ಸಾರಾಂಶ
ಮಡಿಕೇರಿ: ಕುಂಡ್ಯೋಳಂಡ ಹಾಕಿ ಕಾರ್ನಿವಲ್ನ ಮೊದಲ ಪಂದ್ಯದಲ್ಲಿ ಹಂಚೆಟ್ಟಿರ ತಂಡವು ಪೆಮ್ಮಡಿಯಂಡ ತಂಡದ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಪೆಮ್ಮಡಿಯಂಡ ತಂಡ ಮೊದಲ ಪಂದ್ಯದಲ್ಲಿಯೇ ಪರಾವಗೊಂಡು ಟೂರ್ನಿಯಿಂದ ಹೊರಬಿತ್ತು.
ಹಂಚೆಟ್ಟಿರ ತಂಡದ ಪರವಾಗಿ ಬಿಪಿನ್ ಬೋಪಣ್ಣ 10ನೇ ನಿಮಿಷಕ್ಕೆ ಒಂದು ಗೋಲ್ ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಇದಕ್ಕೂ ಮೊದಲು ಇಂಡಿಯನ್ ನೇವಿ ಮತ್ತು ಕೂರ್ಗ್ 11 ಪುರುಷರ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 2 ಗೋಲ್ ದಾಖಲಿಸಿ ಸಮಬಲ ಸಾಧಿಸಿದವು.
ಆರಂಭದಲ್ಲಿ ಕೂರ್ಕ್ 11 ತಂಡ 2 ಗೋಲುಗಳನ್ನು ಬಾರಿಸಿ ಮುನ್ನಡೆ ಸಾಧಿಸಿತು. ಕೊನೆಯವರೆಗೂ ರಕ್ಷಣಾತ್ಮಕ ಆಟವಾಡಿದ ನೇವಿ ತಂಡ ದ್ವೀತೀಯಾರ್ಧದ ಬಳಿಕ 2 ಗೋಲುಗಳನ್ನು ಗಳಿಸುವ ಮೂಲಕ ಸಮಬಲ ಸಾಧಿಸಿತು. ಕೂರ್ಗ್ 11 ತಂಡದ ಪರವಾಗಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆಟವಾಡಿ ಗಮನ ಸೆಳೆದರು. ನೇವಿ ಮತ್ತು ಕೂರ್ಗ್ 11 ಪಂದ್ಯದ ಮೊದಲು ಸಾಯಿ ಮಡಿಕೇರಿ ಬಾಲಕಿಯರು ಮತ್ತು ಕೂರ್ಗ್ 11 ಬಾಲಕಿಯರ ತಂಡಗಳ ನಡುವಿನ ಪ್ರದರ್ಶನ ಪಂದ್ಯದಲ್ಲಿ ಸಾಯಿ ಮಡಿಕೇರಿ ಬಾಲಕಿಯರ ತಂಡವು ಕೂರ್ಗ್ 11 ತಂಡವನ್ನು 2- 0 ಗೋಲುಗಳ ಅಂತರದಿಂದ ಮಣಿಸಿತು.