ಸಾರಾಂಶ
ರಾಜ್ಕೋಟ್: ತೊಡೆಯ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ತಾರಾ ಬ್ಯಾಟರ್ ಕೆ.ಎಲ್.ರಾಹುಲ್ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.
ಅವರ ಬದಲು ಕರ್ನಾಟಕದ ಮತ್ತೋರ್ವ ಬ್ಯಾಟರ್ ದೇವದತ್ ಪಡಿಕ್ಕಲ್ ಚೊಚ್ಚಲ ಬಾರಿ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡಗೊಂಡಿದ್ದಾರೆ.
ರಾಹುಲ್ ಆರಂಭಿಕ ಪಂದ್ಯದಲ್ಲಿ ಗಾಯಗೊಂಡಿದ್ದು, 2ನೇ ಪಂದ್ಯಕ್ಕೆ ಗೈರಾಗಿದ್ದರು. ಗಾಯದ ಹೊರತಾಗಿಯೂ ರಾಹುಲ್ ಹಾಗೂ ಜಡೇಜಾರನ್ನು ಕೊನೆ 3 ಟೆಸ್ಟ್ಗಳಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಫಿಟ್ನೆಸ್ ಸಾಬೀತುಪಡಿಸಬೇಕೆಂದು ಬಿಸಿಸಿಐ ತಿಳಿಸಿತ್ತು.
3ನೇ ಟೆಸ್ಟ್ಗೂ ಮುನ್ನ ಸಂಪೂರ್ಣ ಫಿಟ್ ಆಗದ ಕಾರಣ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.ಪಡಿಕ್ಕಲ್ ದೇಸಿ ಕ್ರಿಕೆಟ್ನಲ್ಲಿ ಅಭೂತಪೂರ್ವ ಲಯದಲ್ಲಿದ್ದು, ರಣಜಿಯ 4 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ.
ವಿಜಯ್ ಹಜರೇ ಏಕದಿನ, ಭಾರತ ‘ಎ’ ತಂಡದ ಪರವಾಗಿಯೂ ಅತ್ಯುತ್ತಮ ಆಟ ಪ್ರದರ್ಶಿಸಿದ್ದರು. ಪಡಿಕ್ಕಲ್ ಈ ವರೆಗೂ ಭಾರತದ ಪರ ಕೇವಲ 2 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ಭರತ್ ಬದಲು ಜುರೆಲ್?:
ವಿಕೆಟ್ ಕೀಪರ್ ಬ್ಯಾಟರ್ ಶ್ರೀಕರ್ ಭರತ್ ಬದಲು ಧ್ರುವ್ ಜುರೆಲ್ಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಭರತ್, ಈ ವರೆಗೂ ಆಡಿರುವ 7 ಪಂದ್ಯಗಳಲ್ಲಿ ಕೇವಲ 221 ರನ್ ಬಾರಿಸಿದ್ದು, ಒಂದೂ ಅರ್ಧಶತಕ ದಾಖಲಾಗಿಲ್ಲ. ಹೀಗಾಗಿ ಜುರೆಲ್ಗೆ ಅವಕಾಶ ಸಿಗಲಿದೆ ಎನ್ನಲಾಗುತ್ತಿದೆ.
ಅಭ್ಯಾಸ ಶುರು: 2ನೇ ಟೆಸ್ಟ್ ಬಳಿಕ ಅಗತ್ಯ ವಿಶ್ರಾಂತಿ ಪಡೆದಿರುವ ಭಾರತೀಯ ಆಟಗಾರರು ರಾಜ್ಕೋಟ್ಗೆ ಆಗಮಿಸಿದ್ದು, ಅಭ್ಯಾಸ ಪ್ರಾರಂಭಿಸಿದ್ದಾರೆ.
ಇಂಗ್ಲೆಂಡ್ ಆಟಗಾರರು ಕೂಡಾ ಅಬು ಧಾಬಿಯಿಂದ ರಾಜ್ಕೋಟ್ಗೆ ಮರಳಿದ್ದಾರೆ. 3ನೇ ಪಂದ್ಯ ಫೆ.15ರಿಂದ ಆರಂಭಗೊಳ್ಳಲಿದೆ.