ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು77ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಶಿಪ್ ಮಂಗಳವಾರದಿಂದ ಮಂಗಳೂರಿನಲ್ಲಿ ಆರಂಭಗೊಳ್ಳಲಿದೆ. ಇದೇ ಮೊದಲ ಬಾರಿ ರಾಷ್ಟ್ರೀಯ ಈಜು ಕೂಟಕ್ಕೆ ಮಂಗಳೂರು ಆತಿಥ್ಯ ವಹಿಸಲಿದೆ.ನಗರದ ಎಮ್ಮೆಕೆರೆ ಈಜು ಕೇಂದ್ರದಲ್ಲಿ 4 ದಿನಗಳ ಕಾಲ ಕೂಟ ನಡೆಯಲಿದ್ದು. ಸೆ.13ರಂದು ಮುಕ್ತಾಯಗೊಳ್ಳಲಿದೆ. 31 ರಾಜ್ಯಗಳ 500ಕ್ಕೂ ಹೆಚ್ಚು ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ. 2 ಬಾರಿ ಒಲಿಂಪಿಯನ್ ಶ್ರೀಹರಿ ನಟರಾಜ್ ಜೊತೆಗೆ ಅನೀಶ್ ಗೌಡ, ಲಿಖಿತ್ ಎಸ್.ಪಿ. ಸೇರಿ ಕರ್ನಾಟಕದ ಪ್ರಮುಖರು ಭಾಗವಹಿಸಲಿದ್ದಾರೆ. ದೇಶದ ವಿವಿಧ ಕಡೆಗಳ ತಾರಾ ಈಜುಪಟುಗಳು ಕೂಡಾ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಈಜು ಕೂಟಕ್ಕೆ ಕೊನೆ ಬಾರಿ ಕರ್ನಾಟಕ ಆತಿಥ್ಯ ವಹಿಸಿದ್ದು 2021ರಲ್ಲಿ. ಬೆಂಗಳೂರಿನಲ್ಲಿ ಸ್ಪರ್ಧೆಗಳು ನಡೆದಿದ್ದವು. ಕಳೆದ ವರ್ಷ ಹೈದರಾಬಾದ್ನಲ್ಲಿ ಚಾಂಪಿಯನ್ಶಿಪ್ ನಡೆದಿತ್ತು. ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.ವಿಶ್ವ ಕಿವುಡರ ಶೂಟಿಂಗ್: 21 ಪದಕ ಗೆದ್ದ ಭಾರತ
ಹ್ಯಾನೋವರ್(ಜರ್ಮನಿ): ಇಲ್ಲಿ ನಡೆದ ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತ 7 ಚಿನ್ನ ಸೇರಿ 21 ಪದಕಗಳನ್ನು ಗೆದ್ದಿದೆ. ಭಾರತಕ್ಕೆ ಕೂಟದಲ್ಲಿ 7 ಬೆಳ್ಳಿ ಹಾಗೂ 7 ಕಂಚಿನ ಪದಕಗಳೂ ಲಭಿಸಿದ್ದು, ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉಕ್ರೇನ್ 7 ಚಿನ್ನ, 5 ಬೆಳ್ಳಿ ಹಾಗೂ 6 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರೆ, ಆತಿಥೇಯ ಜರ್ಮನಿ 2 ಚಿನ್ನ, 1 ಬೆಳ್ಳಿ ಹಾಗೂ 1 ಕಂಚಿನೊಂದಿಗೆ 3ನೇ ಸ್ಥಾನ ಪಡೆದುಕೊಂಡಿತು. ಕೂಟದಲ್ಲಿ ಭಾರತ 13 ಶೂಟರ್ಗಳು ಪಾಲ್ಗೊಂಡಿದ್ದು, 16 ವಿಭಾಗಗಳ ಪೈಕಿ 15ರಲ್ಲಿ ಸ್ಪರ್ಧಿಸಿದ್ದಾರೆ. ಒಟ್ಟಾರೆ 16 ದೇಶಗಳ 70ರಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು.