17ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಜಿ.ಆರ್‌.ವಿಶ್ವನಾಥ್‌, ವಿಜಯ್ ಭಾರದ್ವಾಜ್‌, ವಿನಯ್‌ ಕುಮಾರ್‌, ಜಿ.ಕೆ.ಅನಿಲ್‌ ಕುಮಾರ್‌, ಬಿ.ಅಖಿಲ್‌, ಪವನ್‌ ದೇಶಪಾಂಡೆ, ಎನ್‌.ಸಿ.ಅಯ್ಯಪ್ಪ, ಜೆ.ಸುಚಿತ್‌ ವೀಕ್ಷಕ ವಿವರಣೆ ನೀಡಲಿದ್ದಾರೆ.

ಮುಂಬೈ: 17ನೇ ಆವೃತ್ತಿಯ ಐಪಿಎಲ್‌ ಪಂದ್ಯಗಳನ್ನು ಟೀವಿಯಲ್ಲಿ ಪ್ರಸಾರ ಮಾಡಲಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯಲ್ಲಿ ಕರ್ನಾಟಕದ ತಾರಾ ಕ್ರಿಕೆಟಿಗರು ಕನ್ನಡದಲ್ಲಿ ವೀಕ್ಷಕ ವಿವರಣೆ ನೀಡಲಿದ್ದಾರೆ.

ಕನ್ನಡ, ತೆಲುಗು, ತಮಿಳು ಸೇರಿ ಅನೇಕ ಭಾಷೆಗಳಲ್ಲಿ ಕಾಮೆಂಟರಿ ಇರಲಿದೆ. ದಿಗ್ಗಜ ಕ್ರಿಕೆಟಿಗ ಜಿ.ಆರ್‌.ವಿಶ್ವನಾಥ್‌ ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿಯ ಕಾಮೆಂಟರಿ ತಂಡದಲ್ಲಿ ಇರಲಿದ್ದು, ಮಾಜಿ ಕ್ರಿಕೆಟಿಗರಾದ ವಿಜಯ್‌ ಭಾರದ್ವಾಜ್, ವಿನಯ್‌ ಕುಮಾರ್‌, ಜಿ.ಕೆ.ಅನಿಲ್‌ ಕುಮಾರ್‌, ಬಾಲಚಂದ್ರ ಅಖಿಲ್‌, ಪವನ್‌ ದೇಶಪಾಂಡೆ, ಎನ್‌.ಸಿ.ಅಯ್ಯಪ್ಪ ಜೊತೆ ಕ್ರಿಕೆಟ್‌ನಲ್ಲಿ ಇನ್ನೂ ಸಕ್ರಿಯರಾಗಿರುವ ಜೆ.ಸುಚಿತ್‌ ಸಹ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಾ.22ರಿಂದ ಐಪಿಎಲ್‌ 17ನೇ ಆವೃತ್ತಿ ಆರಂಭಗೊಳ್ಳಲಿದ್ದು, ಪಂದ್ಯಗಳನ್ನು ಟೀವಿಯಲ್ಲಿ ಪ್ರಸಾರ ಮಾಡಲು ಸ್ಟಾರ್‌ ಸ್ಪೋರ್ಟ್ಸ್‌ ಸಂಸ್ಥೆ ಹಕ್ಕು ಪಡೆದಿದೆ. ಹಲವು ವರ್ಷಗಳಿಂದ ಕನ್ನಡದಲ್ಲಿ ಕಾಮೆಂಟ್ರಿ ನಡೆಸಲಾಗುತ್ತಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.