ದುಲೀಪ್‌ ಟ್ರೋಫಿ ಕ್ರಿಕೆಟ್‌: ಭಾರತ ‘ಎ’ ತಂಡಕ್ಕೆ ಕನ್ನಡಿಗ ಮಯಾಂಕ್‌ ನಾಯಕ

| Published : Sep 10 2024, 01:36 AM IST

ಸಾರಾಂಶ

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿದ್ದ ‘ಬಿ’ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ‘ಎ’ ತಂಡಕ್ಕೆ ಶುಭ್‌ಮನ್‌ ಗಿಲ್‌ ನಾಯಕರಾಗಿದ್ದರು. ಅವರು ಭಾರತ ತಂಡ ಸೇರಿಕೊಳ್ಳಲಿರುವ ಕಾರಣ, ಮಯಾಂಕ್‌ಗೆ ಹೊಣೆ ನೀಡಲಾಗಿದೆ.

ಅನಂತಪುರ(ಆಂಧ್ರಪ್ರದೇಶ): ಬಾಂಗ್ಲಾದೇಶ ವಿರುದ್ಧ ಸರಣಿಗೆ ಶುಭ್‌ಮನ್‌ ಗಿಲ್‌ ಭಾರತ ತಂಡಕ್ಕೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌ನ ಭಾರತ ‘ಎ’ ತಂಡಕ್ಕೆ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ನಾಯಕನಾಗಿ ನೇಮಕಗೊಂಡಿದ್ದಾರೆ. ಭಾರತ ‘ಡಿ’ ತಂಡದ ವಿರುದ್ಧ ಸೆ.12ರಿಂದ ಪಂದ್ಯ ಆರಂಭಗೊಳ್ಳಲಿದೆ. ಬೆಂಗಳೂರಿನಲ್ಲಿ ನಡೆದಿದ್ದ ‘ಬಿ’ ತಂಡದ ವಿರುದ್ಧದ ಮೊದಲ ಪಂದ್ಯದಲ್ಲಿ ‘ಎ’ ತಂಡಕ್ಕೆ ಗಿಲ್‌ ನಾಯಕರಾಗಿದ್ದರು. ಅವರು ಭಾರತ ತಂಡ ಸೇರಿಕೊಳ್ಳಲಿರುವ ಕಾರಣ, ಮಯಾಂಕ್‌ಗೆ ಹೊಣೆ ನೀಡಲಾಗಿದೆ. ಇದೇ ವೇಳೆ ‘ಎ’ ತಂಡದಲ್ಲಿದ್ದ ಕೆ.ಎಲ್‌.ರಾಹುಲ್‌, ಧ್ರುವ್‌ ಜುರೆಲ್‌, ಆಕಾಶ್‌ದೀಪ್, ಕುಲ್ದೀಪ್‌ ಯಾದವ್‌ ಕೂಡಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರ ಬದಲು ಪ್ರಸಿದ್ಧ್‌ ಕೃಷ್ಣ, ಅಕ್ಷಯ್‌ ನಾರಂಗ್‌, ಶೇಖ್‌ ರಶೀದ್‌, ಶಮ್ಸ್‌ ಮುಲಾನಿ ‘ಎ’ ತಂಡ ಸೇರ್ಪಡೆಗೊಂಡಿದ್ದಾರೆ. ಇತರ 3 ತಂಡಗಳಿಗೂ ಕೆಲ ಬದಲಿ ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.ಕಿವೀಸ್‌, ಆಫ್ಘನ್‌ ಟೆಸ್ಟ್‌ನ ಮೊದಲ ದಿನ ಮಳೆಗೆ ಬಲಿ

ಗ್ರೇಟರ್‌ ನೋಯ್ಡಾ: ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದ ಕಾರಣ ನ್ಯೂಜಿಲೆಂಡ್‌ ಹಾಗೂ ಅಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್‌ ಪಂದ್ಯದ ಮೊದಲ ದಿನದಾಟ ರದ್ದುಗೊಂಡಿದೆ. ನೋಯ್ಡಾ ಸುತ್ತಮುತ್ತ ಕಳೆದ ಒಂದು ವಾರದಿಂದ ಭಾರೀ ಮಳೆಯಾಗಿದೆ.ಸೋಮವಾರ ನಗರದಲ್ಲಿ ಮಳೆಯಾಗದಿದ್ದರೂ, ಮೈದಾನ ಒದ್ದೆಯಾಗಿಯೇ ಇತ್ತು. ಮ್ಯಾಚ್‌ ರೆಫ್ರಿಗಳು ಹಲವು ಬಾರಿ ಮೈದಾನ ಪರಿಶೀಲಿಸಿದರೂ ಪಂದ್ಯ ನಡೆಸಲು ಸೂಕ್ತವಲ್ಲದ ಕಾರಣ ಮೊದಲ ದಿನದಾಟ ರದ್ದುಗೊಳಿಸಲು ನಿರ್ಧರಿಸಿದರು. ಕ್ರೀಡಾಂಗಣದ ಡ್ರೈನೇಜ್‌ ವ್ಯವಸ್ಥೆ ಸಮರ್ಪಕವಲ್ಲದ ಕಾರಣ ಇನ್ನೂ ಒಂದೆರಡು ದಿನ ಪಂದ್ಯ ಆರಂಭಗೊಳ್ಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.