದಿನಂತೆ ಸುಮಾರು 11ರಿಂದ 12 ತಿಂಗಳಿಗೆ ಕಟಾವಿಗೆ ಬರುತ್ತದೆ. ಮಳೆ ಉತ್ತಮವಾಗಿ ಆಗಿ, ನವೆಂಬರ್ ನಲ್ಲಿ ಕಬ್ಬು ಕಟಾವು ಮಾಡಿದ್ದರೆ ಇಳುವರಿಯೂ ಜಾಸ್ತಿ ಇರುತ್ತಿತ್ತು. ಆದರೆ, ಮಳೆ ಕೊರತೆಯಿಂದ ಅಕ್ಟೋಬರ್ ನಲ್ಲೇ ಕಬ್ಬು ಕಟಾವು ಮಾಡುವುದರಿಂದ ಸ್ವಲ್ಪ ಇಳುವರಿ ಕಡಿಮೆಯಾಗಲಿದೆ. ರಾಜ್ಯದಲ್ಲಿ ಈ ಬಾರಿ 3.50 ರಿಂದ 4.50 ಲಕ್ಷ ಹೆಕ್ಟೇರ್ ನಲ್ಲಿ 11-12 ತಿಂಗಳು ತುಂಬಿದ ಕಬ್ಬು ಇದೆ. ಶೇ 9.5ರಷ್ಟು ಇಳುವರಿ ಇರುತ್ತಿತ್ತು. ಈ ಬಾರಿ ಸುಮಾರು 1 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಕಟಾವಿಗೆ ಬಂದಿಲ್ಲ. ಕಳೆದ ಬಾರಿ 74 ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆಯನ್ನು ಮಾಡಲಾಗಿತ್ತು. ಈ ಬಾರಿ 75 ರಿಂದ 78 ಕಾರ್ಖಾನೆಯಲ್ಲಿ ಕಬ್ಬನ್ನು ಅರೆಯಬಹುದು. ಇದರಿಂದ 1800 ಮೆಗಾವಾಟ್ ಕೋಜನ್ ಉತ್ಪಾದನೆಯಾಗಲಿದ್ದು, ಪರಿಣಾಮ ಸದ್ಯ ಇರುವ ಲೋಡ್ ಶೆಡ್ಡಿಂಗ್ ತಡೆಗೂ ಸಹಕಾರಿ ಆಗಲಿದೆ ಎಂದರು. ಒಂದು ರುಪಾಯಿಯೂ ಬಾಕಿ ಇಲ್ಲ:

ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಎಫ್ಆರ್ ಪಿಗಿಂತ ಹೆಚ್ಚಿನ ಹಣವನ್ನೇ ಕೊಡಿಸಲಾಗಿದೆ. ಈ ಮೊದಲು 19.74 ಸಾವಿರ ಕೋಟಿ ರು. ಇದ್ದು, ಈಗ 20 ಸಾವಿರ ಕೋಟಿ ರು. ರೈತರಿಗೆ ಕೊಡಿಸಲಾಗಿದೆ. ಬುಳವಾಡ ಬಸವೇಶ್ವರ ಸಕ್ಕರೆ ಕಾರ್ಖಾನೆಯಿಂದ ರೂ. 28 ಕೋಟಿ ಬಾಕಿ ಇತ್ತು. ಕಾರ್ಖಾನೆಯ ಉಪಕರಣ ಜಪ್ತಿ ಮಾಡಿ ಹಣವನ್ನು ರೈತರಿಗೆ ಕೊಡಿಸಲಾಗಿದೆ. ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳಿಂದ ಒಂದು ರೂಪಾಯಿ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಇನ್ನು, ಎಥೆನಾಲ್ ಲಾಭಾಂಶವನ್ನು ರೈತರಿಗೆ ಕೊಡುವ ಬಗ್ಗೆ ಸಕ್ಕರೆ ನಿಯಂತ್ರಣ ಮಂಡಳಿ ಮುಂದೆ ತಂದು ನಿರ್ಧಾರ ಮಾಡಲಾಗುವುದು. ಕಳೆದ ಬಾರಿ ಎಥೆನಾಲ್ ಗೆ 35 ಸಾವಿರ ಕೋಟಿ ಲೀಟರ್ ಗೆ ಹೋಗಿತ್ತು. ಈ ಬಾರಿ ಸಕ್ಕರೆ ಉತ್ಪಾದನೆಯೂ ಕಡಿಮೆ ಆಗಬಹುದು, ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಸಕ್ಕರೆ ಬಾರದೇ ಇರಬಹುದು. ರಾಜ್ಯದಲ್ಲಿ ಎಥೆನಾಲ್ ಲಾಭವನ್ನು ಈ ವರ್ಷವೇ ರೈತರಿಗೆ ಕೊಡಿಸಲಾಗುವುದು ಎಂದು ಮಾಹಿತಿ ನೀಡಿದರು. ಲೋಕಾಯುಕ್ತ ತನಿಖೆ ಮುಗಿದಿದೆ: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯ ಅವ್ಯವಹಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಲೋಕಾಯುಕ್ತ ತನಿಖೆ ಆಗಿದೆ. ಅದರ ಆಧಾರದ ಮೇಲೆ ಮೇಲ್ಮನವಿ ಹೋಗಬೇಕು. ಒಂದು ಕೋಟಿ ರು. ತುಂಬಬೇಕು. 2 ಲಕ್ಷ ಟನ್ ಕ್ರಷಿಂಗ್ ಆಗಿದ್ದು, ಶೇ. 7.50 ರಷ್ಟು ವಸೂಲಿ ಆಗಿದೆ ಎಂದ ಅವರು, ಸದ್ಯ ಸಕ್ಕರೆ ಮೇಲೆ ಶೇ 5ರಷ್ಟು ಜಿಎಸ್‌ಟಿ ಇದೆ. ಅದರಿಂದ ನಮಗೆ ಶೇ 2.5 ಸಿಗಲಿದೆ. ದೇಶದಲ್ಲಿಗ ರಫ್ತು ರದ್ದಾಗಿರುವುದರಿಂದ ಸಕ್ಕರೆ ದರ ಕಡಿಮೆ ಇದೆ. ರಫ್ತಿಗೆ ಅವಕಾಶ ಸಿಕ್ಕರೆ ರೈತರಿಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದರು.