ಮೈದಾನದಲ್ಲೇ ಕುಸಿದು ಬಿದ್ದು ಕರ್ನಾಟಕದ ಕ್ರಿಕೆಟಿಗ ಹೊಯ್ಸಳ ನಿಧನ

| Published : Feb 24 2024, 02:34 AM IST / Updated: Feb 24 2024, 12:29 PM IST

Hoysala

ಸಾರಾಂಶ

ಹೊಯ್ಸಳ ಅವರು ಈ ಮೊದಲು ಕರ್ನಾಟಕ ತಂಡವನ್ನೂ ಪ್ರತಿನಿಧಿಸಿದ್ದಾರೆ. ಅವರು ಅಂಡರ್‌-15 ವಿಭಾಗದಲ್ಲಿ ರಾಜ್ಯದ ಪರ ಆಡಿದ್ದರು. ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌)ನಲ್ಲಿ ಶಿವಮೊಗ್ಗ, ಬಳ್ಳಾರಿ ಟಸ್ಕರ್ಸ್ ತಂಡದ ಪರ ಕಣಕ್ಕಿಳಿದಿದ್ದಾರೆ.

ಬೆಂಗಳೂರು: ಆಡಿಟ್‌ ಮತ್ತು ಅಕೌಂಟ್ಸ್‌ ಇಲಾಖೆಯ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯದ ವೇಳೆ ಕರ್ನಾಟಕ ತಂಡದ ಆಟಗಾರ ಕೆ.ಹೊಯ್ಸಳ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಇಲ್ಲಿನ ಆರ್‌ಎಸ್‌ಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದ ಹೊಯ್ಸಳ ಅವರು ತಮಿಳುನಾಡು ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. 

ಪಂದ್ಯದ ಬಳಿಕ ಮೈದಾನದಲ್ಲಿ ತಂಡದ ಜೊತೆ ನಿಂತು ಸಲಹೆ ಕೇಳುತ್ತಿದ್ದ ಕೆ ಹೊಯ್ಸಳ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ವೈದ್ಯರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತುರ್ತು ಚಿಕಿತ್ಸೆ ನೀಡಿದ್ದಾರೆ. 

ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಮೃತಪಟ್ಟಿದ್ದಾರೆ.

ಮಧ್ಯಮ ಕ್ರಮಾಂಕದ ವೇಗಿಯಾಗಿರುವ ಹೊಯ್ಸಳ ಅವರು ಅಂಡರ್‌-15 ವಿಭಾಗದಲ್ಲಿ ಕರ್ನಾಟಕ ತಂಡದ ಪರ ಆಡಿದ್ದಾರೆ. 

ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌)ನಲ್ಲಿ ಶಿವಮೊಗ್ಗ, ಬಳ್ಳಾರಿ ಟಸ್ಕರ್ಸ್‌ ಪರ ಆಡಿದ್ದರು.

ಕಿವೀಸ್‌ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ

ಆಕ್ಲಂಡ್‌: ನ್ಯೂಜಿಲೆಂಡ್‌ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಕೈವಶ ಪಡಿಸಿಕೊಂಡಿದೆ. ಶುಕ್ರವಾರ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 72 ರನ್‌ ಜಯಗಳಿಸಿತು. 

ಮೊದಲು ಬ್ಯಾಟ್‌ ಮಾಡಿದ ಆಸೀಸ್‌, ಟ್ರ್ಯಾವಿಸ್‌ ಹೆಡ್‌(22 ಎಸೆತಗಳಲ್ಲಿ 45) ಆರ್ಭಟದ ಹೊರತಾಗಿಯೂ ಕೊನೆಯಲ್ಲಿ ಮುಗ್ಗರಿಸಿ 19.5 ಓವರ್‌ಗಳಲ್ಲಿ 174ಕ್ಕೆ ಆಲೌಟಾಯಿತು. ದೊಡ್ಡ ಗುರಿ ಬೆನ್ನತ್ತಿದ ಕಿವೀಸ್‌ 17 ಓವರ್‌ಗಳಲ್ಲಿ 102 ರನ್‌ಗೆ ಸರ್ವಪತನ ಕಂಡಿತು.