ಸಾರಾಂಶ
ಬೆಂಗಳೂರು : ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಪೂರಕವಾಗಿ ದೇವನಹಳ್ಳಿ ಹಾಗೂ ನೆಲಮಂಗಲದಲ್ಲಿ ನೂತನ ರೈಲ್ವೆ ಟರ್ಮಿನಲ್ ನಿರ್ಮಿಸಲು ತೀರ್ಮಾನಿಸಿದ್ದು, ಈ ಸಂಬಂಧ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವನಹಳ್ಳಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣಕ್ಕಾಗಿ 400 ಎಕರೆ ಪಡೆಯಲಾಗುತ್ತಿದೆ. ಈ ಹಿಂದೆ ವೈಟ್ಫೀಲ್ಡ್ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಅಲ್ಲಿ ಜಾಗ ಲಭ್ಯವಿಲ್ಲ. ಹೀಗಾಗಿ ದೇವನಹಳ್ಳಿ ಆಯ್ಕೆ ಮಾಡಲಾಗಿದೆ. ನೆಲಮಂಗಲದಲ್ಲಿ ಕೂಡ ಇನ್ನೊಂದು ರೈಲ್ವೆ ಟರ್ಮಿನಲ್ ನಿರ್ಮಿಸಲಾಗುವುದು. ಇದಕ್ಕಾಗಿ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸುವ ಪ್ರಕ್ರಿಯೆ ನಡೆಸಿದ್ದಾರೆ. ಇದರಿಂದ ರಾಜಧಾನಿ ಸಂಪರ್ಕಿಸುವ ರೈಲ್ವೆ ಮಾರ್ಗ ಹೆಚ್ಚಾಗಲಿದ್ದು, ಕೆಎಸ್ಆರ್ ನಿಲ್ದಾಣದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ರಾಮನಗರ, ಮಾಗಡಿಗಳಲ್ಲೂ ಅಗತ್ಯ ಕಂಡುಬಂದರೆ ನಿಲ್ದಾಣ ರೂಪಿಸಲಾಗುವುದು ಎಂದು ತಿಳಿಸಿದರು.
ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ₹1200 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಯೋಜನೆ ಸಿದ್ಧವಾಗಿದ್ದು, ರೈಲ್ವೆ ಮಂಡಳಿಗೆ ಅನುಮೋದನೆಗೆ ಕಳಿಸಲಾಗಿದೆ. ಶೀಘ್ರವೇ ಇದಕ್ಕೆ ಒಪ್ಪಿಗೆ ದೊರೆಯುವ ನಿರೀಕ್ಷೆಯಿದೆ. ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಸದ್ಯ 10 ಪ್ಲಾಟ್ಫಾರ್ಮ್ಗಳಿದ್ದು, ₹180 ಕೋಟಿ ವೆಚ್ಚದಲ್ಲಿ ಇನ್ನೆರಡು ಪ್ಲಾಟ್ಫಾರ್ಮ್ ನಿರ್ಮಿಸಲು ಕೂಡ ಅನುದಾನ ಬಿಡುಗಡೆ ಆಗಿದೆ ಎಂದು ಸಚಿವರು ತಿಳಿಸಿದರು.
ಯಶವಂತಪುರ, ಬೆಂಗಳೂರು ದಂಡು ರೈಲ್ವೆ ನಿಲ್ದಾಣಗಳ ಮರು ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಯಶವಂತಪುರದ ರೈಲ್ವೆ ನಿಲ್ದಾಣದ ಬಳಿಯ ಕೊಳಗೇರಿ ಪ್ರದೇಶವನ್ನು ತೆರವು ಮಾಡಿಸಿದಲ್ಲಿ ಅಲ್ಲಿ 4-5 ಹೆಚ್ಚುವರಿ ಪ್ಲಾಟ್ಫಾರ್ಮ್ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.
ಸಂಸದ ಪಿ.ಸಿ.ಮೋಹನ್, ಶಾಸಕಿ ಎಸ್.ಮಂಜುಳಾ, ಮಾಜಿ ಶಾಸಕ ಅರವಿಂದ ಲಿಂಬಾವಳಿ ಇದ್ದರು.
ಉಪನಗರ ರೈಲು 2027ಕ್ಕೆ: ಸೋಮಣ್ಣ
ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಆರ್ಪಿ) ಬೈಯಪ್ಪನಹಳ್ಳಿ- ಚಿಕ್ಕಬಾಣಾವರ (25.01 ಕಿ.ಮೀ.) ಸಂಪರ್ಕಿಸುವ ಮತ್ತು ಹೀಲಲಿಗೆ - ರಾಜಾನುಕುಂಟೆ ಸಂಪರ್ಕಿಸುವ (46.24 ಕಿ.ಮೀ.) ಸಂಪರ್ಕಿಸುವ ಎರಡು ಮಾರ್ಗಗಳ ಕಾಮಗಾರಿ ನಡೆಯುತ್ತಿದೆ. 2026ರ ಡಿಸೆಂಬರ್ ಅಂತ್ಯ ಅಥವಾ 2027ರ ಮಾರ್ಚ್ ಒಳಗಾಗಿ ನಿರ್ಮಿಸುವ ಗುರಿಯಿದೆ ಎಂದು ತಿಳಿಸಿದರು.
