ಸಾರಾಂಶ
ನವದೆಹಲಿ: ದೇಶದಲ್ಲಿ ಕೋವಿಡ್ ವೈರಸ್ನ ರೂಪಾಂತರಿ ತಳಿ ಜೆಎನ್.1 ದಿನೇದಿನೇ ಹೆಚ್ಚುತ್ತಿದ್ದು, ಈಗಾಗಲೇ ಇದು ಸಮುದಾಯಕ್ಕೆ ಹರಡಿರುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದ್ದಾರೆ.ಭಾರತೀಯ ರಾಷ್ಟ್ರೀಯ ವೈದ್ಯಕೀಯ ಸಂಘದ ಕೋವಿಡ್ ಟಾಸ್ಕ್ಫೋರ್ಸ್ನ ಉಪಾಧ್ಯಕ್ಷ ಡಾ.ರಾಜೀವ್ ಜಯದೇವನ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಈ ಕುರಿತು ಎಚ್ಚರಿಕೆ ನೀಡಿದ್ದಾರೆ.ಡಾ.ಜಯದೇವನ್ ಮತನಾಡಿ, ‘ಕೇರಳದ ಕೊಚ್ಚಿಯಲ್ಲಿ ಇನ್ಫ್ಲುಯೆಂಜಾ ಲಕ್ಷಣಗಳಿರುವವರನ್ನು ಪರೀಕ್ಷೆಗೊಳಪಡಿಸಿದಾಗ ಶೇ.30ರಷ್ಟು ಮಂದಿಗೆ ಪಾಸಿಟಿವ್ ಬಂದಿದೆ. ಇದು ಮತ್ತೊಮ್ಮೆ ಕೋವಿಡ್ ಜನಸಮುದಾಯಕ್ಕೆ ಹರಡಿರುವುದರ ಲಕ್ಷಣ. ನನ್ನ ಪಕ್ಕದ ಮನೆಯವರಿಗೂ ಕೋವಿಡ್ ಬಂದಿದೆ. ಎಲ್ಲೆಡೆ ಪಾಸಿಟಿವ್ ಬರುತ್ತಿದೆ. ಕಳೆದೊಂದು ತಿಂಗಳಿನಿಂದ ಈ ವೈರಸ್ ಹರಡುತ್ತಿದೆ. ಆದರೆ ಕೋವಿಡ್ ಪರೀಕ್ಷೆ ಬಹಳ ಕಡಿಮೆ ನಡೆಯುತ್ತಿತ್ತು. ಕೆಲವೆಡೆ ಪರೀಕ್ಷೆಯೇ ನಡೆಯುತ್ತಿರಲಿಲ್ಲ. ನವೆಂಬರ್ಗಿಂತ ಮೊದಲು ಇನ್ಫ್ಲುಯೆಂಜಾ ಲಕ್ಷಣವಿರುವವರಲ್ಲಿ ಶೇ.1ರಷ್ಟು ಮಂದಿಗೆ ಪಾಸಿಟಿವ್ ಬರುತ್ತಿತ್ತು. ನವೆಂಬರ್ ನಂತರ ಅದು ಶೇ.9ಕ್ಕೆ ಏರಿತು. ಈಗ ಪಾಸಿಟಿವಿಟಿ ದರ ಕೆಲವೆಡೆ ಶೇ.30ಕ್ಕೆ ಏರಿಕಯಾಗಿದೆ. ಇದರರ್ಥ ಶ್ವಾಸಕೋಶದ ತೊಂದರೆ, ಉಸಿರಾಟದ ತೊಂದರೆ, ಕೆಮ್ಮು, ಜ್ವರ ಮತ್ತು ಮೈಕೈ ನೋವಿನ ಬಹುತೇಕ ಪ್ರಕರಣಗಳು ಕೋವಿಡ್ ಆಗಿವೆ’ ಎಂದು ತಿಳಿಸಿದ್ದಾರೆ.ಡಾ.ಸೌಮ್ಯಾ ಸ್ವಾಮಿನಾಥನ್ ಮಾತನಾಡಿ, ‘ಈಗ ಹರಡುತ್ತಿರುವ ಕೋವಿಡ್ ಕೇವಲ ಸಾಮಾನ್ಯ ನೆಗಡಿ ಎಂದು ನಿರ್ಲಕ್ಷಿಸಬಾರದು. ಕೋವಿಡ್ನಿಂದ ದೀರ್ಘಾವಧಿಯಲ್ಲಿ ಉಂಟಾಗಬಹುದಾದ ಹೃದಯಾಘಾತ, ಪಾರ್ಶ್ವವಾಯು ಹಾಗೂ ಮಾನಸಿಕ ಸಮಸ್ಯೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಜೆಎನ್.1 ತಳಿ ತೀವ್ರ ಪ್ರಮಾಣದಲ್ಲಿ ಹರಡುತ್ತಿದ್ದರೂ ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಹೆಚ್ಚಾಗದೆ ಇರಬಹುದು. ಅದಕ್ಕೆ ಎರಡು ಡೋಸ್ ಲಸಿಕೆ ನೀಡಿರುವುದು ಕೂಡ ಒಂದು ಕಾರಣ. ಮೊದಲ ಮೂರು ಅಲೆಗಳಲ್ಲಿ ನಮ್ಮ ದೇಶ ವೈದ್ಯಕೀಯವಾಗಿ ಸಾಕಷ್ಟು ಮುಂದುವರೆದಿದೆ. ಹಾಗಾಗಿ ಇದಕ್ಕೆ ಚಿಕಿತ್ಸೆ ನೀಡುವುದು ಕಷ್ಟವಿಲ್ಲ. ಆದರೆ ರೋಗಿಗಳು ಹಾಗೂ ವೃದ್ಧರು ಮಾಸ್ಕ್ ಧರಿಸಬೇಕು’ ಎಂದು ಹೇಳಿದ್ದಾರೆ.‘ಈಗಷ್ಟೇ ಭಾರತದಲ್ಲಿ ಪರೀಕ್ಷೆ ಹೆಚ್ಚಿಸಲಾಗಿದೆ. ಹೀಗಾಗಿ ಮುಂದಿನ ಕೆಲ ದಿನಗಳಲ್ಲಿ ಹೆಚ್ಚೆಚ್ಚು ರಾಜ್ಯಗಳಿಂದ ದತ್ತಾಂಶಗಳು ಸಿಗುತ್ತವೆ. ಸದ್ಯಕ್ಕೆ ಕೇರಳ, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಮಾತ್ರ ಕೇಸು ಹೆಚ್ಚುತ್ತಿರುವ ವರದಿಯಿದೆ. ಮುಂದೆ ಇದೇ ಪರಿಸ್ಥಿತಿ ಎಲ್ಲಾ ರಾಜ್ಯಗಳಲ್ಲೂ ಕಾಣಿಸಿಕೊಳ್ಳಬಹುದು. ಇದು ನಮಗೆ ನಿರೀಕ್ಷಿತವಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಈ ವರ್ಷದ ಮೇ ತಿಂಗಳಲ್ಲಿ ಕೋವಿಡ್ ಇನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಅಲ್ಲ ಎಂದು ಘೋಷಿಸಿದಾಗಲೂ ಇದರಿಂದ ಈಗಲೂ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಆತಂಕವಿದೆ ಎಂದೇ ಹೇಳಿತ್ತು’ ಎಂದು ಡಾ.ಸೌಮ್ಯಾ ತಿಳಿಸಿದ್ದಾರೆ.