ಸಾರಾಂಶ
ನವದೆಹಲಿ: ಭಾರತ ತಂಡ ಮಹತ್ವದ ಆಸ್ಟ್ರೇಲಿಯಾ ಪ್ರವಾಸವನ್ನು ಸರಣಿ ಸೋಲಿನೊಂದಿಗೆ ಮುಗಿಸಿದೆ ಎನ್ನುವುದಕ್ಕಿಂತ ಆಯ್ಕೆ ಗೊಂದಲದಲ್ಲೇ ಕೊನೆಗೊಳಿಸಿದೆ ಎಂಬುದು ಹೆಚ್ಚು ಸೂಕ್ತವಾಗಬಹುದೇನೋ. ಸರಣಿಯ ಮೊದಲ ಪಂದ್ಯದಿಂದ ಕೊನೆ ಪಂದ್ಯದ ವರೆಗೂ ಭಾರತ ಎದುರಿಸಿದ ಪ್ರಮುಖ ಸಮಸ್ಯೆ ತಂಡದ ಆಯ್ಕೆ ಗೊಂದಲ.
ಇದುವೇ ತಂಡವನ್ನು ಸರಣಿ ಸೋಲುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದರೆ ತಪ್ಪಾಗದು.ಆದರೆ ತಂಡದ ಆಯ್ಕೆ ಗೊಂದಲಕ್ಕೆ ಬೇಗನೇ ಪರಿಹಾರ ಸಿಗಬಹುದು ಎಂಬ ಭರವಸೆ ಕ್ರೀಡಾ ತಜ್ಞರು, ಅಭಿಮಾನಿಗಳಲಿಲ್ಲ. ಯಾಕೆಂದರೆ ಇನ್ನು ಭಾರತಕ್ಕೆ ಟೆಸ್ಟ್ ಸರಣಿ ಇರುವುದು ಜೂನ್ನಲ್ಲಿ. ಅಂದರೆ 6 ತಿಂಗಳು ಬಿಡುವು. ಭಾರತೀಯ ಆಟಗಾರರು ಇನ್ನು ತವರಿನ ಟಿ20, ಏಕದಿನ ಸರಣಿ, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಪಿಎಲ್ನಲ್ಲಿ ನಿರತರಾಗಲಿದ್ದಾರೆ. ಇದರ ನಡುವೆಯೇ ಬಿಸಿಸಿಐ ಹಾಗೂ ತಂಡದ ಆಯ್ಕೆ ಸಮಿತಿ ಬಲಿಷ್ಠ ಟೆಸ್ಟ್ ತಂಡ ಕಟ್ಟಬೇಕಾದ ಅನಿವಾರ್ಯತೆಯಿದೆ.
3ನೇ ವೇಗಿಯ ಆಯ್ಕೆ ಗೊಂದಲ
ಆಸ್ಟ್ರೇಲಿಯಾದಲ್ಲಿ ಭಾರತ 3ನೇ ವೇಗಿ ಆಯ್ಕೆಯಲ್ಲಿ ಎಡವಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಬೂಮ್ರಾ, ಸಿರಾಜ್ ಎಲ್ಲಾ ಪಂದ್ಯ ಆಡಿದ್ದಾರೆ. 3ನೇ ವೇಗಿಯಾಗಿ ಮೊದಲೆರಡು ಪಂದ್ಯದಲ್ಲಿ ಅನನುಭವಿ ಹರ್ಷಿತ್ ರಾಣಾರನ್ನು ಕಣಕ್ಕಿಳಿಸಲಾಯಿತು. ಆರಂಭಿಕ ಸ್ಪೆಲ್ನಲ್ಲಿ ಹರ್ಷಿತ್ ನಿಖರ ದಾಳಿ ಸಂಘಟಿಸಿದರೂ, ಪಂದ್ಯ ಸಾಗಿದಂತೆ ಅವರ ವೇಗ ಕಡಿಮೆಯಾಗುತ್ತಿತ್ತು. ಹೀಗಾಗಿ 3 ಹಾಗೂ 4ನೇ ಪಂದ್ಯದಲ್ಲಿ ಆಕಾಶ್ದೀಪ್ರನ್ನು ಆಡಿಸಲಾಯಿತು. ಆಕಾಶ್ 2 ಪಂದ್ಯದಲ್ಲಿ 5 ವಿಕೆಟ್ ಕಿತ್ತರು. ಗಾಯದಿಂದಾಗಿ 5ನೇ ಪಂದ್ಯದಲ್ಲಿ ಅವರ ಬದಲು ಪ್ರಸಿದ್ಧ್ ಕೃಷ್ಣರನ್ನು ಕಣಕ್ಕಿಳಿಸಲಾಯಿತು.