281 ಕಿ.ಮೀ. ವರ್ತುಲ ರೈಲ್ವೆಗೆ ಸರ್ವೇ ನಡೆಯುತ್ತಿದ್ದು, ಆರು ತಿಂಗಳಲ್ಲಿ ಮುಗಿಯಲಿದೆ. ಇದರಿಂದ ಸರಕು ಸಾಗಣೆ ರೈಲುಗಳ ಓಡಾಟ, ವಾಯುಮಾಲಿನ್ಯ ನಿಯಂತ್ರಣ ಆಗಲಿದೆ. ಉಪನಗರ ರೈಲು ಯೋಜನೆ, ವರ್ತುಲ ರೈಲು ಯೋಜನೆ, ರೈಲ್ವೆ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸುವಂತಾಗಲು ಅಗತ್ಯ ಸೂಚನೆ ನೀಡಲಾಗಿದೆ.
ಮೂಲಸೌಕರ್ಯ ಮೇಲ್ದರ್ಜೆಗೆ ಕ್ರಮ
ಹೂಡಿ, ವೈಟ್ಫೀಲ್ಡ್, ಬೆಳ್ಳಂದೂರು ಮತ್ತು ಕಾರ್ಮೆಲರಾಮ್ ಸೇರಿ ಇತರೆ ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಿ ಅಗತ್ಯ ಮೂಲಸೌಕರ್ಯ ಕಲ್ಪಿಸುವುದಾಗಿ ಸಚಿವ ವಿ. ಸೋಮಣ್ಣ ಅವರು ತಿಳಿಸಿದರು.
ರಾಜ್ಯದಲ್ಲಿ ಅಗತ್ಯದಲ್ಲಿ ಇರುವ ಎಲ್ಲ ಲೇವಲ್ ಕ್ರಾಸಿಂಗ್ ತೆರವು ಮಾಡಿ ಅಗತ್ಯ ರಸ್ತೆ ಮೇಲ್ಸೇತುವೆ (ಆರ್ಒಬಿ), ರಸ್ತೆ ಕೆಳ ಸೇತುವೆ (ಆರ್ಯುಬಿ), ಅಂಡರ್ಪಾಸ್ ಮತ್ತು ನೀರಿನ ದ್ವಾರಗಳನ್ನು ಸಂಪೂರ್ಣ ರೈಲ್ವೆ ಇಲಾಖೆಯ ಅನುದಾನದಲ್ಲೇ ನಿರ್ಮಿಸಲಾಗುವುದು. ಬೆಳ್ಳಂದೂರು ರೋಡ್ ರೈಲು ನಿಲ್ದಾಣವನ್ನು ಪಣತ್ತೂರು ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೈಲ್ವೆ ಮಾರ್ಗ ಹಾದು ಹೋದಲ್ಲಿ ಹಲವೆಡೆ ರಾಜಕಾಲುವೆ ಅಗಲೀಕರಣ ಆಗಬೇಕಾದ ಅಗತ್ಯವಿದೆ. ಈ ಸಂಬಂಧ ಕೆ-ರೈಡ್ ಹಾಗೂ ರೈಲ್ವೆ ಇಲಾಖೆಗಳು ತಮ್ಮ ವ್ಯಾಪ್ತಿಯ ರಾಜಾಕಾಲುವೆ ಕಾಮಗಾರಿಯನ್ನು ನಡೆಸಲಿವೆ. ಹೂಡಿ- ಕೆ.ಆರ್.ಪುರಂ ನಡುವಿನ ಕಾವೇರಿ ನಗರದಲ್ಲಿ ರಾಜಕಾಲುವೆ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗುವುದು. ಕಾಡುಗೊಂಡನಹಳ್ಳಿಯಲ್ಲಿ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ₹ 9.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸಿದ್ಧಾರ್ಥ ಬಡಾವಣೆಗಳಲ್ಲಿ ಅಂಡರ್ಪಾಸ್ ನಿರ್ಮಾಣ ದೊಡ್ಡನೆಕ್ಕುಂದಿ ಅಂಡರ್ಪಾಸ್ಗೆ ಎರಡು ದ್ವಾರ, ಔಟರ್ ರಿಂಗ್ ರೋಡ್ ಬಳಿ ಮುಚ್ಚಲಾದ ಎರಡು ಸರ್ವೀಸ್ ರಸ್ತೆ ಪುನಃ ತೆರೆಯುವುದು ಸೇರಿ ಇತರೆ ಕ್ರಮ ವಹಿಸಲಾಗುವುದು ಎಂದರು.