ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಕುವೆಂಪು ಆಧ್ಯಾತ್ಮಿಕ ಚಿಂತನೆಯುಳ್ಳ, 20ನೇ ಶತಮಾನದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕವಿಯ ಶ್ರೇಷ್ಠತೆ, ಬರಹಗಳು ಓದುಗರ ಮನಸ್ಸಿನ ಮೇಲೆ ಗಾಢ ಪ್ರಭಾವ ಬೀರುತ್ತವೆ ಎಂದು ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಪ್ರತಿಪಾದಿಸಿದರು.ತಾಲೂಕಿನ ಕುಪ್ಪಳಿಯ ಹೇಮಾಂಗಣದಲ್ಲಿ ರಾಷ್ಟ್ರಕವಿ ಕುವೆಂಪು 119ನೇ ಜನ್ಮದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಪ್ರಶಸ್ತಿ ಫಲಕ ದೊಂದಿಗೆ ₹5 ಲಕ್ಷ ಮೊತ್ತದ ಕುವೆಂಪು ರಾಷ್ಟ್ರೀಯ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಆಧ್ಯಾತ್ಮಿಕದೊಂದಿಗೆ ವೈಚಾರಿಕ ಚಿಂತನೆಯನ್ನೂ ಹೊಂದಿದ್ದ ಕುವೆಂಪು ಮೌಢ್ಯಾಚರಣೆ ಕಟುವಾಗಿ ವಿರೋಧಿಸಿದ ಪ್ರಭಾವಿ ಲೇಖಕ. ನಿಷ್ಠುರ ವ್ಯಕ್ತಿತ್ವದ ಅವರ ಮೇಲೆ ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಠಾಗೋರ್, ಅರವಿಂದರ ಪ್ರಭಾವವಿದೆ. ಕುಪ್ಪಳಿಯ ಶ್ರೀಮಂತ ಪರಿಸರವೂ ಅವರ ಬರಹಗಳಿಗೆ ಪೂರಕವಾಗಿವೆ ಎಂದರಲ್ಲದೆ, ಕನ್ನಡಿಗರ ಹೃದಯವಂತಿಕೆ ಮತ್ತು ಪ್ರಾಮಾಣಿಕತೆಯೂ ಮೆಚ್ಚುವಂಥದ್ದು ಎಂದು ಹಾಡಿ ಹೊಗಳಿದರು.ಕವಿಯ ಹೆಸರಿನಲ್ಲಿ ನಾಡಿನ ಹೊರಗಿನವರಿಗೂ ರಾಷ್ಟ್ರೀಯ ಪುರಸ್ಕಾರ ನೀಡುತ್ತಿರುವುದು ಮತ್ತು ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಕೃತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಕನ್ನಡಿಗರಿಗೆ ಓದುವ ಅವಕಾಶ ಕಲ್ಪಿಸುತ್ತಿರುವುದು ಪ್ರಶಂಸನೀಯ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕುವೆಂಪು ಕಲಾ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸರ್ಕಾರದ ಕಡೆಯಿಂದ ಆಗಬೇಕಿರುವ ಕೆಲಸಗಳನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಇದೇ ವೇಳೆ ತಿಳಿಸಿದರು.ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಕವಿಯ ಹೆಸರಿನಲ್ಲಿ 3500 ಎಕರೆ ಪ್ರದೇಶ ಬಯೋರಿ ಸರ್ವರ್ ಪೋಷಣೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸ್ವಲ್ಪಮಟ್ಟಿನ ಅಡಚಣೆಯಾಗಿದೆ. ಎಡ, ಬಲ, ಮಧ್ಯಮ ಹೀಗೇ ಎಲ್ಲ ಪಂಥೀಯರೂ ರಾಷ್ಟ್ರಕವಿಯನ್ನು ಉಲ್ಲೇಖಿಸುತ್ತಾರೆ. ಆದರೆ ಹೇಳುವಂತೆ ನಡೆದುಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ ಎಂದರು.
ಸಮಾರಂಭದಲ್ಲಿ ಡಾ.ಧರಣಿದೇವಿ ಮಾಲಗತ್ತಿ, ಕಡಿದಾಳು ಪ್ರಕಾಶ್, ಡಾ.ಜಿ.ಕೆ.ವೆಂಕಟೇಶ್, ಟಿ.ಎನ್.ಅರವಿಂದ್, ಸ್ನೇಹಲ್ ಲೋಖಂಡೆ, ಗಿರಿಜಾ, ಡಿ.ಎಂ.ಮನುದೇವ್ ಇನ್ನಿತರರಿದ್ದರು.