ತಜ್ಞ ಬ್ಯಾಟರ್ ಆಯ್ಕೆ ಎಡವಟ್ಟು
ಸರಣಿಯಲ್ಲಿ ತಜ್ಞ ಬ್ಯಾಟರ್ ಆಯ್ಕೆಯಲ್ಲೂ ಭಾರತಕ್ಕೆ ಗೊಂದಲ ಎದುರಾಯಿತು. 1, 4 ಮತ್ತು 5ನೇ ಪಂದ್ಯಗಳಲ್ಲಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ರನ್ನು ಆಡಿಸಿದರೂ, ಬಳಸಿದ್ದು ಬ್ಯಾಟರ್ ಆಗಿ ಮಾತ್ರ. ಅವರಿಗೆ ಬೌಲಿಂಗ್ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ತಂಡಕ್ಕೆ ತಜ್ಞ ಬ್ಯಾಟರ್ ಅಗತ್ಯವಿದ್ದಿದ್ದರೆ ಸರ್ಫರಾಜ್ ಖಾನ್, ಧ್ರುವ್ ಜುರೆಲ್, ಅಭಿಮನ್ಯು ಈಶ್ವರನ್ ಆಯ್ಕೆಗಳಿದ್ದವು.
ರೋಹಿತ್ ಬ್ಯಾಟಿಂಗ್ ಕ್ರಮಾಂಕ
ಸರಣಿಯುದ್ದಕ್ಕೂ ರೋಹಿತ್ ಬ್ಯಾಟಿಂಗ್ ಕ್ರಮಾಂಕದ್ದೇ ಹೆಚ್ಚಿನ ಚರ್ಚೆಯಾಯಿತು. ರೋಹಿತ್ ಅನುಪಸ್ಥಿತಿಯಲ್ಲಿ ಆರಂಭಿಕ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಆರಂಭಿಕನಾಗಿ ಕಣಕ್ಕಿಳಿದರು. ಹೀಗಾಗಿ 2 ಮತ್ತು 3ನೇ ಪಂದ್ಯದಲ್ಲಿ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾಯಿತು. 4ನೇ ಪಂದ್ಯದಲ್ಲಿ ರೋಹಿತ್ ಮತ್ತೆ ಆರಂಭಿಕನಾಗಿ ಆಡಿದರು. ಆದರೆ ಯಾವ ಪಂದ್ಯ ದಲ್ಲೂ ಮಿಂಚಲಿಲ್ಲ. ಪದೇ ಪದೇ ಕ್ರಮಾಂಕ ಬದಲಾಗುತ್ತಿದ್ದರಿಂದ ರಾಹುಲ್ ಕೂಡಾ ಲಯ ಕಂಡುಕೊಳ್ಳಲು ಪರದಾಡಿದರು.
ಗಿಲ್ ಆಯ್ಕೆಯಲ್ಲಿ ಸಿಗದ ಸ್ಪಷ್ಟತೆ
ಭಾರತಕ್ಕೆ ಗಿಲ್ ಆಯ್ಕೆ ವಿಚಾರದಲ್ಲಿ ಕೊನೆವರೆಗೂ ಸ್ಪಷ್ಟತೆ ಸಿಗಲಿಲ್ಲ. ಗಾಯದಿಂದಾಗಿ ಗಿಲ್ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಬಳಿಕ 2 ಪಂದ್ಯಗಳಲ್ಲಿ ಆಡಿಸಿ, 4ನೇ ಪಂದ್ಯದಲ್ಲಿ ಹೊರಗಿಡಲಾಯಿತು. ಕೊನೆ ಪಂದ್ಯದಲ್ಲಿ ಅವರು ಮತ್ತೆ ತಂಡದಲ್ಲಿ ಕಾಣಿಸಿಕೊಂಡರು. ಅವರನ್ನು ಆಡಿಸುಬೇಕೇ, ಹೊರಗಿಡಬೇಕೇ ಎಂಬುದೇ ತಂಡಕ್ಕೆ ತಲೆನೋವಾಗಿತ್ತು. ಕೊನೆಗೂ ಅದಕ್ಕೆ ಉತ್ತರ ಕಂಡುಕೊಳ್ಳಲಾಗಲಿಲ್ಲ.
ತಂಡದ ಮುಂದಿದೆ ಬೆಟ್ಟದಷ್ಟು ಸವಾಲು
ಸಮರ್ಥ ಟೆಸ್ಟ್ ತಂಡ ಕಟ್ಟುವುದು ಟೀಂ ಇಂಡಿಯಾದ ತುರ್ತು ಅಗತ್ಯ. ಆದರೆ ಅದು ಅಷ್ಟು ಸುಲಭದ್ದಲ್ಲ. ಬಲಿಷ್ಠ ತಂಡ ಕಟ್ಟಲು ತಂಡದ ಮುಂದೆ ಬೆಟ್ಟದಷ್ಟು ಸವಾಲುಗಳಿವೆ.
1. ರೋಹಿತ್, ಕೊಹ್ಲಿ ಸ್ಥಾನ ತುಂಬಬಲ್ಲ ಆಟಗಾರರ ಹುಡುಕಾಟರೋಹಿತ್, ಕೊಹ್ಲಿ ನಿವೃತ್ತಿ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರಿಬ್ಬರ ಸ್ಥಾನ ತುಂಬುವುದು ಅಂದುಕೊಂಡಷ್ಟು ಸುಲಭವಲ್ಲ. ಆದರೆ ಅದರ ಅಗತ್ಯವಿದೆ. ಅವರಷ್ಟೇ ಸಮರ್ಥ ಆಟಗಾರರನ್ನು ಹುಡುಕುವುದು ಬಿಸಿಸಿಐ ಮುಂದಿರುವ ಪ್ರಮುಖ ಸವಾಲು.
2. ಶುಭ್ಮನ್ ಗಿಲ್ ಸ್ಥಾನಕ್ಕೆ ಸೂಕ್ತ ಆಟಗಾರನ ಆಯ್ಕೆಗಿಲ್ ಆಯ್ಕೆಯೇ ಗೊಂದಲಕಾರಿ. ಅವರನ್ನು ಮುಂದುವರಿಸುವುದಿದ್ದರೆ ಸೂಕ್ತ ಅವಕಾಶ ಅಗತ್ಯ. ಕೆಲ ಪಂದ್ಯಗಳಲ್ಲಿ ಆಡಿಸಿ, ಕೈ ಬಿಡುವುದಕ್ಕಿಂತ ಅವರ ಬದಲು ಸಮರ್ಥ ಆಟಗಾರರನ್ನು ಹುಡುಕಬೇಕು. ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ದೇವದತ್ ಆಯ್ಕೆ ತಂಡದ ಮುಂದಿದೆ.
3. ವೇಗಿ ಜಸ್ಪ್ರೀತ್ ಬೂಮ್ರಾ ಹೊರೆ ತಗ್ಗಿಸಬಲ್ಲ ವೇಗಿಬೂಮ್ರಾ ಭಾರತೀಯ ಬೌಲಿಂಗ್ನಲ್ಲೀಗ ಒನ್ ಮ್ಯಾನ್ ಆರ್ಮಿ ಇದ್ದಂತೆ. ಅವರಿಗೆ ಇತರರಿಂದ ಬೆಂಬಲ ಸಿಗುತ್ತಿಲ್ಲ, ಸಿರಾಜ್ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿಲ್ಲ. ಆಕಾಶ್ದೀಪ್, ಹರ್ಷಿತ್, ಮುಕೇಶ್, ಪ್ರಸಿದ್ಧ್ ಸೇರಿ ಪ್ರತಿಭಾವಂತ ವೇಗಿಗಳಿಗೆ ಸೂಕ್ತ ಅವಕಾಶ ನೀಡಬೇಕಿದೆ.
4. ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಆರಂಭಿಕ ಆಟಗಾರರು ವಿಫಲರಾದರೆ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ. ಮಧ್ಯಮ, ಕೆಳ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಂಡ ಹಲವು ವರ್ಷಗಳಿಂದ ಪರದಾಡುತ್ತಿದೆ. ನಿತೀಶ್ ರೆಡ್ಡಿ ಈ ಸಮಸ್ಯೆ ನೀಗಿಸುವ ನಿರೀಕ್ಷೆಯಿದ್ದರೂ, ಇನ್ನೂ ಕೆಲ ಆಯ್ಕೆಗಳ ಅಗತ್ಯ ತಂಡಕ್ಕಿದೆ.5. ಬೂಮ್ರಾ ಹಾಗೂ ಇತರ ವೇಗಿಗಳ ಕಾರ್ಯದೊತ್ತಡ2023ರಿಂದ ಸಿರಾಜ್ 683.
5, ಬೂಮ್ರಾ 560.1 ಓವರ್ ಬೌಲ್ ಮಾಡಿದ್ದಾರೆ. ಬೂಮ್ರಾ ನಿರಂತರ ಕ್ರಿಕೆಟ್ನಿಂದಾಗಿ ಪದೇ ಪದೇ ಗಾಯಗೊಳ್ಳುತ್ತಿದ್ದಾರೆ. ಸಿರಾಜ್ ಬಿಡುವಿಲ್ಲದೆ ಆಡುತ್ತಿದ್ದಾರೆ. ಹೀಗಾಗಿ ವೇಗಿಗಳ ವಿಚಾರದಲ್ಲಿ ಹಲವು ಆಯ್ಕೆಗಳು ತಂಡಕ್ಕೆ ಅಗತ್ಯವಿದೆ. ದೇಸಿ ಕ್ರಿಕೆಟ್ನ ಪ್ರತಿಭಾವಂತ ವೇಗಿಗಳತ್ತ ಗಮನಹರಿಸಬೇಕಿದೆ.
6. ಬೂಮ್ರ ನಾಯಕನಾದರೆ ಸೂಕ್ತ ಉಪನಾಯಕನ ಅಗತ್ಯತೆರೋಹಿತ್ ಇಲ್ಲದಿದ್ದಾಗ ಬೂಮ್ರಾ ಭಾರತದ ಹಂಗಾಮಿ ನಾಯಕ. ಅವರೇ ಮುಂದಿನ ಕಾಯಂ ನಾಯಕನಾಗಬಹುದು. ಹೀಗಾದರೆ ಉಪನಾಯಕತ್ವ ಯಾರಿಗೆ ನೀಡಬೇಕು ಎಂಬ ತಲೆಬಿಸಿ ಎದುರಾಗುತ್ತದೆ. ಕೆ.ಎಲ್.ರಾಹುಲ್, ರಿಷಭ್ ಪಂತ್ ತಂಡದ ಮುಂದಿರುವ ಆಯ್ಕೆಗಳು.