ಸಾರಾಂಶ
ಬೆಂಗಳೂರು : ಬೆಂಗಳೂರು ಉಪನಗರ ರೈಲು ಯೋಜನೆಯಿಂದಾಗಿ (ಬಿಎಸ್ಆರ್ಪಿ) ನಮ್ಮ ಮೆಟ್ರೋದ ಕೆಂಗೇರಿ - ವೈಟ್ಫೀಲ್ಡ್ ಸಂಪರ್ಕಿಸುವ ‘ಪಾರಿಜಾತ’ ಕಾರಿಡಾರ್ (35ಕಿಮೀ) ನಿರ್ಮಾಣ ಕೈಬಿಡುವ ಸಾಧ್ಯತೆಯಿದೆ.
ಇತ್ತೀಚೆಗೆ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ನಡೆದ ಕೆ-ರೈಡ್ ಸಭೆಯಲ್ಲಿ ಈ ಬಗ್ಗೆ ಪರಾಮರ್ಶೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ವೈಟ್ಫೀಲ್ಡ್ ಹಾಗೂ ಛಲ್ಲಘಟ್ಟ ನಡುವೆ ನಮ್ಮ ಮೆಟ್ರೋದ ನೇರಳೆ ಮಾರ್ಗ ಹಾದು ಹೋಗಿರುವ ಕಾರಣ ಇದೀಗ ಇದೇ ಮಾರ್ಗದಲ್ಲಿ ಪುನಃ ಉಪನಗರ ರೈಲು ಯೋಜನೆ ರೂಪಿಸಿಕೊಳ್ಳಬೇಕೆ ಬೇಡವೆ ಎಂಬುದರ ಚರ್ಚೆ ನಡೆದಿದೆ.
ಪಾರಿಜಾತ ಮಾರ್ಗದ ಬದಲಾಗಿ ಬಿಎಸ್ಆರ್ಪಿ ಯೋಜನೆಯಡಿ ಚಿಕ್ಕಬಾಣಾವರ- ತುಮಕೂರು, ಚಿಕ್ಕಬಾಣಾವರ - ಮಾಗಡಿ ಅಥವಾ ರಾಜಾನುಕುಂಟೆ ಗೌರಿಬಿದನೂರು ನಡುವೆ ಉಪನಗರ ರೈಲು ಮಾರ್ಗ ನಿರ್ಮಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.ಒಟ್ಟಾರೆ 148ಕಿಮೀ ಉದ್ದದ ಉಪನಗರ ರೈಲು ಯೋಜನೆಗೆ 2020ರಲ್ಲಿ ಅನುಮೋದನೆ ದೊರೆತಿದೆ.
ಈಗಾಗಲೇ ಬೈಯಪ್ಪನಹಳ್ಳಿ - ಚಿಕ್ಕಬಾಣಾವರ ಸಂಪರ್ಕಿಸುವ ‘ ಮಲ್ಲಿಗೆ’ ಮಾರ್ಗದ (25.01ಕಿಮೀ) ಕಾಮಗಾರಿ ಶೇ.30ರಷ್ಟು ಮುಗಿದಿದೆ. ಹೀಲಲಿಗೆ ಹಾಗೂ ರಾಜಾನುಕುಂಟೆ ಸಂಪರ್ಕಿಸುವ ‘ಕನಕ’ ಮಾರ್ಗಕ್ಕೆ (46.24) ಕಾಮಗಾರಿ ಆರಂಭವಾಗಿದೆ. ಇನ್ನು, ಮೆಜೆಸ್ಟಿಕ್ ಹಾಗೂ ದೇವನಹಳ್ಳಿ ಸಂಪರ್ಕಿಸುವ ‘ಸಂಪಿಗೆ’ ಮಾರ್ಗ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ.